ಮಂಗಳೂರು: ನಗರದಲ್ಲಿ ರಾಷ್ಟ್ರೀಯ ಯುಜನೋತ್ಸವ ಆರಂಭಕ್ಕೆ ಇನ್ನು ಕೇವಲ ಮೂರು ದಿನ ಉಳಿದಿದೆ. ಸಾರ್ವಜನಿಕರಿಗೆ ಯುವಜನೋತ್ಸವ ಮಾತ್ರವಲ್ಲದೆ ಸಾಹಸ ಕ್ರೀಡೆಗಳಲ್ಲಿ ಆಸಕ್ತಿ ಮೂಡಿಸುವ ಸಲುವಾಗಿ ಜಲ ಸಾಹಸ ಕ್ರೀಡೆಗಳು ಭಾನುವಾರ ಸಂಜೆ ಇಲ್ಲಿನ ನೇತ್ರಾವತಿ ನದಿಯಲ್ಲಿ ಆರಂಭವಾಗಿವೆ.
ಜಪ್ಪಿನಮೊಗರು ಕಡೆಕಾರಿನ ನೇತ್ರಾವತಿ ನದಿ ತೀರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಪಾಲೆಮಾರ್ ಜೆಟ್ ಸ್ಕೀಯಿಂಗ್ನಲ್ಲಿ ಸವಾರಿ ಮಾಡುವ ಮೂಲಕ ಸಾಹಸ ಕ್ರೀಡೆಗಳನ್ನು ಉದ್ಘಾಟಿಸಿದರು.
ಬೆಂಗಳೂರಿನ ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿಯ 42 ಮಂದಿಯ ನುರಿತ ತಂಡ ಜಲ, ಭೂ ಮತ್ತು ವಾಯು ಸಾಹಸ ಕ್ರೀಡೆಗಳಿಗೆ ಮಾರ್ಗದರ್ಶನ ನೀಡುತ್ತಿದೆ.
ಇದೇ 11ರ ವರೆಗೆ ಸಾರ್ವಜನಿಕರಿಗೆ ರಿಯಾಯಿತಿ ದರದಲ್ಲಿ ಜೆಟ್ ಸ್ಕೀಯಿಂಗ್, ಬನಾನಾ ರೈಡ್, ಕಯಾಕಿಂಗ್ಗಳು ನಡೆಯಲಿದ್ದು, 12ರಿಂದ 16ರ ವರೆಗೆ ಯುಜನೋತ್ಸವದಲ್ಲಿ ಪಾಲ್ಗೊಳ್ಳುವ ಸ್ಪರ್ಧಿಗಳಿಗೆ ಮತ್ತು ಅತಿಥಿಗಳಿಗೆ ಉಚಿತ ಸಾಹಸ ಕ್ರೀಡೆಗಳನ್ನು ಆಯೋಜಿಸಲಾಗಿದೆ. ನಗರದ ಪುರಭವನ ಮತ್ತು ನೆಹರೂ ಕ್ರೀಡಾಂಗಣದಲ್ಲಿ ರ್ಯಾಪೆಲಿಂಗ್ (ಗೋಡೆ ಹತ್ತಿ ಇಳಿಯುವುದು), ಜುಮರಿಂಗ್, ಟೈರೋಲಿನ್, ಟ್ರಾವರ್ಸ್ ಮತ್ತಿತರ ಭೂಸಾಹಸ ಚಟುವಟಿಕೆ ಆರಂಭವಾಗಿವೆ. ಇವುಗಳು ಸಾರ್ವಜನಿಕರಿಗೆ ಉಚಿತವಾಗಿರುತ್ತದೆ. ಪಣಂಬೂರು ಕಡಲ ತೀರದಲ್ಲಿ ಪ್ಯಾರಾಸೇಲಿಂಗ್ ಸಾಹಸ ಆರಂಭವಾಗಿದೆ.
1,145 ಸ್ಪರ್ಧಿಗಳ ಹೆಸರು ನೋಂದಣಿ: ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಲು ಇದುವರೆಗೆ 1,145 ಮಂದಿ ತಮ್ಮ ಹೆಸರು ನೋಂದಾಯಿಸಿದ್ದು, ಇದರಲ್ಲಿ 753 ಯುವಕರು ಮತ್ತು 392 ಯುವತಿಯರು ಸೇರಿದ್ದಾರೆ. ಸ್ಪರ್ಧಾರಹಿತ ವಿಭಾಗದಲ್ಲಿ 215 ಯುವಕರು ಮತ್ತು 70 ಯುವತಿಯರು ಹೆಸರು ನೋಂದಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.