ADVERTISEMENT

ಶಿವಮೊಗ್ಗ: ಕಲಾ ಪ್ರತಿಭೋತ್ಸವ ಆರಂಭ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2012, 19:30 IST
Last Updated 22 ಆಗಸ್ಟ್ 2012, 19:30 IST

ಶಿವಮೊಗ್ಗ: ವಿದ್ಯಾರ್ಥಿಗಳು ತಮ್ಮ ಪ್ರತಿಭೆ ಅನಾವರಣಕ್ಕೆ ಸಿಕ್ಕ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಬಲ ಕಲಾವಿದ ತುಕಾರಾಮ್ ರಂಗದೋಳ್ ಸಲಹೆ ನೀಡಿದರು.

ನಗರದ ಸುವರ್ಣ ಸಂಸ್ಕೃತಿ ಭವನದಲ್ಲಿ ಬುಧವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಮ್ಮಿಕೊಂಡಿದ್ದ `ಕಲಾಪ್ರತಿಭೋತ್ಸವ~ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸ್ಪರ್ಧೆಯಲ್ಲಿ ಸೋಲು-ಗೆಲುವು ಸಹಜ. ಪ್ರಶಸ್ತಿ ಬಂದಾಗ ಹಿಗ್ಗಬಾರದು. ಸೋತಾಗ ಕುಗ್ಗಬಾರದು. ಸೋಲನ್ನು ಗೆಲುವಿನ ಮೆಟ್ಟಿಲು ಎಂದು ಭಾವಿಸಬೇಕು. ಪ್ರತಿಭಾ ಪ್ರದರ್ಶನಕ್ಕೆ ಇದೊಂದು ಸೂಕ್ತ ವೇದಿಕೆ. ಎಲ್ಲ ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯ ಪ್ರದರ್ಶಿಸಬೇಕು ಎಂದು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎನ್. ಹರಿಕುಮಾರ್ ಮಾತನಾಡಿ, ಪೋಷಕರು ಹಾಗೂ ಮಕ್ಕಳು ತೀರ್ಪಿನ ಬಗ್ಗೆ ಯೋಚಿಸಬಾರದು. ತೀರ್ಪುಗಾರರು ನಿಷ್ಪಕ್ಷಪಾತವಾಗಿ ತೀರ್ಪು ನೀಡುತ್ತಾರೆ. ಪ್ರತಿಯೊಂದು ವಿಭಾಗದಲ್ಲಿ ಪ್ರಥಮ ಮೂರು ಸ್ಥಾನಗಳನ್ನು ಪಡೆದವರನ್ನು ವಲಯಮಟ್ಟಕ್ಕೆ ಕಳುಹಿಸಿಕೊಡಲಾಗುತ್ತದೆ. ವಲಯಮಟ್ಟದಲ್ಲಿ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ನೀಡುವ ಮೂಲಕ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಬೇಕು ಎಂದು ಹಾರೈಸಿದರು.

ವಿವಿಧ ಸ್ಪರ್ಧೆಗಳು: ಕಲಾಪ್ರತಿಭೋತ್ಸವದಲ್ಲಿ ಬಾಲಪ್ರತಿಭೆ, ಯುವ ಪ್ರತಿಭೆ, ಕಿಶೋರ ಪ್ರತಿಭೆ ಕಲಾಪ್ರಕಾರಗಳು ಎಂಬ ವಿಭಾಗ ಮಾಡಲಾಗಿದೆ. ಪ್ರತಿಯೊಂದು ವಿಭಾಗದಲ್ಲಿ ಹಿಂದೂಸ್ತಾನಿ ವಾದ್ಯ, ಕರ್ನಾಟಕ ಸಂಗೀತ, ಶಾಸ್ತ್ರೀಯ ನೃತ್ಯ, ಸುಗಮ ಸಂಗೀತ, ಏಕಪಾತ್ರಾಭಿನಯ, ಜಾನಪದ ನೃತ್ಯ, ಚಿತ್ರಕಲೆ, ಭರತನಾಟ್ಯ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

ಮೊದಲ ದಿನವಾದ ಬುಧವಾರ 150ಕ್ಕೂ ಹೆಚ್ಚು ಮಕ್ಕಳು ಪಾಲ್ಗೊಂಡಿದ್ದರು. ಚಿತ್ರಕಲೆ, ಭರತನಾಟ್ಯ, ಜನಪದ ನೃತ್ಯ ಸ್ಪರ್ಧೆಗಳು ಜರುಗಿದವು.

ಕೆ.ಆರ್. ಸುಬ್ರಹ್ಮಣ್ಯ, ಶಿವಕುಮಾರ, ಶೈಲಜಾ, ಶ್ರೀನಿವಾಸ್, ಶ್ವೇತಾ ಪ್ರಕಾಶ್, ಕಾತ್ಯಾಯಿನಿ, ರಾಜೇಂದ್ರ, ಶಾಂತಾಶೆಟ್ಟಿ, ಸುರೇಖಾ ಹೆಗಡೆ, ಶಾಂತಾ ಆನಂದ್, ಕೊಟ್ರಪ್ಪ ಹಿರೇಮಾಗಡಿ ಮತ್ತಿತರರು ತೀರ್ಪುಗಾರರಾಗಿ ಭಾಗವಹಿಸಿದ್ದರು.


 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.