ADVERTISEMENT

ವರೂರು ಕಾಲೇಜಿನಲ್ಲಿ ಹೊಸ ಸೌಲಭ್ಯ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2012, 19:30 IST
Last Updated 13 ಆಗಸ್ಟ್ 2012, 19:30 IST

ಹುಬ್ಬಳ್ಳಿ: ನಗರದ ಹೊರವಲಯದ ವರೂರು ನವಗ್ರಹ ತೀರ್ಥದಲ್ಲಿರುವ ಆಚಾರ್ಯ ಗುಣಧರನಂದಿ ಮಹಾರಾಜ (ಎಜಿಎಂ) ಎಂಜಿನಿಯರಿಂಗ್ ಕಾಲೇಜು ತನ್ನ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಒದಗಿಸಿಕೊಡಲು 300ಕ್ಕೂ ಅಧಿಕ ಕಂಪೆನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ವಿದ್ಯಾರ್ಥಿಗಳಿಗೆ ಒದಗಿಸಲಾದ ಸೌಲಭ್ಯಗಳಿಗೆ ಸಂಬಂಧಿಸಿದಂತೆ `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಕಾಲೇಜಿನ ಸಂಸ್ಥಾಪಕ ಗುಣಧರನಂದಿ ಸ್ವಾಮೀಜಿ ಈ ಮಾಹಿತಿ ನೀಡಿದರು.

`ಗ್ರಾಮೀಣ ಭಾಗದ ತಾಂತ್ರಿಕ ಸಂಸ್ಥೆಗಳಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಕಾಲೇಜು ಎನ್ನುವ ಹಿರಿಮೆ ನಮ್ಮದಾಗಿದ್ದು, ಅಖಿಲ ಭಾರತ ತಾಂತ್ರಿಕ ಶಿಕ್ಷಣ ಆಯೋಗ (ಎಐಸಿಟಿಇ) ಮತ್ತು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಮಾನ್ಯತೆಯನ್ನೂ ಪಡೆದಿದೆ~ ಎಂದು ವಿವರಿಸಿದರು.

`ಕಾಲೇಜಿನಲ್ಲಿ ಅಧ್ಯಯನಕ್ಕೆ ಲಭ್ಯವಿರುವ ಐದೂ ಕೋರ್ಸ್‌ಗಳಿಗೆ (ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್ಸ್, ಕಂಪ್ಯೂಟರ್ ಸೈನ್ಸ್, ಇಲೆಕ್ಟ್ರಿಕಲ್ ಆ್ಯಂಡ್ ಎಲೆಕ್ಟ್ರಾನಿಕ್ಸ್, ಸಿವಿಲ್ ಮತ್ತು ಮೆಕ್ಯಾನಿಕಲ್ ಎಂಜಿನಿಯರಿಂಗ್) ಪ್ರತ್ಯೇಕ ಕಟ್ಟಡಗಳನ್ನು ಒದಗಿಸಲಾಗಿದ್ದು, ಪ್ರಯೋಗಾಲಯಗಳಿಗೆ ನವದೆಹಲಿಯಿಂದ ಅತ್ಯಾಧುನಿಕ ಉಪಕರಣಗಳನ್ನು ತರಿಸಲಾಗಿದೆ~ ಎಂದು ಅವರು ಹೇಳಿದರು.

`ಪ್ರಪಂಚದ ಶ್ರೇಷ್ಠ ತಂತ್ರಜ್ಞರಿಂದ ಆನ್‌ಲೈನ್ ಮೂಲಕ ಉಪನ್ಯಾಸ ಕೊಡಿಸಲು ಆನ್‌ಲೈನ್ ವ್ಯವಸ್ಥೆ ಮಾಡಲಾಗಿದೆ. ಇ-ಲೈಬ್ರರಿ ಸೌಲಭ್ಯವನ್ನೂ ಕಲ್ಪಿಸಲಾಗಿದೆ~ ಎಂದರು.


`ಎಂಜಿನಿಯರಿಂಗ್ ಶಿಕ್ಷಣದಲ್ಲಿ ಈಚೆಗೆ ಕೊರತೆಯಾಗಿ ಕಾಣುತ್ತಿರುವ ನೈತಿಕ ಶಿಕ್ಷಣವನ್ನು ಈ ಕಾಲೇಜಿನಲ್ಲಿ ಕೊಡಲಾಗುತ್ತದೆ. ರಾಷ್ಟ್ರಭಕ್ತಿಯನ್ನೂ ಬೆಳೆಸಲಾಗುತ್ತದೆ. ಆಡಳಿತ ಮಂಡಳಿ ಕೋಟಾದಲ್ಲಿ ಹತ್ತು ಬಡ ವಿದ್ಯಾರ್ಥಿಗಳಿಗೆ ರಿಯಾಯ್ತಿ ದರದಲ್ಲಿ ಶಿಕ್ಷಣ ನೀಡಲು ನಿರ್ಧರಿಸಲಾಗಿದೆ~ ಎಂದು ಹೇಳಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT