ADVERTISEMENT

ವಾಣಿಜ್ಯ ಮಳಿಗೆ ನಿರ್ಮಿಸಲು ಮನವಿ

​ಪ್ರಜಾವಾಣಿ ವಾರ್ತೆ
Published 23 ಜನವರಿ 2011, 19:25 IST
Last Updated 23 ಜನವರಿ 2011, 19:25 IST

ಔರಾದ್: ಹೆಚ್ಚಿನ ಬಾಡಿಗೆ ಹೊರೆ ತಪ್ಪಿಸುವ ನಿಟ್ಟಿನಲ್ಲಿ ಪಟ್ಟಣದಲ್ಲಿ ಸರ್ಕಾರದ ವತಿಯಿಂದ ವಾಣಿಜ್ಯ ಮಳಿಗೆ ನಿರ್ಮಿಸುವಂತೆ ಇಲ್ಲಿಯ ವ್ಯಾಪಾರಸ್ಥರು ಮನವಿ ಮಾಡಿಕೊಂಡಿದ್ದಾರೆ.ಪಟ್ಟಣದ ನೂರಾರು ವ್ಯಾಪಾರಿಗಳು ಭಾನುವಾರ ಪ್ರವಾಸಿ ಮಂದಿರದಲ್ಲಿ ಶಾಸಕ ಪ್ರಭು ಚವ್ಹಾಣ ಅವರನ್ನು ಭೇಟಿ ಮಾಡಿ ಈ ಮನವಿ ಮಾಡಿಕೊಂಡರು.ಪಟ್ಟಣದಲ್ಲಿ ಅಂಗಡಿಗಳ ಸಂಖ್ಯೆ ಕಡಿಮೆ ಇದ್ದು ಬಾಡಿಗೆ ದರ ದುಬಾರಿಯಾಗಿದೆ.ಇದರಿಂದಾಗಿ ಸಣ್ಣ ಪುಟ್ಟ ವ್ಯಾಪಾರಿಗಳು ಹೆಚ್ಚುವರಿ ಬಾಡಿಗೆ ಭರಿಸಲಾಗದೆ ತೀವ್ರ ತೊಂದರೆಯಲ್ಲಿದ್ದಾರೆ ಎಂದರು.

ತಾಲ್ಲೂಕು ಆಡಳಿತ ಎಪಿಎಂಸಿ ಕ್ರಾಸ್‌ನಿಂದ ಮಿನಿ ವಿಧಾನಸೌಧವರೆಗೆ ಮುಖ್ಯ ರಸ್ತೆಯಲ್ಲಿನ ಅತಿಕ್ರಮಣ ತೆರವುಗೊಳಿಸುವುದಾಗಿ ಹೇಳಿದೆ. ಇದರಿಂದ ವ್ಯಾಪಾರಿಗಳಲ್ಲಿ ಆತಂಕ ಹೆಚ್ಚಾಗಿದೆ.ಈಗಾಗಲೇ ಗಣೇಶ ಮಾರ್ಕೆಟ್ ಜಾಗ ತೆರವುಗೊಳಿಸಿದ ಪರಿಣಾಮ ಸಾಕಷ್ಟು ಅಂಗಡಿಗಳು ನೆಲಸಮವಾಗಿವೆ.ಅಲ್ಲಿಯ ವ್ಯಾಪಾರಿಗಳು ಸಂಕಷ್ಟದ ನಡುವೆಯೂ ಮುಖ್ಯ ರಸ್ತೆಯಲ್ಲಿನ ಅಂಗಡಿ ಬಾಡಿಗೆ ಮೇಲೆ ಪಡೆದು ವ್ಯಾಪಾರ ಮಾಡುತ್ತಿದ್ದಾರೆ. ಈಗ ಈ ಅಂಗಡಿಗಳು ದಿಢೀರ್ ತೆರವುಗೊಳಿಸಿದರೆ ನಾವು ಎಲ್ಲಿಗೆ ಹೋಗಬೇಕು ಎಂದು ವ್ಯಾಪಾರಿಗಳು ಶಾಸಕರನ್ನು ಪ್ರಶ್ನಿಸಿದರು.

ಮಂಜೂರಾತಿ: ಖಾಲಿಯಾದ ಪಟ್ಟಣ ಪಂಚಾಯ್ತಿ ಜಾಗದಲ್ಲಿ 100 ಅಂಗಡಿಗಳ ನಿರ್ಮಾಣಕ್ಕೆ ಸರ್ಕಾರ 1 ಕೋಟಿ ರೂಪಾಯಿ ಮಂಜೂರಾತಿ ನೀಡಿದೆ ಎಂದು ಶಾಸಕ ಪ್ರಭು ಚವ್ಹಾಣ ಹೇಳಿದರು.ಇನ್ನು ಹೆಚ್ಚುವರಿ ಅನುದಾನಕ್ಕೆ ಬೇಡಿಕೆ ಸಲ್ಲಿಸಲಾಗಿದೆ ಎಂದರು.

ವ್ಯಾಪಾರಿಗಳ ಬೇಡಿಕೆ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ಅವರು ಹೇಳಿದರು.ವ್ಯಾಪಾರಿಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.