ADVERTISEMENT

ಮಡಿಕೇರಿ- ಸಂಪಾಜೆ ರಸ್ತೆ ಸಂಚಾರಕ್ಕೆ ಮುಕ್ತ

​ಪ್ರಜಾವಾಣಿ ವಾರ್ತೆ
Published 1 ಜೂನ್ 2011, 18:55 IST
Last Updated 1 ಜೂನ್ 2011, 18:55 IST

ಮಡಿಕೇರಿ: ಮಡಿಕೇರಿ-ಮಂಗಳೂರು ರಸ್ತೆ  ಸಂಚಾರಕ್ಕೆ ಬುಧವಾರ ಮುಕ್ತಗೊಂಡಿದೆ. ಇದರಿಂದ ಸಂಪಾಜೆವರೆಗಿನ ರಸ್ತೆ ಅಭಿವೃದ್ಧಿಗಾಗಿ ಕಳೆದ ಡಿಸೆಂಬರ್‌ನಿಂದ ಈ ಮಾರ್ಗದಲ್ಲಿ ಹೇರಲಾಗಿದ್ದ ನಿರ್ಬಂಧ ತೆರವುಗೊಂಡಂತಾಗಿದೆ.

ಈಗಾಗಲೇ ಮೈಸೂರು-ಬಂಟ್ವಾಳ ರಸ್ತೆಯಲ್ಲಿ 88.3ನೇ ಕಿ.ಮೀ.ನಿಂದ 117 ಕಿ.ಮೀ ವರೆಗೆ ಸಂಪೂರ್ಣ ಕಾಮಗಾರಿ ಮುಕ್ತಾಯಗೊಂಡಿದೆ. 117ನೇ ಕಿ.ಮೀ.ನಿಂದ 121ನೇ ಕಿ.ಮೀ.ವರೆಗೆ ಅಂದರೆ ಮಡಿಕೇರಿ ನಗರದಿಂದ ಭಾಗಮಂಡಲ ಮೊದಲನೇ ತಿರುವಿನವರೆಗೆ ಕಾಮಗಾರಿ ಇನ್ನು ಕೈಗೆತ್ತಿಕೊಂಡಿಲ್ಲ. 121ನೇ ಕಿ.ಮೀ. ನಿಂದ 137.5 ಕಿ.ಮೀ. ವರೆಗಿನ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. 137.5 ಕಿ.ಮೀ. ನಿಂದ 138.5 ಕಿ.ಮೀ. ವರೆಗಿನ ರಸ್ತೆ ಇನ್ನೆರಡು ದಿನಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಕೆ.ಆರ್.ಡಿ.ಸಿ.ಎಲ್ ಕಾರ್ಯಪಾಲಕ ಎಂಜಿನಿಯರ್ ಶಿವಕುಮಾರ್ ತಿಳಿಸಿದ್ದಾರೆ.

ಮಡಿಕೇರಿ ನಗರದಿಂದ ಭಾಗಮಂಡಲ ಮೊದಲನೇ ತಿರುವಿನವರೆಗೆ ಹಾಗೂ 138.5 ಕಿ.ಮೀ. ನಿಂದ ಸಂಪಾಜೆ ವರೆಗಿನ ರಸ್ತೆ ಕಾಮಗಾರಿಯನ್ನು ಮಳೆಗಾಲ ನಿಂತ ಕೂಡಲೇ ಪ್ರಾರಂಭಿಸಲಾಗುವುದು. ಮುಂದಿನ ಏಪ್ರಿಲ್-ಮೇ ತಿಂಗಳೊಳಗೆ ಕಾಮಗಾರಿಯನ್ನು  ಮುಕ್ತಾಯಗೊಳಿಸುವುದಾಗಿ ಹೇಳಿದರು.

ಪ್ರಭಾರ ಜಿಲ್ಲಾಧಿಕಾರಿ ಕೆ.ಎಂ. ಚಂದ್ರೇಗೌಡ  ಸಂಚಾರ ನಿರ್ಬಂಧ ಅಂತ್ಯಗೊಳ್ಳುವ ಮುನ್ನಾದಿನ ಅಂದರೆ ಮಂಗಳವಾರ ಸಂಜೆ ಸ್ಥಳಕ್ಕೆ ಭೇಟಿ ನೀಡಿ  ಸಣ್ಣ ಪುಟ್ಟ ಮಾರ್ಪಾಡುಗಳ ಬಗ್ಗೆ ಸಲಹೆ ನೀಡಿದರು.

ಮಳೆಯ ಕಾರಣ ವಿಳಂಬ:
ಏಪ್ರಿಲ್ ತಿಂಗಳಲ್ಲಿ ಸುರಿದ ಅನಿರೀಕ್ಷಿತ ಮಳೆಯಿಂದಾಗಿ 25 ದಿನಗಳ ಕಾಲ ಕಾಮಗಾರಿ ಸ್ಥಗಿತಗೊಂಡಿತ್ತು. ಇದರಿಂದಾಗಿ ಕಾಮಗಾರಿ ಪೂರ್ಣಗೊಳ್ಳಲು ವಿಳಂಬವಾಯಿತು ಎಂದು ಕೆಆರ್‌ಡಿಸಿಎಲ್‌ನ ಅಧಿಕಾರಿ ತಿಳಿಸಿದ್ದಾರೆ.

ರಸ್ತೆ ಕಾಮಗಾರಿಗೆ ಬೇಕಾದ ಜಲ್ಲಿ ಕಲ್ಲು ಹಾಗೂ ಇತರೆ ಸಾಮಗ್ರಿಗಳು ಈ ಪ್ರದೇಶದಲ್ಲಿ ಸಿಗುವುದಿಲ್ಲ. ಇವುಗಳನ್ನು ಮೈಸೂರಿನಿಂದ ತರಿಸಬೇಕಾಯಿತು. ಇದು ಸಹ ಕಾಮಗಾರಿ ವಿಳಂಬವಾಗಲು ಕಾರಣವಾಯಿತು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.