ಹುಮನಾಬಾದ್: ಸಾಲ ಕೊಡಿಸುವ ಆಮಿಷವೊಡ್ಡಿ ಗ್ರಾಮೀಣ ಮುಗ್ಧ ಮಹಿಳೆಯರಿಂದ ಲಕ್ಷಾಂತರ ರೂಪಾಯಿ ಸಂಗ್ರಹಿಸಿ, ವಂಚಿಸಿದ ಘಟನೆ ತಾಲ್ಲೂಕಿನ ಕಪ್ಪರಗಾಂವ ಗ್ರಾಮದಲ್ಲಿ ಹಲವು ತಿಂಗಳ ಹಿಂದೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ರೂ.3 ಸಾವಿರ ಠೇವಣಿ ಇಟ್ಟರೆ ರೂ 50 ಸಾವಿರ ಮತ್ತು ರೂ. 5,500 ಠೇವಣಿ ಕಟ್ಟಿದರೆ ಒಂದು ಲಕ್ಷ ರೂಪಾಯಿ ಸಾಲ ಕೊಡಿಸುವುದಾಗಿ ಔರಾದ್ ತಾಲ್ಲೂಕು ದಾಬಕಾ ಗ್ರಾಮದ ವ್ಯಕ್ತಿಯೊಬ್ಬರು ಭರವಸೆ ನೀಡಿದ್ದರು. ಇದನ್ನು ನಂಬಿದ ಕಪ್ಪರಗಾಂವ ಗ್ರಾಮದ ತಾವು ಷೇರು ಹಣ ಪಾವತಿಸಿ, ಈಗ ವಂಚನೆಗೆ ಒಳಗಾಗಿರುವುದಾಗಿ 30ಕ್ಕೂ ಅಧಿಕ ಮಹಿಳೆಯರು ದೂರಿದರು.
ಷೇರು ಹಣ ನೀಡಿದವರ ಪೈಕಿ ತಮಗೆ ತಲಾ ರೂ. 50 ಸಾವಿರ ಸಾಲ ನೀಡಿದ್ದಾಗಿ ಶಮೀನಾ ಬೇಗಂ ಮತ್ತು ರಫೀತಾಬೀ ಅವರು ಮಾಧ್ಯಮ ಪ್ರತಿನಿಧಿಗಳಿಗೆ ವಿವರ ನೀಡಿದರು.
ಬೀದರ್ ಖಾಸಗಿ ಆಸ್ಪತ್ರೆಯೊಂದರ ಬಳಿ ಡಿಸೆಂಬರ್ 2011ರಲ್ಲಿ ಕಚೇರಿ ತೆರೆದಿದ್ದ ಆತ ಉಳಿದ ಎಲ್ಲರಿಗೂ ಈಗ ವಂಚಿಸಿ ಪರಾರಿ ಆಗಿದ್ದಾನೆ ಎಂದು ಮಹಿಳೆಯರು ನೋವು ನೋಡಿಕೊಂಡರು.
ಅದರಿಂದ ಆತಂಕಗೊಂಡ ತಾವು ಇದೀಗ ಜೈ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಶಂಭುಲಿಂಗ ನಂದಗಾಂವ ಹಾಗೂ ಪಕ್ಕರಗಾಂಗ ಗ್ರಾಮದ ಇಬ್ರಾಹಿಂ ಅವರ ಜೊತೆಗೆ ನ್ಯಾಯ ಕೇಳಲು ಬಂದಿದ್ದಾಗಿ ತಿಳಿಸಿದರು.
ನಂತರ ಸರ್ಕಲ್ ಇನ್ಸ್ಪೆಕ್ಟರ್ ಕೆ.ಎಂ. ಸತೀಶ ಬಳಿ ತೆರಳಿ, ತಮಗಾದ ಮೋಸದ ಕುರಿತು ವಿವರಿಸಿದರು.
ವಂಚಿಸಿದ ಆರೋಪಿಗಳನ್ನು ಪತ್ತೆ ಹಚ್ಚಿ, ಆಗಿರುವ ಹಾನಿಗೆ ಪರಿಹಾರ ಕೊಡಿಸುವಂತೆ ಅವರು ಪೊಲೀಸರಲ್ಲಿ ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.