ಕಡೂರು: ತಾಲ್ಲೂಕಿನ ಯಗಟಿ ಗ್ರಾಮದ ಮುದಿಯಪ್ಪ ಬಡಾವಣೆಯಲ್ಲಿ ಮಹಿಳೆಯೊಬ್ಬಳು ಇಬ್ಬರು ಮಕ್ಕಳೊಂದಿಗೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ನಡೆದಿದೆ.
ಗೃಹಿಣಿ ಲತಾ (28), ಮಕ್ಕಳಾದ ನಯನಾ (5) ಮತ್ತು ಸಂಜು (3) ಜತೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ತರೀಕೆರೆ ತಾಲ್ಲೂಕು ಅಜ್ಜಂಪುರ ಹೋಬಳಿಯ ಹೆಗ್ಗಡೆಹಳ್ಳಿಯ ಲತಾ ಯಗಟಿಯ ರಮೇಶ ಅವರನ್ನು ವಿವಾಹವಾಗಿದ್ದರು. ಮನೆಯ ಗೋಡೆಯ ಮೇಲೆ `ನನ್ನ ಸಾವಿಗೆ ಗಂಡನೇ ಕಾರಣ~ ಎಂದು ಬರೆದಿದ್ದುದು ಕಂಡುಬಂತು.
ಬೆಳಗಿನ 7.30ರ ವೇಳೆಯಲ್ಲಿ ಮನೆಯಿಂದ ಹೊಗೆ ಬರುತ್ತಿರುವುದನ್ನು ಕಂಡು ಗ್ರಾಮಸ್ಥರು ಮನೆಯ ಸಮೀಪ ಬಂದಾಗ ಮುಂಬಾಗಿಲು ಒಳಗಿನಿಂದ ಚಿಲಕ ಹಾಕಿತ್ತು. ಹಿತ್ತಲು ಕಡೆ ತೆರಳಿ ಮನೆ ಹೆಂಚು ತೆಗೆದು ಒಳಗೆ ಇಳಿದಾಗ ಮಹಿಳೆಯು ಮಕ್ಕಳೊಂದಿಗೆ ಮೃತಪಟ್ಟಿರುವುದು ಕಂಡುಬಂತು ಎಂದು ಗ್ರಾಮಸ್ಥರು ತಿಳಿಸಿದರು.
ಮೃತ ಮಹಿಳೆಯ ಚಿಕ್ಕಪ್ಪ ಕುಬೇಂದ್ರಪ್ಪ ನೀಡಿದ ದೂರಿನ ಅನ್ವಯ ವರದಕ್ಷಿಣೆ ಕಿರುಕುಳ ಆರೋಪದ ಮೇಲೆ ಲತಾ ಅವರ ಪತಿ ರಮೇಶ, ಮಾವ ಕರಿಯಪ್ಪ ಮತ್ತು ಅತ್ತೆ ಜಯಮ್ಮ ಅವರನ್ನು ಯಗಟಿ ಸಬ್ ಇನ್ಸ್ಪೆಕ್ಟರ್ ಶಾಮಾ ನಾಯ್ಕ ಬಂಧಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.