ADVERTISEMENT

ಮಂಡ್ಯ ಬಂದ್ ಭಾಗಶಃ ಬಸ್ ಸಂಚಾರ ಸಹಜ

​ಪ್ರಜಾವಾಣಿ ವಾರ್ತೆ
Published 11 ಜುಲೈ 2012, 19:30 IST
Last Updated 11 ಜುಲೈ 2012, 19:30 IST

ಮಂಡ್ಯ: ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಪದಚ್ಯುತಿ ಖಂಡಿಸಿ, ಸ್ವಾಭಿಮಾನಿ ಒಕ್ಕಲಿಗರ ಸೇವಾ ಒಕ್ಕೂಟದ ಕರೆಯಂತೆ ಬುಧವಾರ ನಡೆದ ಬಂದ್ ಮಂಡ್ಯ ನಗರದಲ್ಲಿ ಭಾಗಶಃ ಹಾಗೂ ಜಿಲ್ಲೆಯ ಮಳವಳ್ಳಿ, ಮದ್ದೂರು ಮತ್ತು ಪಾಂಡವಪುರ ತಾಲ್ಲೂಕುಗಳಲ್ಲಿ ಸಂಪೂರ್ಣ ಯಶಸ್ವಿಯಾಗಿದೆ.

ಅಂಗಡಿ-ಮುಂಗಟ್ಟುಗಳು ಬೆಳಿಗ್ಗೆಯಿಂದಲೇ ಬಂದ್ ಆಗಿದ್ದವು. ಜನರ ಸಂಚಾರ ವಿರಳವಾಗಿತ್ತು. ಕೆಲವು ಶಾಲಾ-ಕಾಲೇಜುಗಳು ಮುನ್ನೆಚ್ಚರಿಕೆ ಕ್ರಮವಾಗಿ ರಜೆ ಘೋಷಿಸಿದ್ದರೆ, ಇನ್ನು ಕೆಲವು ಕಡೆ ಪ್ರತಿಭಟನಾಕಾರರೇ ತೆರಳಿ ಬಂದ್ ಮಾಡಿಸಿದರು.

ಚಲನಚಿತ್ರ ಮಂದಿರಗಳಲ್ಲಿ ಬೆಳಗಿನ ಪ್ರದರ್ಶನ ನಡೆಯಲಿಲ್ಲ. ಪಾಂಡವಪುರ- ಮಂಡ್ಯ ನಡುವೆ ಹೊರತುಪಡಿಸಿದರೆ ಉಳಿದೆಡೆ ಬಸ್ ಸಂಚಾರಕ್ಕೆ ಎಂದಿನಂತೇ ಇತ್ತು.

ಬಿಜೆಪಿ ಹೈಕಮಾಂಡ್ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು, ಮಂಡ್ಯದ ಸಂಜಯ ವೃತ್ತದಲ್ಲಿ ಕೆಲಕಾಲ ಪ್ರತಿಭಟನೆ ನಡೆಸಿದರು. ನಗರದಲ್ಲಿ ಬೈಕ್ ರ‌್ಯಾಲಿ ನಡೆಸಿದ ಒಕ್ಕೂಟ ಪದಾಧಿಕಾರಿಗಳು, ತೆರೆದಿದ್ದ ಅಂಗಡಿಗಳನ್ನು ಬಂದ್ ಮಾಡಿಸಿದರು. ಸರ್ಕಾರಿ ಕಚೇರಿಗಳನ್ನು ಬಂದ್ ಮಾಡಿಸಲು ಮುಂದಾದಾಗ ಪೊಲೀಸರು ಅವರನ್ನು ತಡೆದರು.

ನಾಗಮಂಗಲದಲ್ಲಿ ಬೈಕ್ ರ‌್ಯಾಲಿ ಮಾತ್ರ ನಡೆಸಲಾಯಿತು. ವಹಿವಾಟು ಎಂದಿನಂತೆಯೇ ಇತ್ತು. ಶ್ರೀರಂಗಪಟ್ಟಣದಲ್ಲಿ ಎಂದಿನಂತೆ ವಹಿವಾಟು ನಡೆದರೆ, ಕೆಆರ್‌ಎಸ್‌ನಲ್ಲಿ ಅಂಗಡಿಗಳನ್ನು ಬಂದ್ ಮಾಡಿದ್ದಲ್ಲದೇ, ಕೆಲಕಾಲ ರಸ್ತೆ ತಡೆ ಮಾಡಲಾಯಿತು.

ಒಕ್ಕೂಟದ ಅಧ್ಯಕ್ಷ ಲೋಕೇಶ್‌ಬಾನು, ಬಾಣಸವಾಡಿ ನಾಗಣ್ಣ, ಹೊನ್ನೇಶ್, ಮಲ್ಲಿಕಾರ್ಜುನ್ ಮತ್ತಿತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT