ADVERTISEMENT

ಬೇಡಿಕೆ ಈಡೇರಿಕೆಗೆ ವಿದ್ಯಾರ್ಥಿಗಳ ಆಗ್ರಹ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2012, 19:30 IST
Last Updated 12 ಅಕ್ಟೋಬರ್ 2012, 19:30 IST

ಬಳ್ಳಾರಿ: ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ವ್ಯಾಪ್ತಿಯ ಪದವಿ ಮತ್ತು ಸ್ನಾತಕೋತ್ತರ ಪದವಿಯ ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಒದಗಿಸುವಂತೆ ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ವತಿಯಿಂದ ನಗರದಲ್ಲಿ ಶುಕ್ರವಾರ ವಿದ್ಯಾರ್ಥಿಗಳು ಶುಕ್ರವಾರ ಪ್ರತಿಭಟನೆ ನಡೆಸಿದರು.

ನಗರದ ವಿವಿಧ ರಸ್ತೆಗಳಲ್ಲಿ ಪ್ರತಿಭಟನಾ ರ‌್ಯಾಲಿ ನಡೆಸುವ ಮೂಲಕ ವಿವಿ ಆವರಣಕ್ಕೆ ತೆರಳಿದ ಪ್ರತಿಭಟನಾಕಾರರು ಕುಲಪತಿ ಡಾ.ಮಂಜಪ್ಪ ಹೊಸಮನೆ, ಕುಲಸಚಿವರಾದ ಡಾ.ರಂಗರಾಜ್ ವನದುರ್ಗ, ಡಾ.ಯಶವಂತ್ ಡೋಂಗ್ರೆ ಅವರಿಗೆ ಮನವಿ ಅರ್ಪಿಸಿದರು.

ವಿವಿ ಕೂಡಲೇ ತನ್ನ ವ್ಯಾಪ್ತಿಯ ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳ ಸಾಮಾಜಿಕ, ಆರ್ಥಿಕ, ಭೌಗೋಳಿಕ, ರಾಜಕೀಯ, ಸಾಂಸ್ಕೃತಿಕ ಹಿನ್ನೆಲೆಯ ಆಧಾರದಲ್ಲಿ ಜನ ಸಾಮಾನ್ಯರ ಸ್ಥಿತಿಗತಿಗೆ ಅನುಗುಣವಾಗಿ ಪಠ್ಯಕ್ರಮ ರಚಿಸಬೇಕು. ಪಠ್ಯಕ್ರಮದ ಅನುಸಾರ ತರಗತಿಗಳು ಪೂರ್ಣಗೊಂಡ ನಂತರ ಪರೀಕ್ಷೆ ನಡೆಸಬೇಕು, ಮರು ಮೌಲ್ಯಮಾಪನಕ್ಕೆ ನಿಗದಿ ಪಡಿಸಿರುವ ಶುಲ್ಕವನ್ನು ಬಡ ವಿದ್ಯಾರ್ಥಿಗಳಿಗಾದರೂ ಕಡಿಮೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.

ಕಾಲೇಜುಗಳು ಮತ್ತು ಸ್ನಾತಕೊತ್ತರ ಕೇಂದ್ರಗಳಲ್ಲಿನ ಮೂಲಸೌಲಭ್ಯ ಕೊರತೆ ನೀಗಿಸಬೇಕು, ಕೊಪ್ಪಳ ಜಿಲ್ಲಾ ಕೇಂದ್ರದಲ್ಲಿನ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಸ್ನಾತಕೊತ್ತರ ಕೇಂದ್ರ ಆರಂಭಿಸಬೇಕು. ಗಂಗಾವತಿಯ ಸ್ನಾತಕೋತ್ತರ ಕೇಂದ್ರದಲ್ಲಿ ರಾಜ್ಯಶಾಸ್ತ್ರ, ಸಮಾಜಶಾಸ್ತ್ರ ಕೋರ್ಸ್ ಆರಂಭಿಸಬೇಕು. ಖಾಸಗಿ ಸ್ನಾತಕೋತ್ತರ ಕೇಂದ್ರಗಳಲ್ಲಿ ಹೆಚ್ಚುವರಿ ಶುಲ್ಕ ಸಂಗ್ರಹಿಸದಂತೆ ತಡೆಯಬೇಕು ಎಂದು ಕೋರಲಾಯಿತು.

ಸಂಘಟನೆಯ ರಾಜ್ಯ ಕಾರ್ಯದರ್ಶಿ ಹುಳ್ಳಿ ಉಮೇಶ್, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲಾ ಘಟಕಗಳ ಅಧ್ಯಕ್ಷರಾದ ಗುರುರಾಜ್ ದೇಸಾಯಿ, ಸೌಮ್ಯಾ,  ಸುರೇಶ್ ಚೌಹಾಣ, ಅಮರೇಶ್ ಕಡಗದ, ಹನುಮಂತ ಭಜಂತ್ರಿ, ಶ್ವೇತಾ ಚೌವಾಣ, ಸೈಯ್ಯದ್ ಸುಭಾನ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.