ಹ್ಯಾಂಡ್ಪೋಸ್ಟ್(ಮೂಡಿಗೆರೆ): ಸ್ಥಳೀಯವಾಗಿ ದೊರೆಯುವ ಸರ್ವರೋಗ ನಿವಾರಕ ಬೆಟ್ಟದ ನೆಲ್ಲಿಕಾಯಿಯಲ್ಲಿ ಹತ್ತು ಹಲವು ಔಷಧೀಯ ಗುಣ ಇರುವುದನ್ನು ಹೊಸ ತಲೆಮಾರಿನ ಜನರಿಗೂ ತಿಳಿಸಬೇಕಿದೆ. ನೆಲ್ಲಿಕಾಯಿ ಬಳಕೆ ಬಗ್ಗೆ ಶಾಲಾ ಕಾಲೇಜುಗಳಲ್ಲಿ ಜಾಗೃತಿ ಮೂಡಿಸುವುದು ಅಗತ್ಯ ಎಂದು ತೋಟಗಾರಿಕೆ ವಿಶ್ವವಿದ್ಯಾಲಯ ಕುಲಪತಿ ಎಸ್.ಬಿ.ದಂಡಿನ್ ಹೇಳಿದರು.
ಇಲ್ಲಿನ ತೋಟಗಾರಿಕಾ ಮಹಾವಿದ್ಯಾಲಯದಲ್ಲಿ ಶುಕ್ರವಾರ ಕರ್ನಾಟಕ ರಾಜ್ಯ ಔಷಧಿ ಗಿಡಮೂಲಿಕಾ ಪ್ರಾಧಿಕಾರ, ತೋಟಗಾರಿಕಾ ವಿಜ್ಞಾನಗಳ ವಿವಿ ಆಶ್ರಯದಲ್ಲಿ ನಡೆದ `ಬೆಟ್ಟದ ನೆಲ್ಲಿಕಾಯಿ ಔಷಧೀಯ ಗುಣಗಳ ಬಗ್ಗೆ ಪ್ರಚಾರ ಕಾರ್ಯ~ ಉದ್ಘಾಟನಾ ಸಮಾರಂಭದಲ್ಲಿ ಬೆಟ್ಟದ ನೆಲ್ಲಿ ಆರೋಗ್ಯ ಸಂಜೀವಿನಿ ಕೈಪಿಡಿ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಹಲವು ಕಾಯಿಲೆಗಳಿಗೆ ಬೆಟ್ಟದ ನೆಲ್ಲಿಕಾಯಿ ದಿವ್ಯೌಷಧ. ಈ ನೆಲ್ಲಿಕಾಯಿಯನ್ನು ಯಾವುದಾದರೂ ಸ್ವರೂಪದಲ್ಲಿ ಹೆಚ್ಚು ಹೆಚ್ಚು ಬಳಸಬೇಕು. ಇದರಿಂದ ಮಕ್ಕಳನ್ನು ಸಾಮಾನ್ಯವಾಗಿ ಕಾಡುವ ಹತ್ತಾರು ಕಾಯಿಲೆಗಳು ದೂರವಾಗುತ್ತವೆ. ಸ್ಥಳೀಯವಾಗಿ ಲಭ್ಯವಾಗುವ ನೆಲ್ಲಿಕಾಯಿ ಬಳಕೆ ಬಗ್ಗೆ ವ್ಯಾಪಕ ಪ್ರಚಾರವೂ ಅಗತ್ಯವಾಗಿದೆ ಎಂದರು.
ಬೆಟ್ಟದ ನೆಲ್ಲಿಕಾಯಿ ಬೆಳೆ-ಬಳಕೆ ಬಗ್ಗೆ ಮಿರಾಜ್ಕರ್, ಡಾ. ತಿಪ್ಪೇಶ್, ಡಾ. ಹನುಮಂತರಾಯಪ್ಪ, ಡಾ. ಕೃಷ್ಣ ಮಾಹಿತಿ ನೀಡಿದರು. ತರಬೇತುದಾರ ಕೃಷ್ಣಮೂರ್ತಿ ಮಾತನಾಡಿದರು.
ತೋಟಗಾರಿಕಾ ಮಹಾವಿದ್ಯಾಲಯ ಡೀನ್ ಡಾ. ಹೇಮ್ಲಾ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ವಲಯ ಅರಣ್ಯಾಧಿಕಾರಿ ಹರ್ಷವರ್ಧನ್, ಡಾ. ರಂಗಸ್ವಾಮಿ, ತಾಲ್ಲೂಕಿನ 50ಕ್ಕೂ ಹೆಚ್ಚಿನ ಶಾಲೆಗಳ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.