ಹುಬ್ಬಳ್ಳಿ: ರಾಜಕೀಯ ಪುನರ್ಜನ್ಮ ಬಯಸಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅದಕ್ಕಾಗಿ ಹುಬ್ಬಳ್ಳಿಯನ್ನೇ `ಚಿಮ್ಮು ಹಲಗೆ~ಯನ್ನಾಗಿ ಮಾಡಿಕೊಳ್ಳಲು ಬಯಸಿದ್ದಾರೆ. ಇದೇ 11ರ ಶಕ್ತಿ ಪ್ರದರ್ಶನಕ್ಕೆ ಅವರ ಬೆಂಬಲಿಗರು ತಮ್ಮ ಯತ್ನ ಆರಂಭಿಸಿದ್ದಾರೆ.
ಯಡಿಯೂರಪ್ಪ ಅವರ ಪ್ರಬಲ ಬೆಂಬಲಿಗರಾದ ಮಾಜಿ ಶಾಸಕರೊಬ್ಬರು, `ಸಮಾವೇಶಕ್ಕೆ ಈಗಾಗಲೇ ತಯಾರಿ ಆರಂಭಿಸಿದ್ದೇವೆ. ಲಕ್ಷಾಂತರ ಜನರನ್ನು ಸೇರಿಸಿ ನಮ್ಮ ನಾಯಕನ ಜನ್ಮ ದಿನವನ್ನು ಅದ್ದೂರಿಯಾಗಿ ಆಚರಿಸುತ್ತೇವೆ~ ಎಂದು ಹೇಳಿದರೆ, ಮಹಾನಗರ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಮಹೇಶ ಟೆಂಗಿನಕಾಯಿ `ಸಮಾವೇಶದ ಸಂಬಂಧ ಅಧಿಕೃತ ಸಂದೇಶ ಬಾರದ ಹೊರತು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ~ ಎಂದು ತಿಳಿಸುತ್ತಾರೆ. ಜಿಲ್ಲೆಯ ಇತರ ಮುಖಂಡರ ಅಭಿಪ್ರಾಯವೂ ಇದೇ ಆಗಿದೆ.
ಆರ್ಎಸ್ಎಸ್ ಶಿಬಿರ ನಡೆದ ಸ್ಥಳದಲ್ಲೇ ಸಮಾವೇಶ ನಡೆಸುವ ಮೂಲಕ ಹೈಕಮಾಂಡ್ ಮುಂದೆ ಶಕ್ತಿ ಪ್ರದರ್ಶನ ನಡೆಸಲು ಬೆಂಬಲಿಗರು ಉತ್ಸುಕರಾಗಿದ್ದಾರೆ. ಆ ಸ್ಥಳ ಅಲಭ್ಯವಾದರೆ ನೆಹರು ಕ್ರೀಡಾಂಗಣದಲ್ಲಿ ಅದ್ದೂರಿ ಜನ್ಮ ದಿನಾಚರಣೆಗೆ ವೇದಿಕೆ ಸಿದ್ಧವಾಗಲಿದೆ ಎಂದು ಹೇಳಲಾಗಿದೆ.
ಮುಂಚಿನಿಂದಲೂ ಬಿಎಸ್ವೈ ಅವರ ಗುಂಪಿನಲ್ಲಿ ಗುರುತಿಸಿಕೊಂಡಿರುವ ವಿಧಾನ ಪರಿಷತ್ ಸದಸ್ಯ ಮೋಹನ ಲಿಂಬಿಕಾಯಿ `ಸಮಾವೇಶದ ಸಮಗ್ರ ರೂಪ-ರೇಷೆ ಕುರಿತು ನನಗಿನ್ನೂ ಮಾಹಿತಿ ಇಲ್ಲ. ಆದರೆ, ಕಾರ್ಯಕ್ರಮ ನಡೆಸುವ ಕುರಿತಂತೆ ಕೆಲವು ನಾಯಕರು ನನ್ನನ್ನು ಸಂಪರ್ಕಿಸಿದ್ದಾರೆ~ ಎಂದು ಸ್ಪಷ್ಟಪಡಿಸುತ್ತಾರೆ. `ಸಚಿವ ಜಗದೀಶ ಶೆಟ್ಟರ ಕೂಡ ಈ ವಿಷಯವಾಗಿ ನನ್ನೊಂದಿಗೆ ಮಾತನಾಡಿದ್ದಾರೆ.
ಶೀಘ್ರವೇ ಸಭೆ ನಡೆಸಿ ಸಮಾವೇಶದ ಸ್ವರೂಪವನ್ನು ನಿರ್ಧರಿಸುತ್ತೇವೆ~ ಎನ್ನುತ್ತಾರೆ. `ಈ ವಿಚಾರದಲ್ಲಿ ಯಾರೂ ಪಕ್ಷವನ್ನು ಸಂಪರ್ಕಿಸಿಲ್ಲ. ಈ ವಿಷಯವಾಗಿ ಪತ್ರಿಕೆಗಳಲ್ಲಿ ಓದಿ ಮಾತ್ರ ಗೊತ್ತು. ಅಧಿಕೃತ ಮಾಹಿತಿ ಬಂದ ಬಳಿಕ ಮುಂದಿನ ವಿಚಾರ~ ಎನ್ನುತ್ತಾರೆ ಸಂಸದ, ರಾಜ್ಯ ಬಿಜೆಪಿ ಘಟಕದ ಪ್ರಧಾನ ಕಾರ್ಯದರ್ಶಿ ಪ್ರಹ್ಲಾದ ಜೋಶಿ.
ಈ ವಿಷಯವಾಗಿ ಚರ್ಚಿಸಲು ಬಿಎಸ್ವೈ ಅವರ ಬೀಗರೂ ಆಗಿರುವ ಕುಂದಗೋಳ ಶಾಸಕ ಎಸ್.ಐ. ಚಿಕ್ಕನಗೌಡ್ರ ಈಗಾಗಲೇ ಬೆಂಗಳೂರಿಗೆ ತೆರಳಿದ್ದಾರೆ. ನಮ್ಮ ನಾಯಕನ ಜನ್ಮದಿನವನ್ನು ಹುಬ್ಬಳ್ಳಿಯಲ್ಲಿ ಆಚರಿಸಲು ಉತ್ಸುಕರಾಗಿದ್ದೇವೆ ಎಂದು ಹೇಳಿದರು.
ಈ ಮಧ್ಯೆ ಶೆಟ್ಟರ-ಜೋಶಿ ಜೋಡಿ ಯಾವ ನಿಲುವು ತಾಳುತ್ತದೆ ಎಂಬ ನಿರೀಕ್ಷೆಯಲ್ಲಿರುವ ಬಿಜೆಪಿ ಕಾರ್ಯ ಕರ್ತರ ಪಡೆ ತಟಸ್ಥವಾಗಿ ವರಿಷ್ಠರ ಸಂದೇಶಕ್ಕಾಗಿ ಕಾಯುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.