ADVERTISEMENT

ಶಂಕಿತ ನಕ್ಸಲ್ ಯಶೋದಾ ಖುಲಾಸೆ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2011, 19:30 IST
Last Updated 28 ಅಕ್ಟೋಬರ್ 2011, 19:30 IST

ಉಡುಪಿ: ಕಾರ್ಕಳ ತಾಲ್ಲೂಕಿನ ಈದುವಿನಲ್ಲಿ ನಡೆದಿದ್ದ ಪಶ್ಚಿಮ ಘಟ್ಟದ ಮೊದಲ ನಕ್ಸಲ್ ಎನ್‌ಕೌಂಟರ್ ಪ್ರಕರಣದಲ್ಲಿ ಬಂಧಿತ ಆರೋಪಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಕಳಸದ ಬಿ.ಟಿ.ಯಶೋದಾ (29) ಅವರನ್ನು ಉಡುಪಿ ಜಿಲ್ಲಾ ನ್ಯಾಯಾಲಯ ಶುಕ್ರವಾರ ಖುಲಾಸೆಗೊಳಿಸಿದೆ.

ಎಂಟು ವರ್ಷಗಳ ಹಿಂದಿನ ಪ್ರಕರಣದ ಬಗ್ಗೆ ಜಿಲ್ಲಾ ನ್ಯಾಯಾಧೀಶ ನರೇಂದ್ರ ಕುಮಾರ್ ಗುಣಕಿ ತೀರ್ಪು ಪ್ರಕಟಿಸಿದರು.

2003ರ  ನ.17ರಂದು ನಡೆದ ಎನ್‌ಕೌಂಟರ್‌ನಲ್ಲಿ ಹಾಜಿಮಾ ಮತ್ತು ಪಾರ್ವತಿ ಎಂಬ ಇಬ್ಬರು ಶಂಕಿತ ನಕ್ಸಲ್ ಯುವತಿಯರು ಹತರಾಗಿದ್ದರು. ಇನ್ನಿಬ್ಬರು ಆರೋಪಿಗಳಾದ ಆನಂದ ಮತ್ತು ವಿಷ್ಣು ತಪ್ಪಿಸಿಕೊಂಡಿದ್ದರು.

ಗುಂಡೇಟಿನಿಂದ ಗಾಯಗೊಂಡಿದ್ದ ಯಶೋದಾ ಅವರನ್ನು ಪೊಲೀಸರು ಬಂಧಿಸಿದ್ದರು. 3 ತಿಂಗಳು 20 ದಿನ ನ್ಯಾಯಾಂಗ ಬಂಧನದಲ್ಲಿದ್ದ ಯಶೋದಾ ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ತಿಂಗಳಿಗೊಮ್ಮೆ ನ್ಯಾಯಾಲಯಕ್ಕೆ ಹಾಜರಾಗುತ್ತಿದ್ದರು.

ಈ ಪ್ರಕರಣದಲ್ಲಿ ಸುಮಾರು 40 ಮಂದಿ ಸಾಕ್ಷಿದಾರರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಇದೇ ನವೆಂಬರ್‌ಗೆ ಎಂಟು ವರ್ಷ ಭರ್ತಿಯಾಗುತ್ತಿದ್ದ ಈ  ಪ್ರಕರಣದಿಂದ ಕೊನೆಗೂ ಅವರು ಖುಲಾಸೆಗೊಂಡಿದ್ದಾರೆ.

ತೀರ್ಪು ಹೊರಬಿದ್ದ ಬಳಿಕ ಮಾಧ್ಯಮದವರೊಂದಿಗೆ ಖುಷಿಯನ್ನು ಹಂಚಿಕೊಂಡ ಯಶೋದಾ ` ಈ ತೀರ್ಪಿನಿಂದ ಬಹಳ ಖುಷಿಯಾಗಿದೆ. ಇದು ಸತ್ಯಕ್ಕೆ ಸಿಕ್ಕ ಜಯ. ನಾನು ಯಾವ ತಪ್ಪನ್ನೂ ಮಾಡಿರಲಿಲ್ಲ ಎನ್ನುವುದು ಈಗಲಾದರೂ ಸಾಬೀತಾಗಿದೆ.

ಇನ್ನು ಮುಂದೆ ಊರಿನಲ್ಲಿ ಸಾಮಾಜಿಕ ಕೆಲಸ ಮಾಡಿಕೊಂಡಿರುತ್ತೇನೆ~ ಎಂದು ಪ್ರತಿಕ್ರಿಯಿಸಿದರು. ಆರೋಪಿ ಪರ ವಕೀಲ ಎಂ.ಶಾಂತಾರಾಂ ಶೆಟ್ಟಿ ಹಾಗೂ ಬಿ.ಎನ್.ಜಗದೀಶ್ ವಾದಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.