ADVERTISEMENT

ಮನೆಬಿಟ್ಟು ಬಂದ ಬಾಲಕಿಯರ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2018, 12:34 IST
Last Updated 29 ಮಾರ್ಚ್ 2018, 12:34 IST

ಕಾರವಾರ: ಮಂಗಳೂರು ಎಕ್ಸ್‌ಪ್ರೆಸ್ ರೈಲಿನ ಬೋಗಿಯೊಂದರಲ್ಲಿ ಅನುಮಾನಾಸ್ಪದವಾಗಿ ಪ್ರಯಾಣಿಸುತ್ತಿದ್ದ 10 ಮತ್ತು 12 ವರ್ಷದ ಇಬ್ಬರು ಬಾಲಕಿಯರನ್ನು ಇಲ್ಲಿನ ರೈಲು ನಿಲ್ದಾಣದಲ್ಲಿ ರೈಲ್ವೇ ರಕ್ಷಣಾ ಪಡೆಯ (ಆರ್‌ಪಿಎಫ್) ಸಿಬ್ಬಂದಿ ಬುಧವಾರ ಪತ್ತೆ ಮಾಡಿ ಮಕ್ಕಳ ಕಲ್ಯಾಣ ಸಮಿತಿಗೆ ಹಸ್ತಾಂತರಿಸಿದ್ದಾರೆ.

ಇಬ್ಬರೂ ಮುಂಬೈನ ಪನ್ವೇಲ್‌ ನಿಲ್ದಾಣದಲ್ಲಿ ರೈಲನ್ನೇರಿದ್ದರು. ಅವರನ್ನು ತನ್ನ ಜತೆಗೆ ಕರೆದುಕೊಂಡು ಹೋಗಲು ಮಹಿಳೆಯೊಬ್ಬರು ಪ್ರಯತ್ನಿಸುತ್ತಿದ್ದರು ಎಂದು ಸಹಪ್ರಯಾಣಿಕರು ರೈಲ್ವೇ ರಕ್ಷಣಾ ಪಡೆಯ ಸಿಬ್ಬಂದಿಗೆ ತಿಳಿಸಿದರು. ಅವರ ಬಳಿ ಟಿಕೆಟ್ ಇರಲಿಲ್ಲ ಹಾಗೂ ಪೋಷಕರೂ ಜತೆಗಿರಲಿಲ್ಲ. ಈ ಬಗ್ಗೆ ವಿಚಾರಣೆ ನಡೆಸಿದಾಗ ಸೂಕ್ತವಾಗಿ ಮಾಹಿತಿಯನ್ನೂ ನೀಡಲಿಲ್ಲ. ಕೊನೆಗೆ ಅವರನ್ನು ಆರ್‌ಪಿಎಫ್ ಕಚೇರಿಗೆ ಕರೆತಂದು, ಮಹಿಳಾ ಕಾನ್‌ಸ್ಟೆಬಲ್ ಸಮ್ಮಖದಲ್ಲಿ ವಿಚಾರಣೆ ಮಾಡಲಾಯಿತು. ಆಗ, ತಮ್ಮ ಮಲತಾಯಿಯ ಕಿರುಕುಳ ತಡೆಯಲಾಗದೇ ಮುಂಬೈಯಲ್ಲಿರುವ ಮನೆಬಿಟ್ಟು ಬಂದಿರುವುದಾಗಿ ತಿಳಿಸಿದರು.

ಆರ್‌ಪಿಎಫ್‌ ಸಿಬ್ಬಂದಿ ಅವರ ತಂದೆ ಅಬ್ದುಲ್ ರಹೀಮ್ ಅವರ ಮೊಬೈಲ್‌ಗೆ ಕರೆ ಮಾಡಿದಾಗ, ತಮ್ಮ ಮಕ್ಕಳು ನಾಪತ್ತೆಯಾಗಿರುವ ಬಗ್ಗೆ ಶಿವಾಜಿನಗರ ಪೊಲೀಸ್ ಠಾಣೆಗೆ ಮಂಗಳವಾರ ದೂರು ನೀಡಿರುವುದಾಗಿ ತಿಳಿಸಿದರು. ಇದನ್ನು ಅಲ್ಲಿನ ಠಾಣೆಯ ಪಿಎಸ್‌ಐ ಕೂಡ ದೃಢಪಡಿಸಿದರು. ಪ್ರಕರಣದ ಬಗ್ಗೆ ಮಕ್ಕಳ ಸಹಾಯವಾಣಿಗೆ ಕೂಡ ಮಾಹಿತಿ ನೀಡಲಾಗಿದೆ. ತನಿಖೆ ಮುಂದುವರಿದಿದೆ ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

ಪ್ರಕರಣದ ಬಗ್ಗೆ ಮಕ್ಕಳ ಸಹಾಯವಾಣಿಗೆ ಕೂಡ ಮಾಹಿತಿ ನೀಡಲಾಗಿದೆ. ತನಿಖೆ ಮುಂದುವರಿದಿದೆ ಎಂದು ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.