ಮಂಗಳೂರು: ಶತಮಾನೋತ್ಸವ ಆಚರಿಸುತ್ತಿರುವ ಕುದ್ರೋಳಿಯ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ಭಾನುವಾರ ಶಿವರಾತ್ರಿ ಹಿನ್ನೆಲೆಯಲ್ಲಿ ಲೋಕಕಲ್ಯಾಣ ಸಲುವಾಗಿ ಉರುಳು ಸೇವೆ ನಡೆಸಲಾಯಿತು.
ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಅವರ ನೇತೃತ್ವದಲ್ಲಿ 80ಕ್ಕೂ ಅಧಿಕ ಮಂದಿ ಬೆಳಿಗ್ಗೆ 10.45ರ ಸುಮಾರಿಗೆ ದೇವಸ್ಥಾನದ ಹೊರ ಆವರಣದಲ್ಲಿ ಒಂದು ಸುತ್ತು ಉರುಳುಸೇವೆ ಸಲ್ಲಿಸಿದರು. ಅವರ ಹಿಂಬದಿಯಲ್ಲೇ ಶಿವ ಮತ್ತು ಪಾರ್ವತಿಯರ ಉತ್ಸವ ಮೂರ್ತಿಗಳನ್ನು ಹೊತ್ತಿದ್ದ ಬೆಳ್ಳಿ ರಥವನ್ನು ಎಳೆಯಲಾಯಿತು.
`ಉರುಳು ಸೇವೆಯಲ್ಲಿ ಜಾತಿ, ಮತ ಭೇದವಿಲ್ಲದೆ ಹಲವಾರು ಮಂದಿ ಪಾಲ್ಗೊಂಡಿದ್ದಾರೆ. ನಾರಾಯಣ ಗುರುಗಳು ಸಮಾಜ ಸುಧಾರಣೆಯ ದಾರಿ ತೋರಿದವರು. ಅವರ ಆದರ್ಶವನ್ನು ಜಾರಿಗೆ ತರುವ ಪ್ರಯತ್ನ ಇಲ್ಲಿ ನಡೆಸಲಾಗುತ್ತಿದೆ~ ಎಂದು ಜನಾರ್ದನ ಪೂಜಾರಿ ಉರುಳುಸೇವೆ ನಂತರ ಪತ್ರಕರ್ತರಿಗೆ ತಿಳಿಸಿದರು.
ದೇವಸ್ಥಾನದ ಅಧ್ಯಕ್ಷ ಎಚ್. ಸಾಯಿರಾಂ, ಇತರ ಪದಾಧಿಕಾರಿಗಳಾದ ಪದ್ಮರಾಜ, ಮಹೇಶ್ಚಂದ್ರ, ರವಿಶಂಕರ್ ಮಿಜಾರ್ ಇತರರು ಪಾಲ್ಗೊಂಡಿದ್ದರು.
ಈ ಮಧ್ಯೆ, ಶಿವರಾತ್ರಿಗೆ ದೇವಸ್ಥಾನ ಸಜ್ಜಾಗಿದ್ದು ವಿದ್ಯುತ್ ದೀಪಗಳಿಂದ ಅಲಂಕೃತಗೊಂಡಿದೆ. ಸೋಮವಾರ ಭಾರಿ ಸಂಖ್ಯೆಯಲ್ಲಿ ಭಕ್ತರು ಇಲ್ಲಿ ಶಿವರಾತ್ರಿ ಜಾಗರಣೆ ನಡೆಸುವ ನಿರೀಕ್ಷೆ ಇದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.