ADVERTISEMENT

ರಸಗೊಬ್ಬರ ಅಭಾವ: ಕೃಷಿಕರ ಪರದಾಟ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2012, 19:30 IST
Last Updated 10 ಅಕ್ಟೋಬರ್ 2012, 19:30 IST

ಅರಸೀಕೆರೆ: ತಾಲ್ಲೂಕಿನಲ್ಲಿ ರಸಗೊಬ್ಬರ ಕೊರತೆ ಉಂಟಾಗಿದ್ದು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ರೈತರು ಅಲೆಯುವ ಸ್ಥಿತಿ ಉಂಟಾಗಿದೆ ಎಂದು ಕಣಕಟ್ಟೆ ಹೋಬಳಿ ರೈತರು ದೂರಿದ್ದಾರೆ.

 ಕಣಕಟ್ಟೆ ಹೋಬಳಿ ಮಾಡಾಳು ಪ್ರಾಥಮಿಕ ಕೃಷಿ ಪತ್ತಿನ ಸೇವಾ ಸಹಕಾರ ಸಂಘದ ಮುಂಭಾಗದಲ್ಲಿ ಬುಧವಾರವೂ ಯೂರಿಯಾ ರಸಗೊಬ್ಬರಕ್ಕೆ ಸಂಜೆವರೆಗೂ ಕಾದು ಬೇಸತ್ತ ರೈತರು ಕೊನೆಗೆ ಸೇವಾ ಸಹಕಾರ ಸಂಘದ ಆಡಳಿತ ಮಂಡಳಿ ಹಾಗೂ ಕಾರ್ಯದರ್ಶಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ತಾಲ್ಲೂಕಿನಲ್ಲಿ ಒಂದು ವಾರದಿಂದ ಮಳೆ ಬೀಳುತ್ತಿದ್ದು, ಹಿಂಗಾರು ಬಿತ್ತನೆ ಚಟುವಟಿಕೆಯಲ್ಲಿ ತೊಡಗಿರುವ ಕೃಷಿಕರು ಗೊಬ್ಬರ ಹಾಗೂ ಬಿತ್ತನೆ ಬೀಜಕ್ಕಾಗಿ ಹಾತೊರೆಯುತ್ತಿದ್ದಾರೆ. ಇಲ್ಲಿನ ಸಹಕಾರ ಸಂಘದಲ್ಲಿ ಹೆಸರು ನೋಂದಾಯಿಸಿಕೊಂಡಿರುವ ರೈತರು ಚೀಟಿ ಹಿಡಿದು ಬಿಸಿಲಲ್ಲಿ ಕಾಯುವ ಸ್ಥಿತಿ ಇದೆ ಎಂದು ರೈತರಾದ ಬಸವಲಿಂಗಪ್ಪ, ಗುರುಸಿದ್ದಪ್ಪ ಅಳಲು ತೋಡಿಕೊಳ್ಳುತ್ತಾರೆ.          

ರಸಗೊಬ್ಬರ ಪೂರೈಸುವ ನಿಗಮಕ್ಕೆ ಬೇಡಿಕೆ ಸಲ್ಲಿಸುವಲ್ಲಿ ಸಂಘದ ಕಾರ್ಯದರ್ಶಿ ವಿಳಂಬ ಮಾಡಿದ್ದೂ ಅಭಾವ ಉಂಟಾಗಲು ಒಂದು ಕಾರಣ ಎಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಸ್.ಎಂ.ಓಂಕಾರಮೂರ್ತಿ ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.