ADVERTISEMENT

ರೈತರಿಗೆ ಆಮಿಷ ಒಡ್ಡಿ ವಂಚನೆ: ಆರೋಪಿ ಸೆರೆ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2012, 19:30 IST
Last Updated 6 ಫೆಬ್ರುವರಿ 2012, 19:30 IST

ಕೋಲಾರ: ರಾಜ್ಯದ ಹಲವೆಡೆ ರೈತರಿಗೆ ಕೃಷಿ ಉಪಕರಣಗಳನ್ನು ಸಬ್ಸಿಡಿ ದರದಲ್ಲಿ ವಿತರಿಸುವುದಾಗಿ ನಂಬಿಸಿ ಹಣ ಪಡೆದು ವಂಚಿಸುತ್ತಿದ್ದ ಆರೋಪಿಯನ್ನು ನಗರಠಾಣೆ ಪೊಲೀಸರು ಸೋಮವಾರ ಸಂಜೆ ಬಂಧಿಸಿದ್ದಾರೆ.

ನಗರದ ಪಿ.ಸಿ.ಬಡಾವಣೆ ನಿವಾಸಿ ರವಿಕಾಂತ್ (34) ಬಂಧಿತ ಆರೋಪಿ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಸೇರಿದಂತೆ ರಾಜ್ಯದ ವಿವಿಧ ಭಾಗಗಳ ರೈತರೊಂದಿಗೆ ಮೊಬೈಲ್ ಫೋನ್, ಮೆಸೇಜ್ ಮೂಲಕ ವ್ಯವಹರಿಸುತ್ತಿದ್ದ. ಕೃಷಿ ಪರಿಕರಗಳನ್ನು ಸಾಗಿಸಲು ಲಗೇಜ್ ಹಣವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡುವಂತೆ ನಂಬಿಸುತ್ತಿದ್ದ. ಹಣ ಜಮಾ ಆದ ಬಳಿಕ ಎಟಿಎಂ ಮೂಲಕ ಪಡೆದು ನಾಪತ್ತೆಯಾಗುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ರಾಜ್ಯ ಸಾವಯವ ಕೃಷಿ ಮಿಷನ್ ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಡಾ.ಮುರಳಿಕೃಷ್ಣ ಎಂಬುವವರು ಬೆಂಗಳೂರು ವಿಧಾನಸೌಧ ಠಾಣೆಯಲ್ಲಿ 2011ರ ಮಾರ್ಚ್ 11ರಂದು ದೂರು ದಾಖಲಿಸಿದ್ದರು. ಘಟನೆ ನಡೆದ ಸ್ಥಳದ ಸರಹದ್ದು ಕೋಲಾರ ನಗರ ಠಾಣೆಗೆ ಪ್ರಕರಣ ವರ್ಗಾವಣೆಯಾಗಿತ್ತು. ನಗರದ ಮುನಿರಾಜು ಎಂಬುವವರಿಗೂ ಆರೋಪಿಯು ವಂಚಿಸಿದ್ದ. ಆ ಬಗ್ಗೆ 2011ರ ಆಗಸ್ಟ್ 24ರಂದು ಅವರೂ ದೂರು ನೀಡಿದ್ದರು.

ಆರೋಪಿ 6 ತಿಂಗಳಿಂದ ನಾಪತ್ತೆಯಾಗಿದ್ದ. ಇದೇ ವೇಳೆ, ತಾಲ್ಲೂಕಿನ ನೆನಮನಹಳ್ಳಿ ಸಾವಯವ ಕೃಷಿಕ ಎನ್.ಆರ್.ಚಂದ್ರಶೇಖರ್ ಅವರಿಗೂ ಕೆಲವೇ ದಿನಗಳ ಹಿಂದೆ ಆತ ಕೃಷಿ ಉಪಕರಣ ಪಡೆಯಲು ಹಣವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡುವಂತೆ ಮೆಸೇಜ್ ಕಳಿಸಿದ್ದ. ಈ ವಂಚನೆ ಪ್ರಕರಣಗಳ ಅರಿವಿದ್ದ ಅವರು ಕೂಡ ಫೆ. 2ರಂದು ಜಿಲ್ಲಾಧಿಕಾರಿಗೆ ದೂರು ನೀಡಿದ್ದರು. ಪೊಲೀಸರು ತನಿಖೆ ನಡೆಸಿದಾಗ ಆತ ಬಂಗಾರಪೇಟೆ ವಸತಿಗೃಹವೊಂದರಲ್ಲಿ ತಂಗಿದ್ದು ತಿಳಿದುಬಂತು. ಕೂಡಲೇ ಸ್ಥಳಕ್ಕೆ ತೆರಳಿ ಆರೋಪಿಯನ್ನು ಬಂಧಿಸಲಾಯಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.