ADVERTISEMENT

ಶಿಕ್ಷಕರಿಗೆ ಶಿಸ್ತೇ ಭೂಷಣ; ಶಾಸಕ ನಾಡಗೌಡ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2011, 16:35 IST
Last Updated 5 ಫೆಬ್ರುವರಿ 2011, 16:35 IST

ರಾಯಚೂರು: ಭಾವಿ ಶಿಕ್ಷಕರಾದ ಪ್ರಶಿಕ್ಷಣಾರ್ಥಿಗಳು ಶಿಸ್ತನ್ನು ಮೈಗೂಡಿಸಿಕೊಳ್ಳಬೇಕು. ಜೀವನದಲ್ಲಿ ಶಿಸ್ತು ಹಾಗೂ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಶಾಸಕ ವೆಂಕಟರಾವ್ ನಾಡಗೌಡ ತಿಳಿಸಿದರು.

ಶನಿವಾರ ಇಲ್ಲಿನ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ನಿರ್ದೇಶನಾಲಯ ಹಾಗೂ ಯರಮರಸ್‌ನ ಜಿಲ್ಲಾ ಶಿಕ್ಷಣ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ವೀರಶೈವ ಸಮಾಜದ ಡಾ.ಎಸ್.ಬಿ ಅಮರಖೇಡ ಪ್ರಾಥಮಿಕ ಶಾಲಾ ಶಿಕ್ಷಕರ ತರಬೇತಿ ಕೇಂದ್ರವು ಆಯೋಜಿಸಿದ್ದ ಜಿಲ್ಲಾ ಮಟ್ಟದ ಡಿಇಡಿ ಕಾಲೇಜುಗಳ ಎನ್‌ಎಸ್‌ಎಸ್ ಘಟಕದ ಯುವಜನೋತ್ಸವ ಉದ್ಘಾಟಿಸಿ ಮಾತನಾಡಿದರು.

ಶಿಸ್ತು, ಸನ್ನಡತೆ ಇದ್ದರೆ ಮಾತ್ರ ವಿದ್ಯೆ. ಈಗ ಪ್ರಶಿಕ್ಷಣಾರ್ಥಿಗಳಾಗಿರುವವರು ಈ ಶಿಸ್ತಿನ ಬಗ್ಗೆ ಹೆಚ್ಚಿನ ಗಮನಹರಿಸಬೇಕು. ತಾವೇ ಶಿಸ್ತನ್ನು ಕಲಿಯದೇ ಶಿಕ್ಷಕರಾದ ಬಳಿಕ ಅವರು ಮಕ್ಕಳಿಗೆ ಏನನ್ನೂ ಕಲಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಧ್ವಜಾರೋಹಣ ನೆರವೇರಿಸಿದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ ಅಂಜನಪ್ಪ ಮಾತನಾಡಿ, ವಿದ್ಯೆ ಮತ್ತು ಪದವಿಗಿಂತ ಶಿಸ್ತು ಮುಖ್ಯ. ವಿದ್ಯಾರ್ಥಿಗಳನ್ನು ಉತ್ತಮ ಪ್ರಜೆಗಳನ್ನಾಗಿಸುವ ಗುರಿ ತಮ್ಮದಾಗಲಿ ಎಂದು ನುಡಿದರು.

ಡಯಟ್ ಪ್ರಾಚಾರ್ಯ ಜಿ.ಎಚ್ ವೀರಣ್ಣ, ವೀರಶೈವ ಸಮಾಜದ ಅಧ್ಯಕ್ಷ ಎಂ ವೀರನಗೌಡ, ಡಾ. ಎಸ್.ಬಿ ಅಮರಖೇಡ ಡಿ.ಎಡ್ ಕಾಲೇಜಿನ ಕಾರ್ಯದರ್ಶಿ ಕೆ.ಎಂ ಪಾಟೀಲ್, ಡಯಟ್ ಉಪನ್ಯಾಸಕ ವೈ.ಆರ್ ಗಾಡಿಗೋಳಿ, ಡಯಟ್ ಎನ್‌ಎಸ್‌ಎಸ್ ಅಧಿಕಾರಿ ಎಸ್.ಎಚ್ ದೊಡಮನಿ, ಉಪನ್ಯಾಸಕಿ ಲಲಿತಾ, ಉಪನ್ಯಾಸಕ ಸಿ.ಬಿ ಹಿರೇಮಠ ಹಾಗೂ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.