ADVERTISEMENT

ಮರೆತು ಹೋಗುತ್ತಿರುವ ಮೂಲ ಸಂಸ್ಕೃತಿ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2012, 19:30 IST
Last Updated 5 ಅಕ್ಟೋಬರ್ 2012, 19:30 IST

ತುಮಕೂರು:  ಹಳ್ಳಿಗಳಲ್ಲಿ ತಮ್ಮ ಸಂಸ್ಕೃತಿ ಮರೆತು ಬೇರೊಂದು ಸಂಸ್ಕೃತಿಗೆ ಮಾರುಹೋಗುತ್ತಿರುವುದು ಮೂಲ ಸಂಸ್ಕೃತಿಗೆ ದಕ್ಕೆ ತರುತ್ತಿದೆ ಎಂದು ಕರ್ನಾಟಕ ಜಾನಪದ ಪರಿಷತ್ ಕಾರ್ಯದರ್ಶಿ ಎಚ್.ಆರ್.ರಾಜೇಗೌಡ ಇಲ್ಲಿ ಶುಕ್ರವಾರ ಆತಂಕ ವ್ಯಕ್ತಪಡಿಸಿದರು.

ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಘಟಕದ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಪುನಾರಚಿತ ಜಿಲ್ಲಾ ಘಟಕದ ಕಾರ್ಯಚಟುವಟಿಕೆಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

~ಗ್ರಾಮ್ಯರು ಅಂದು ಅನುಸರಿಸುತ್ತಿದ್ದ ಜನಪದ ಕೌಟುಂಬಿಕ ಎಲ್ಲೆಯೊಳಗಿನ ಆಚರಣೆಗಳು ಪ್ರಸಕ್ತ ಸನ್ನಿವೇಶದಲ್ಲಿ ಮಾಯವಾಗುತ್ತಿವೆ. ಮೂಲ ಗ್ರಾಮೀಣ ಆಚರಣೆಗಳು ಜನತೆ ನಡುವೆ ಕಾಲ ಬದಲಾದಂತೆ ಕಡಿಮೆಯಾಗುತ್ತಿರುವುದು ಆತಂಕಪಡುವ ವಿಷಯವಾಗಿದೆ. ಜಾನಪದ ಕ್ಷೇತ್ರಕ್ಕೆ ಎಚ್.ಎಲ್.ನಾಗೇಗೌಡರ ಕೊಡುಗೆ ಅನನ್ಯ. ಜನಪದ ಲೋಕ ಕಟ್ಟಿ ಬೆಳೆಸಿದ ಅಗ್ಗಳಿಕೆ ಅವರಿಗೆ ಸಲ್ಲುತ್ತದೆ~ ಎಂದರು.

ಜನಪದ ಪರಿಕರಗಳಾದ ಬೀಸುಕಲ್ಲು, ಒನಕೆ ಕುಟ್ಟುವಿಕೆ, ಸಾರಯುತವಾಗಿದ್ದ ಅಡುಗೆ ಪದ್ಧತಿಗಳು, ಹಳ್ಳಿಗಳ ಇತರೆ ವಿಶೇಷತೆಗಳು ಆಧುನಿಕ ಕಾಲಘಟ್ಟದಲ್ಲಿ ಕಣ್ಮರೆಯಾಗುತ್ತಿರುವುದು ದುರದೃಷ್ಟ ಸಂಗತಿ ಎಂದು ಹೇಳಿದರು.

ಕರ್ನಾಟಕ ಜಾನಪದ ಪರಿಷತ್ ರಾಜ್ಯ ಸಂಚಾಲಕ ಬಾಲಾಜಿ ಮಾತನಾಡಿ, ಜನಪದ ಕಲೆ ಸಂರಕ್ಷಿಸುವುದು ಪ್ರಸ್ತುತ ಸಂದರ್ಭದಲ್ಲಿ ಬಹುಮುಖ್ಯವಾಗಿದೆ ಎಂದು ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಬಸವರಾಜಪ್ಪ, ಜಿಲ್ಲಾ ಘಟಕದ ಅಧ್ಯಕ್ಷ ಡಾ.ಪಿ.ಎಸ್.ಪದ್ಮಪ್ರಸಾದ್, ಎಚ್.ಬಿ.ಪುಟ್ಟಬೋರಯ್ಯ, ಕಾರ್ಯದರ್ಶಿ ಮಲ್ಲಿಕಾರ್ಜುನ ಕೆಂಕೆರೆ, ಶೈಲಾ ನಾಗರಾಜ್ ಇತರರು ಉಪಸ್ಥಿತರಿದ್ದರು. ಮುಖವೀಣೆ ಕಲಾವಿದ ಬೇಡತ್ತೂರು ನಾರಾಯಣಪ್ಪ ಅವರನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.