ಬಸವಕಲ್ಯಾಣ: ಇಲ್ಲಿ ಎರಡು ದಿನ ನಡೆಯುವ ಭಾರತೀಯ ಬೌದ್ಧ ಮಹಾಸಭಾದ ಪ್ರಥಮ ರಾಜ್ಯಮಟ್ಟದ ಸಮ್ಮೇಳನಕ್ಕೆ ಬೌದ್ಧ ಮಹಾಸಭಾ ರಾಷ್ಟ್ರೀಯ ಸಲಹೆಗಾರ ಮತ್ತು ಭಾರತೀಯ ರಿಪಬ್ಲಿಕನ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಮದಾಸ ಅಠಾವಳೆ ಗುರುವಾರ ಚಾಲನೆ ಕೊಟ್ಟರು.
ಇಲ್ಲಿನ ಬಿಕೆಡಿಬಿ ಸಭಾಂಗಣದಲ್ಲಿ ಬುದ್ಧ, ಬಸವ, ಅಂಬೇಡ್ಕರರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ ಉದ್ಘಾಟಿಸಿದ ಅವರು ಗೌತಮ ಬುದ್ಧನು ಶಾಂತಿ ಮತ್ತು ಸಹಬಾಳ್ವೆಯ ಸಂದೇಶ ಕೊಟ್ಟಿದ್ದಾರೆ. `ಬಹುಜನ ಹಿತಾಯ, ಬಹುಜನ ಸುಖಾಯ~ ಇದು ಬೌದ್ಧ ಧರ್ಮದ ಧ್ಯೇಯವಾಗಿದೆ ಎಂದರು. ಬುದ್ಧ, ಬಸವಣ್ಣ, ಕಬೀರ ಮತ್ತು ಡಾ.ಅಂಬೇಡ್ಕರರು ಶೋಷಿತರ ಪರ ಧನಿ ಎತ್ತಿ ಸಮಾಜದ ಪರಿವರ್ತನೆಗೆ ಪ್ರಯತ್ನಿಸಿದ್ದಾರೆ. ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದರು.
ಬುದ್ಧನು ವಿಶ್ವದ ಮಾನವರೆಲ್ಲರೂ ಒಂದೇ ಎಂದು ಹೇಳಿದರು. ಆದ್ದರಿಂದ ವಿಶ್ವಮೈತ್ರಿ ಆಂದೋಲನ ಆರಂಭಿಸಲಾಗುತ್ತಿದ್ದು ಸಮಾಜದಲ್ಲಿನ ಎಲ್ಲ ವರ್ಗದವರು ಇದಕ್ಕೆ ಸಹಕರಿಸಬೇಕು ಎಂದು ಬೌದ್ಧ ಮಹಾಸಭಾ ರಾಜ್ಯಾಧ್ಯಕ್ಷ ಮಿಲಿಂದ್ ಗುರೂಜಿ ವಿನಂತಿಸಿದರು.
ಮಹಾಸಭಾ ರಾಷ್ಟ್ರೀಯ ಕಾರ್ಯದರ್ಶಿ ವಿ.ಎಸ್.ಮೋಖಾಲೆ, ಗುಜರಾತನ ಭಿಕ್ಕುಸಿಂಗ್ ಗೆಹ್ಲೋಟ್, ಫಾದರ ಬೆಂಜಮಿನ್ ಡಿಸೋಜಾ, ಬಸವಣ್ಣೆಪ್ಪ ತಿಬಶೆಟ್ಟಿ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಸದಸ್ಯ ಸಂಜೀವ ಕಾಳೇಕರ್, ಪ್ರಮುಖರಾದ ಎಚ್.ಶ್ರೇಯಸ್ಕರ್, ಬಾಬುರಾವ ಮದಲವಾಡಾ, ವಿಭೂತಿ ಬಸವಾನಂದ, ಸೂರ್ಯಕಾಂತ ಗಾಯಕವಾಡ, ಸಂಜೀವ ಮೋರಖಂಡಿ, ಕೆ.ಬಿ.ಹೊಸಮನಿ, ಭಗವಾನ ಕಾಂಬಳೆ, ಸಂಜೀವ ಗೋಡಬೋಲೆ, ಮುರಲಿ ದಾದೆ ಉಪಸ್ಥಿತರಿದ್ದರು. ಕಾರ್ಯಕ್ರಮದ ಮೊದಲು ಡಾ.ಬಿ.ಆರ್.ಅಂಬೇಡ್ಕರ ವೃತ್ತದಿಂದ ಬಸವೇಶ್ವರ ವೃತ್ತದವರೆಗೆ ಮೆರವಣಿಗೆ ನಡೆಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.