ADVERTISEMENT

ಮಹಿಳೆಯರು ಉತ್ತಮ ಆಯ್ಕೆಗಾರರು-ಡಿ.ವಿ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2012, 19:30 IST
Last Updated 7 ಅಕ್ಟೋಬರ್ 2012, 19:30 IST

ಸುಳ್ಯ: ~ಉತ್ತಮ ಆಯ್ಕೆಯಲ್ಲಿ ಮಹಿಳೆಯರದು ಎತ್ತಿದ ಕೈ. ಮಹಿಳೆಯರು ಎಲ್ಲಾ ವಿಚಾರದಲ್ಲೂ ಬೆಸ್ಟ್ ಸೆಲೆಕ್ಟರ್ಸ್. ರಾಜಕಾರಣದಲ್ಲೂ ಅವರು ಒಳ್ಳೆಯ ಆಯ್ಕೆಗೆ ಕಾರಣರಾಗಬೇಕು~ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಮನವಿ ಮಾಡಿದರು.

ಸುಳ್ಯದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಭಾನುವಾರ ನಡೆದ ಭಾಗ್ಯಲಕ್ಷ್ಮಿ ಸಮಾವೇಶದಲ್ಲಿ ಅವರು ಸಮಾರೋಪ ಭಾಷಣ ಮಾಡಿದರು.

ದೇಶೀಯ ಸಂಗತಿಗಳ ಮೇಲೆ ಪ್ರಾದೇಶಿಕ ಸಂಗತಿಗಳ ಪ್ರಹಾರ ನಡೆಯುತ್ತಿದೆ. ಪ್ರಾದೇಶಿಕ ಪಕ್ಷಗಳಿಂದ ದೇಶೀಯ ರಾಜನೀತಿಗೆ ಹಿನ್ನಡೆಯಾಗುತ್ತಿದೆ. ರಾಷ್ಟ್ರೀಯ ಹಿತಾಸಕ್ತಿಯನ್ನು ಕಾಪಾಡುವುದು ಬಿಜೆಪಿಯಿಂದ ಮಾತ್ರ ಸಾಧ್ಯ. ಮಹಿಳೆಯರು ಈ ಬದಲಾವಣೆಗೆ ಕಾರಣರಾಗಬೇಕು ಎಂದು ಅವರು ಹೇಳಿದರು.

~ಭ್ರಷ್ಟಾಚಾರದ ವಿಚಾರದಲ್ಲಿ ಮಾತನಾಡುವಾಗ ನಮಗೂ ಸ್ವಲ್ಪ ಮುಜುಗರವಾಗುತ್ತದೆ. ಉಡುಪಿ ಚಿಕ್ಕಮಗಳೂರು ಲೋಕಸಭಾ ಚುನಾವಣೆಗಿಂತ ಮುಂಚೆ ವಿಧಾನಸೌಧದಲ್ಲಿ ನಡೆದ ಘಟನೆ ಮತ್ತು ಅದು ಮಾಧ್ಯಮಗಳಲ್ಲಿ ಪಡೆದ ಪ್ರಚಾರ ಬಿಜೆಪಿ ಮೇಲೆ ಪರಿಣಾಮ ಬೀರಿದೆ. ಅನೈತಿಕತೆ, ಆಶ್ಲೀಲತೆಗಳನ್ನು ಯಾರೂ ಸಹಿಸುವುದಿಲ್ಲ ಎಂಬ ಸಂಗತಿ ಎಲ್ಲರಿಗೂ ಮನದಟ್ಟಾಗಬೇಕು~ ಎಂದು ಅವರು ಹೇಳಿದರು.

ಕಾವೇರಿ ನೀರಿನ ವಿಚಾರದಲ್ಲಿ ಕರ್ನಾಟಕ, ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡನೆ ಮಾಡಲಿದ್ದು ತೀರ್ಪು ಕರ್ನಾಟಕಕ್ಕೆ ವ್ಯತಿರಿಕ್ತವಾಗಿ ಬಂದಲ್ಲಿ ಸರ್ಕಾರ ಬಲಿ ಕೊಟ್ಟಾದರೂ ರಾಜ್ಯಕ್ಕೆ ನ್ಯಾಯ ಒದಗಿಸಿ ಕೊಡಲು ಸಿದ್ಧ ಎಂದು ಅವರು ಹೇಳಿದರು. ಕಾವೇರಿ ವಿಚಾರದಲ್ಲಿ ಕೇಂದ್ರ ಸರ್ಕಾರದ ಧೋರಣೆ ಖಂಡನೀಯ~ ಎಂದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.