ADVERTISEMENT

ಲಿಂಗಸುಗೂರ: ಸಂಭ್ರಮದ ಶೋಭಾಯಾತ್ರೆ

​ಪ್ರಜಾವಾಣಿ ವಾರ್ತೆ
Published 23 ಜನವರಿ 2011, 19:05 IST
Last Updated 23 ಜನವರಿ 2011, 19:05 IST

ಲಿಂಗಸುಗೂರ: ಪಟ್ಟಣದಲ್ಲಿ ಭಾನುವಾರ ಹಿಂದೂ ಸಮಾವೇಶದ ಅಂಗವಾಗಿ ಸಂಭ್ರಮದ ಶೋಭಾಯಾತ್ರೆ ಪ್ರಮುಖ ಬೀದಿಗಳಲ್ಲಿ ನಡೆಯಿತು.ಈಶ್ವರ ದೇವಸ್ಥಾನದಲ್ಲಿ ಅಲಂಕರಿಸಿದ ತೆರೆದ ವಾಹನಗಳಲ್ಲಿ ವಿವಿಧ ಸಮಾಜದ ಶರಣರು, ಸಂತರು, ಋಷಿ ಮುನಿಗಳು ಸೇರಿದಂತೆ ದೇವಾನುದೇವತೆಗಳ ಸ್ತಬ್ಧ ಚಿತ್ರ ಅನಾವರಣ ಮಾಡಲಾಗಿತ್ತು. ಭಾವಚಿತ್ರಗಳಿಗೆ ವಿಶೇಷ ಪೂಜೆ ಸಲ್ಲಿಸುತ್ತಿದ್ದಂತೆ ಆಕಾಶದೆತ್ತರಕ್ಕೆ ಮುಟ್ಟುವ ಜಯಘೋಷಗಳ ಮಧ್ಯೆ ಶೋಭಾಯಾತ್ರೆ ಆರಂಭಗೊಂಡಿತು.

ಭಾರತಾಂಬೆ,ಮಧ್ವಾಚಾರ್ಯ,ಶ್ರೀರಾಮ,ವೀರರಾಣಿ ಕಿತ್ತೂರು ಚೆನ್ನಮ್ಮ,ಕನಕದಾಸ,ಮಹಾರಾಣಾ ಪ್ರತಾಪಸಿಂಹ, ಸತ್ಯಸೇವಾಲಾಲ,ಬಸವೇಶ್ವರ,ನೇತಾಜಿ ಸುಭಾಶ್ಚಂದ್ರ ಭೋಸ್,ವಿಶ್ವಕರ್ಮ,ವಾಲ್ಮೀಕಿ ಮಹರ್ಷಿ,ಮಾಚಿದೇವ ಸವಿತಾ ಮಹರ್ಷಿ ಇತರೆ ಮಹಾನ್ ನಾಯಕರ ಸ್ತಬ್ಧಚಿತ್ರಗಳ ಮೆರವಣಿಗೆ ನಾಗರಿಕರಲ್ಲಿ ಹರ್ಷ ಮೂಡಿಸಿತ್ತು.

ದೇವಸ್ಥಾನದಿಂದ ಗೌಳಿಪುರ, ಕರಡಕಲ್ಲ ರಸ್ತೆ, ಹನುಮಾನ ವೃತ್ತ, ಮೇನ್ ಬಜಾರ, ಗಡಿಯಾರ ವೃತ್ತ, ಅಂಚೆಕಚೇರಿ, ಬಸ್ ನಿಲ್ದಾಣ ವೃತ್ತದ ಮೂಲಕ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನಕ್ಕೆ ಆಗಮಿಸಿತು.ಮೆರವಣಿಗೆಯುದ್ದಕ್ಕೂ ನಾಗರಿಕರು ಶೋಭಾಯಾತ್ರೆಯ ಹಾದಿಯಲ್ಲಿ ಹೂ ಚೆಲ್ಲಿ, ಕುಡಿಯುವ ನೀರು, ಪಾನಕ ನೀಡಿ ಆಹ್ವಾನಿಸುತ್ತಿರುವುದು ಕಾಣಿಸಿತು.ಭಾಜಾ ಭಜಂತ್ರಿ, ಡೊಳ್ಳು ಕುಣಿತ, ಹೆಜ್ಜೆಮೇಳ, ಲಂಬಾಣಿ ನೃತ್ಯಗಳು ಶೋಭಾಯಾತ್ರೆಗೆ ಮೆರಗು ನೀಡಿದ್ದವು.ತಾಲ್ಲೂಕಿನ ವಿವಿಧೆಡೆಗಳಿಂದ ನೂರಾರು ಜನರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.