ವಿಜಯಪುರ: ಇಲ್ಲಿನ ಗುರಪ್ಪಸ್ವಾಮಿ ಮಠದ ಓಂಕಾರೇಶ್ವರಸ್ವಾಮಿಯವರ ಕಲ್ಲುಗಾಲಿ ರಥೋತ್ಸವ ಮಂಗಳವಾರ ಅದ್ಧೂರಿಯಾಗಿ ನೆರವೇರಿತು. ಸಾವಿರಾರು ಭಕ್ತರ ಜಯಘೋಷದ ನಡುವೆ ರಥೋತ್ಸವ ಜಿ.ಎಂ. ವೃತ್ತ ತಲುಪಿತು. ಸಂಜೆಯವರೆಗೂ ಜಿ.ಎಂ. ವೃತ್ತದಲ್ಲಿ ಭಕ್ತರು ಪೂಜೆ ಸಲ್ಲಿಸಿದರು.
ನಂತರ ರಥವನ್ನು ಎಳೆದು ದೂಳೋತ್ಸವ ಹಮ್ಮಿಕೊಳ್ಳಲಾಗಿತ್ತು. ರಥೋತ್ಸವ ಅಂಗವಾಗಿ ಬೆಳಿಗ್ಗೆಯಿಂದಲೇ ದೇವಾಲಯದಲ್ಲಿ ಸುಪ್ರಭಾತ ಸೇವೆ, ಅಭಿಷೇಕ, ವಿಶೇಷ ಅಲಂಕಾರಗಳು ನೆರವೇರಿದವು.ಗುರುಗುಂಡ ಬ್ರಹ್ಮೇಶ್ವರಸ್ವಾಮಿ ಸಂಸ್ಥಾನ ಮಠದ ನಂಜಾವಧೂತ ಸ್ವಾಮೀಜಿ ರಥೋತ್ಸವದ ನೇತೃತ್ವವಹಿಸಿದ್ದರು, ಓಂಕಾರೇಶ್ವರಸ್ವಾಮಿ ಒಕ್ಕಲಿಗರ ಟ್ರಸ್ಟ್ ಪದಾಧಿಕಾರಿಗಳು, ಪುರಸಭಾ ಸದಸ್ಯರು ಪಾಲ್ಗೊಂಡಿದ್ದರು.
ಗಿರಿಜಾ ಕಲ್ಯಾಣೋತ್ಸವ: ಜಾತ್ರಾ ಅಂಗವಾಗಿ ನಡೆದ ಗಿರಿಜಾ ಕಲ್ಯಾಣೋತ್ಸವವು ಅಸಂಖ್ಯಾತ ಭಕ್ತರ ಕಣ್ಮನ ತುಂಬಿಸಿತು. ಸಾಂಪ್ರದಾಯದಂತೆ ಸುಗಂಧ ದ್ರವ್ಯಗಳನ್ನು ಮಂಗಳವಾದ್ಯಗಳೊಂದಿಗೆ ಮೆರವಣಿಗೆಯಲ್ಲಿ ತಂದು ದೇವಾಲಯದಲ್ಲಿ ಶಾಸ್ತ್ರೋಕ್ತವಾಗಿ ಹಾರ ಬದಲಾಯಿಸಿ ಕಲ್ಯಾಣೋತ್ಸವ ನೆರವೇರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.