ಮಾಲೂರು: ಶಿಕ್ಷಣದ ಜೊತೆಗೆ ಗ್ರಾಮೀಣ ಸೊಗಡಿನ ಕುಸ್ತಿಯಂತಹ ಕ್ರೀಡೆಗಳಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಂಡು ಆರೋಗ್ಯವಂತರಾಗಬೇಕು ಎಂದು ಪದವಿ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಎ.ಅಶ್ವಥರೆಡ್ಡಿ ತಿಳಿಸಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಗುರುವಾರ ನಡೆದ ಬೆಂಗಳೂರು ವಿಶ್ವವಿದ್ಯಾನಿಲಯದ ಅಂತರ ಕಾಲೇಜು ಪುರುಷ ಮತ್ತು ಮಹಿಳೆಯರ ಕುಸ್ತಿ ಪಂದ್ಯಾವಳಿಯಲ್ಲಿ ಮಾತನಾಡಿದರು. ಸಂಘಟಿತ- ಸ್ಪರ್ಧಾತ್ಮಕ ಮತ್ತು ಕುಶಲತೆಯಿಂದ ಕೂಡಿದ ದೈಹಿಕ ಚಟುವಟಿಕೆ ಕ್ರೀಡೆ. ಆಧುನಿಕ ಜಗತ್ತಿನಲ್ಲಿ ಗ್ರಾಮೀಣ ಕ್ರೀಡೆಗಳು ನಶಿಸುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.
ನಗರದ ಮಕ್ಕಳು ಕಂಪ್ಯೂಟರ್ ಗೇಮ್ಗಳಲ್ಲಿ ತಲ್ಲೆನರಾಗಿ ದೇಸಿ ಕ್ರೀಡೆಗಳ ಹೆಸರನ್ನು ಸಹ ಕೇಳಿರಲಾರರು. ಬ್ಯಾಟ್, ಬಾಲು ಈ ಸ್ಥಾನ ಆಕ್ರಮಿಸಿಕೊಂಡಿದೆ. ಗ್ರಾಮೀಣರು ತಮ್ಮ ಬೇಸರದ ಹೊತ್ತು ನೀಗಿಸಲು ಸೃಷ್ಟಿಸಿದ ಈ ಕ್ರೀಡೆ ಬಗ್ಗೆ ನಿರಾಸಕ್ತಿ ಹೊಂದುತ್ತಿದ್ದಾರೆಯೇ ಎಂಬ ಶಂಕೆ ಮೂಡುತ್ತಿದೆ. ವಿದ್ಯಾರ್ಥಿಗಳು ಸಂಕೋಚ ತೊರೆದು ಕ್ರೀಡೆಗಳಲ್ಲಿ ಭಾಗವಹಿಸುವಂತೆ ಸಲಹೆ ಮಾಡಿದರು.
60 ಯುವ ಕ್ರೀಡಾಪಟುಗಳು, 30 ವಿದ್ಯಾರ್ಥಿನಿಯರು ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು. ಅಂತರ ಕಾಲೇಜು ಪುರುಷ ಮತ್ತು ಮಹಿಳೆಯರ ಕುಸ್ತಿ ಪಂದ್ಯಾವಳಿ ಆಯೋಜಕರಾದ ಅಶೋಕ್ ಬಾಬು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.
ಜಿಲ್ಲಾ ಪಂಚಾಯಿತಿ ಸದಸ್ಯ ರಾಮಸ್ವಾಮಿ ರೆಡ್ಡಿ, ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಎ.ಎಚ್.ಫರೂಖಿ, ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಮಾ.ಗೋ.ಮಧುಸೂಧನ್, ದೈಹಿಕ ಶಿಕ್ಷಣ ನಿರ್ದೇಶಕರಾದ ಮಂಜಪ್ಪ, ಮುಖಂಡರಾದ ರಮೇಶ್, ವೆಂಕಟೇಶ್, ಗೋಪಾಲ್, ಚಿದಾನಂದ, ಶಶಿಧರ್, ರಾಮಚಂದ್ರು, ಸುರೇಶ್, ಅಂಜನ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.