ಗುಲ್ಬರ್ಗ: ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಐತಿಹಾಸಿಕ ಕಾಲದಿಂದಲೂ ಗುಲಾಮಗಿರಿಯಲ್ಲಿ ನಲುಗುತ್ತಿದ್ದ ಜನರಿಗೆ ಕಾನೂನಾತ್ಮಕ ಅವಕಾಶಗಳನ್ನು ನಿರ್ಮಿಸುವುದರ ಜೊತೆಗೆ, ತಮ್ಮ ಜೀವಿತಾವಧಿಯ ಕೊನೆಯಲ್ಲಿ ಮನುಕುಲ ಉದ್ಧರಿಸುವ ಬುದ್ಧನ ಧರ್ಮ ಮಾರ್ಗ ತೋರಿಸಿದ್ದಾರೆ. ಹೀಗಾಗಿ ಎಲ್ಲರೂ ಬುದ್ಧನ ಧರ್ಮ ಅನುಸರಿಸೋಣ ಎಂದು ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಭಾನುವಾರ ಇಲ್ಲಿ ಸಲಹೆ ನೀಡಿದರು.
ಸಿದ್ಧಾರ್ಥ ವಿಹಾರ ಟ್ರಸ್ಟ್ ವತಿಯಿಂದ `ಬುದ್ಧ ವಿಹಾರ~ ಅಂಗಳದಲ್ಲಿ ಆಯೋಜಿಸಿದ್ದ `ಭಗವಾನ್ ಬುದ್ಧರ 2256ನೇ ವೈಶಾಖ ಬುದ್ಧ ಪೂರ್ಣಿಮಾ~ ಆಚರಣೆ ಸಮಾರಂಭದಲ್ಲಿ ಮಾತನಾಡಿದರು.
ಸುಖ, ಶಾಂತಿ, ನೆಮ್ಮದಿ ಕಾಣಲು ಬುದ್ಧನ ತತ್ವಗಳ ಮೊರೆ ಹೋಗುವುದು ಎಲ್ಲರಿಗೂ ಅನಿವಾರ್ಯ. ಪ್ರಪಂಚದ ಯಾವುದೇ ದೇಶದಲ್ಲಿ ಅಶಾಂತಿ ತಲೆದೋರಿದ ಸಂದರ್ಭದಲ್ಲೆಲ್ಲ ಬುದ್ಧ, ಬಸವಣ್ಣನ ವಿಚಾರಗಳ ಸ್ಮರಣೆ ನಡೆಯುತ್ತದೆ. ಆ ಮಹನೀಯರ ತತ್ವಗಳನ್ನು ಜನರು ಅಳವಡಿಸಿಕೊಳ್ಳದಿರುವುದು ವಿಷಾದದ ಸಂಗತಿಯಾಗಿದೆ ಎಂದರು.
ಬುದ್ಧನ ಹುಟ್ಟು, ಬೋಧಿಸತ್ವ ಹೊಂದಿದ್ದು, ಜ್ಞಾನೋದಯವಾಗಿದ್ದೆಲ್ಲವೂ ಪೂರ್ಣಿಮೆಯ ದಿನ. ಹೀಗಾಗಿ ಪೂರ್ಣಿಮೆಯಂದು ಬುದ್ಧನನ್ನು ಸ್ಮರಿಸುವುದು ಬಹಳ ಮಹತ್ವದ್ದಾಗಿದೆ. ಮನುಕುಲದ ಉದ್ಧಾರಕ್ಕಾಗಿ ಹುಟ್ಟಿಕೊಂಡಿರುವ ಬೌದ್ಧ ಧರ್ಮವು ಶಾಸ್ತ್ರೀಯ ತಳಹದಿ ಹೊಂದಿದ್ದು, ಇಡೀ ಪ್ರಪಂಚದಲ್ಲಿ ವಿಶೇಷವಾಗಿ ಗುರುತಿಸಿಕೊಂಡಿದೆ ಎಂದು ವಿವರಿಸಿದರು.
ಜ್ಞಾನಪೀಠ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಚ್.ಬಿ. ವಾಲಿಕಾರ್ ಮಾತನಾಡಿದರು. ಭಂತೆ ಸಂಗಾನಂದ ಜಿ, ಪಾಂಡಿಚೇರಿಯ ಅನುಮೋದಸಿ ಭಂತೆ, ಥಾಯ್ಲೆಂಡ್ನ ತಿಯೊಟನಾ ಭಂತೆ, ಶಾಸಕ ಡಾ. ಶರಣಪ್ರಕಾಶ ಪಾಟೀಲ, ಮಹಾಪೌರ ಸೋಮಶೇಖರ್ ಮೇಲಿನಮನಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದೀಪಕನಾಗ್ ಪುಣ್ಯಶೆಟ್ಟಿ, ರಾಧಾಭಾಯಿ ಎಂ. ಖರ್ಗೆ ವೇದಿಕೆಯಲ್ಲಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.