ಕೋಲಾರ: 18ರಿಂದ 60ರ ವಯಸ್ಸಿನ ಆರೋಗ್ಯವಂತರು ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಬೇಕು ಎಂದು ಆರ್.ಎಲ್.ಜಾಲಪ್ಪ ಆಸ್ಪತ್ರೆಯ ಡಾ.ಕೃಷ್ಣಮೂರ್ತಿ ಸಲಹೆ ನೀಡಿದರು.
ನಗರದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾಸವಿ ವನಿತಾ ಕ್ಲಬ್ ಆಶ್ರಯದಲ್ಲಿ ಬುಧವಾರ ಏರ್ಪಡಿಸಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ರಕ್ತದಾನ ಆಪತ್ತಿನಲ್ಲಿರುವವರಿಗೆ ಜೀವದಾನ ಮಾಡುತ್ತದೆ. ತುರ್ತು ಸಂದರ್ಭಗಳಲ್ಲಷ್ಟೆ ಅಲ್ಲದೆ, ನಿಯಮಿತವಾಗಿ ರಕ್ತದಾನ ಮಾಡುವುದು ವ್ಯಕ್ತಿಯ ಆರೋಗ್ಯಕ್ಕೂ ಒಳಿತು ತರುವ ಸಂಗತಿ ಎಂದರು.
80ರ ದಶಕದವರೆಗೂ ಮದ್ಯಪಾನಕ್ಕಾಗಿ ರಕ್ತ ದಾನ ಮಾಡಿ ಹಣ ಪಡೆಯುವವರ ಸಂಖ್ಯೆ ಹೆಚ್ಚಿತ್ತು. ನಂತರದ ದಿನಗಳಲ್ಲಿ ಹಾಗೆ ಸ್ವಯಂಪ್ರೇರಿತ ರಕ್ತದಾನದ ವ್ಯಾಖ್ಯಾನ ಬದಲಿಸಲಾಯಿತು. ಇದೀಗ ಆರೋಗ್ಯವಂತರಿಂದ ಮಾತ್ರ ರಕ್ತ ಪಡೆಯಲಾಗುತ್ತದೆ ಎಂದು ತಿಳಿಸಿದರು.
ಮಧ್ಯಾಹ್ನ 2 ಗಂಟೆವರೆಗೂ ನಡೆದ ಶಿಬಿರದಲ್ಲಿ ಉಪನ್ಯಾಸಕ ಚೌಡೇಗೌಡ ಸೇರಿದಂತೆ 33 ವಿದ್ಯಾರ್ಥಿನಿಯರು ರಕ್ತದಾನ ಮಾಡಿದರು. ಪ್ರಾಂಶುಪಾಲ ಪ್ರೊ.ರಾಮೇಗೌಡ, ಕನ್ನಡ ವಿಭಾಗದ ಮುಖ್ಯಸ್ಥೆ ಕೆ.ಆರ್.ಜಯಶ್ರೀ, ಜಿಲ್ಲಾ ಆಸ್ಪತ್ರೆಯ ವೈದ್ಯೆ ತಬ್ಸುಮ್, ಕ್ಲಬ್ನ ಅಧ್ಯಕ್ಷೆ ಶ್ರೀದೇವಿ, ನಿರ್ಮಲಾ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.