ADVERTISEMENT

ಮಾರ್ಗದರ್ಶಿ ಸಂಸ್ಥೆ ಸ್ಥಾಪನೆಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2011, 19:05 IST
Last Updated 27 ಆಗಸ್ಟ್ 2011, 19:05 IST
ಮಾರ್ಗದರ್ಶಿ ಸಂಸ್ಥೆ ಸ್ಥಾಪನೆಗೆ ಸಲಹೆ
ಮಾರ್ಗದರ್ಶಿ ಸಂಸ್ಥೆ ಸ್ಥಾಪನೆಗೆ ಸಲಹೆ   

ಬಾಗಲಕೋಟೆ: ಹಾಲುಮತ ಸಮಾಜದ ಪ್ರತಿಭಾವಂತರ ಉತ್ತೇಜನಕ್ಕಾಗಿ ಒಂದು `ಮಾರ್ಗದರ್ಶಿ ಸಂಸ್ಥೆ~ ಸ್ಥಾಪನೆಯಾಗಬೇಕು ಎಂದು ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಎಚ್.ಜೆ. ಲಕ್ಕಪ್ಪಗೌಡ ಹೇಳಿದರು.

ನಗರದ ಕಾಳಿದಾಸ ಕಲ್ಯಾಣ ಮಂಟಪದಲ್ಲಿ ಶನಿವಾರ ನಡೆದ ರಾಜ್ಯ ಮಟ್ಟದ 4ನೇ ಹಾಲುಮತ ಸಂಸ್ಕೃತಿ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹಾಲುಮತ ಸಮಾಜದ ರಾಜಕೀಯ, ಸಾಮಾಜಿಕ, ಕಲೆ, ಸಾಂಸ್ಕೃತಿಕ, ತಾಂತ್ರಿಕ, ವೈಜ್ಞಾನಿಕ ಮತ್ತು ಶೈಕ್ಷಣಿಕ ಸಾಧನೆಯನ್ನು ಕುರಿತಾದ ವಾರ್ತಾಸಂಪುಟದ ಪ್ರಕಟಣೆ ಅಗತ್ಯವಿದೆ ಎಂದು ಹೇಳಿದರು.
ಹಾಲಮತ ಸಮಾಜ ಗುಡಿಗಳ ವ್ಯಾಪ್ತಿಗೆ ಸೀಮಿತಗೊಳ್ಳುವ ಸಂಕುಚಿತ ಮನೋಭಾವವನ್ನು ಬಿಟ್ಟು ವೈಚಾರಿಕ ಧೀಮಂತಿಕೆ ಮತ್ತು ನಿಜ ಸಂತೋಷದ ಕಡೆಗೆ ಮುಕ್ತವಾಗಿ ತೆರೆದುಕೊಳ್ಳಬೇಕು ಹಾಗೂ ಜನಾಂಗವನ್ನು ಪ್ರಬುದ್ಧರನ್ನಾಗಿ, ವಿದ್ಯಾವಂತರನ್ನಾಗಿ, ವಿಚಾರಶೀಲರನ್ನಾಗಿ ಮಾಡುವುದರ ಕಡೆಗೆ ಗಮನ ಕೊಡಬೇಕು ಎಂದು ತಿಳಿಸಿದರು.

ಬಡ್ಡಿ ರಹಿತ ಸಾಲ: ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಬೃಹತ್ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ, ರಾಜ್ಯ ಸರ್ಕಾರ ಮುಂದಿನ ವರ್ಷದಿಂದ ಬಡ್ಡಿ ರಹಿತ ಸಾಲವನ್ನು ರೈತರಿಗೆ ನೀಡಲು ಚಿಂತಿಸಿದೆ ಎಂದರು.

ಇದೇ ಡಿಸೆಂಬರ್‌ನಲ್ಲಿ ವಿಶ್ವ ಕೃಷಿ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ನಡೆಸಲು ಸರ್ಕಾರ ತಯಾರಿ ನಡೆಸಿದೆ ಎಂದು ಹೇಳಿದರು.

ಕನಕ ಗುರುಪೀಠದ ಸಿದ್ಧರಾಮ ಸ್ವಾಮೀಜಿ  ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು, ವಿಧಾನ ಪರಿಷತ್ ಸದಸ್ಯ ಎಸ್.ಆರ್. ಪಾಟೀಲ, ನಾರಾಯಣಸಾ ಭಾಂಡಗೆ, ಮಾಜಿ ಸಚಿವರಾದ ಎಚ್.ವೈ. ಮೇಟಿ, ಬಿ.ಬಿ. ಚಿಮ್ಮನಕಟ್ಟಿ, ಕನ್ನಡ ವಿ.ವಿ. ಹಾಲುಮತ ಅಧ್ಯಯನ ಪೀಠದ ಡಾ.ಎಫ್.ಟಿ. ಹಳ್ಳಿಕೇರಿ ಮತ್ತಿತರರು ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.