ಹೊಳೆನರಸೀಪುರ: ತಾಲ್ಲೂಕಿನ ಹಳೇಕೋಟೆ ಹೋಬಳಿಯ ಮಾವಿನಕೆರೆ ಲಕ್ಷ್ಮೀ ವೆಂಕಟರಮಣ ಸ್ವಾಮಿ ರಥೋತ್ಸವ ಬುಧವಾರ ಭಕ್ತಿ ಪರಾಕಾಷ್ಠತೆಯಿಂದ ಅದ್ದೂರಿಯಾಗಿ ನಡೆಯಿತು.ರಾಜ್ಯದ ವಿವಿಧೆಡೆಗಳಿಂದಷ್ಟೇ ಅಲ್ಲದೇ ವಿದೇಶದಲ್ಲಿ ನೆಲೆಸಿರುವ ಸ್ವಾಮಿಯ ಆರಾಧಕರು ರಥೋತ್ಸವದಲ್ಲಿ ಪಾಲ್ಗೊಂಡು ದೇವಾಲಯದ ಸುತ್ತಲ ನಾಲ್ಕುಬೀದಿಗಳಲ್ಲಿ ರಥವನ್ನು ಎಳೆದು ಭಕ್ತಿ ಮೆರೆದರು.
ರಥ ಸಾಗುವ ಬೀದಿಗಳಲ್ಲಿ ನಿಂತ ಮಕ್ಕಳು ಮಹಿಳೆಯರು ರಥಕ್ಕೆ ಹಣ್ಣು, ಜವನ ಎಸೆದು ಸಂಭ್ರಮಿಸಿದರು.ರಥೋತ್ಸವದ ಅಂಗವಾಗಿ ದೇವಾಲಯದಲ್ಲಿನ ವೆಂಕಟರಮಣ ಸ್ವಾಮಿ ಮತ್ತು ಲಕ್ಷ್ಮೀದೇವಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.ಮಾವಿನ ಕೆರೆಯಲ್ಲಿರುವ ವಿವಿಧ ಛತ್ರಗಳಲ್ಲಿ ರಥೋತ್ಸವಕ್ಕೆ ಆಗಮಿಸುವ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಶಾಸಕ ಎಚ್.ಡಿ. ರೇವಣ್ಣ, ಭವಾನಿ ರೇವಣ್ಣ, ತಹಶೀಲ್ದಾರ್ ಹಿರಿಯಣ್ಣ, ಹಳೇಕೋಟೆ ಹೋಬಳಿಯ ಜಿಲ್ಲಾ ಪಂಚಾಯಿತಿ ಸದಸ್ಯ ಪಾಪಣ್ಣಿ, ಹಾಗೂ ರಥೋತ್ಸವ ಆಚರಣೆಯ ಪ್ರಮುಖ ಕುಟುಂಬವಾದ ದೊಡ್ಡಮನೆ ವಂಶಸ್ಥರು ಭಾಗವಹಿಸಿದ್ದರು. ರಥೋತ್ಸವದ ಅಂಗವಾಗಿ ಮಾವಿನಕೆರೆ ಬೆಟ್ಟದ ರಂಗನಾಥ ಸ್ವಾಮಿಗೂ ಅಲಂಕಾರ ಮಾಡಿ ಪೂಜೆ ಸಲ್ಲಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.