ಗುಲ್ಬರ್ಗ: ತೆಪ್ಪ ಮುಳುಗಿ ಹಲವರು ಜಲಸಮಾಧಿಯಾದ ಘಟನೆ ಶುಕ್ರವಾರ ಸಂಜೆ ಸಮೀಪದ ಖಾಜಾ ಕೋಟನೂರ ಕೆರೆಯಲ್ಲಿ ಸಂಭವಿಸಿದೆ. ಒಂಬತ್ತು ಮಂದಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದ್ದು, ಐದು ಜನರ ಮೃತದೇಹ ಪತ್ತೆಯಾಗಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಪಿಕ್ನಿಕ್ಗೆಂದು ತೆರಳಿದ್ದವರು ತೆಪ್ಪದಲ್ಲಿ ವಿಹಾರ ನಡೆಸುತ್ತಿದ್ದಾಗ, ದುರ್ಘಟನೆ ಸಂಭವಿಸಿದೆ. ಮೃತರು ಗುಲ್ಬರ್ಗದ ಮೊಮಿನ್ಪುರ ಬಡಾವಣೆಯ ನಯಾ ಮೊಹಲ್ಲಾ ನಿವಾಸಿಗಳಾಗಿದ್ದು, ಒಂದೇ ಕುಟುಂಬದವರು ಎಂದು ತಿಳಿದುಬಂದಿದೆ.
ಮೀನುಗಾರಿಕೆಗೆ ಬಳಸುತ್ತಿದ್ದ ತೆಪ್ಪದಲ್ಲಿ ಸುಮಾರು 15 ಜನರು ಕುಳಿತು ಸಾಗುತ್ತಿದ್ದರು. ಒಂದನೇ ಸುತ್ತು ಸುರಕ್ಷಿತವಾಗಿ ಹೋಗಿ ಬಂದವರು ಮತ್ತೊಂದು ಸುತ್ತು ಹೊರಟಾಗ ಈ ಅವಘಡ ಸಂಭವಿಸಿತು. ಕೆರೆ ಮಧ್ಯೆ ಒಂದೆಡೆ ತೆಪ್ಪ ವಾಲಿದ್ದರಿಂದ ನೀರು ನುಗ್ಗಿ ಮಗುಚಿತು ಎನ್ನಲಾಗಿದೆ. ಕೆಲವರು ಈಜಿ ದಡ ಸೇರಿದರು. ಸುದ್ದಿ ತಿಳಿದ ಅಗ್ನಿಶಾಮಕ ದಳ ಹಾಗೂ ಪೊಲೀಸರು ಶೋಧ ನಡೆಸಿದಾಗ ಐದು ಜನರ ಮೃತದೇಹಗಳು ಪತ್ತೆಯಾಗಿವೆ ಎಂದು ಶೋಧ ಕಾರ್ಯಕ್ಕೆ ಮಾರ್ಗದರ್ಶನ ನೀಡುತ್ತಿರುವ ಎಸ್ಪಿ ಪ್ರವೀಣ ಪವಾರ್ ತಿಳಿಸಿದರು.
ಐಜಿಪಿ ವಜೀರ್ ಅಹ್ಮದ್ ಸ್ಥಳದಲ್ಲಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಕತ್ತಲಿನಿಂದಾಗಿ ಕಾರ್ಯಾಚರಣೆಗೆ ಅಡ್ಡಿಯುಂಟಾಗಿದ್ದು, ಈಜು ಪರಿಣಿತರನ್ನು ಸ್ಥಳಕ್ಕೆ ಕರೆಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.