ADVERTISEMENT

ಸಂಸ್ಕೃತಿ, ಪರಂಪರೆ ಅರಿವು ಮುಖ್ಯ: ಚಿ.ಮೂ.

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2012, 19:30 IST
Last Updated 20 ಫೆಬ್ರುವರಿ 2012, 19:30 IST

ಚಿತ್ರದುರ್ಗ: ಸಂಸ್ಕೃತಿ ಮತ್ತು ಪರಂಪರೆ ಅರಿವು ಇದ್ದರೆ ಮಾತ್ರ ನಮ್ಮ ಸ್ವಾಭಿಮಾನ ಹೆಚ್ಚುತ್ತದೆ. ಇಲ್ಲದಿದ್ದರೆ ವ್ಯಕ್ತಿ ಅಥವಾ ರಾಷ್ಟ್ರವಾಗಲಿ ಬೆಳೆಯಲು ಸಾಧ್ಯವಿಲ್ಲ ಎಂದು ಹಿರಿಯ ಸಾಹಿತಿ, ಸಂಶೋಧಕ ಡಾ.ಎಂ. ಚಿದಾನಂದಮೂರ್ತಿ ಅಭಿಪ್ರಾಯಪಟ್ಟರು.

ಚಿತ್ರದುರ್ಗ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಸೋಮವಾರ ಆಯೋಜಿಸಿದ್ದ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಉತ್ಸವ ಹಾಗೂ ಜಿಲ್ಲಾಮಟ್ಟದ ಕವಿಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.
ಶ್ರೇಷ್ಠ ಮೌಲ್ಯಗಳನ್ನು ತಿಳಿಯಬೇಕಾದರೆ ಹಿಂದಿನ ಹಳ್ಳಿಗಳನ್ನು ತಿಳಿದುಕೊಳ್ಳಬೇಕು. ಹಳ್ಳಿಯ ಜನರ ಜೀವನ ಇಂದಿಗೂ ಆದರ್ಶಮಯವಾದದ್ದು ಎಂದು ನುಡಿದರು.

ಕರ್ನಾಟಕದ ಪರಂಪರೆ ಅತ್ಯಂತ ಶ್ರೇಷ್ಠ. ಇಲ್ಲಿಂದ ನೇಪಾಳಕ್ಕೆ ಹೋದ ದೊರೆಗಳ ವಂಶಸ್ಥರು ಇಂದಿಗೂ ಕಾಠ್ಮಂಡುವಿನಲ್ಲಿದ್ದಾರೆ. ಇದೇ ರೀತಿಯಲ್ಲಿ ಐತಿಹಾಸಿಕ ಮತ್ತು ಪ್ರಾಕೃತಿಕ ಸೌಂದರ್ಯ ಹೊಂದಿರುವ ಹಂಪಿಯನ್ನು ಹೋಲುವ ಪ್ರದೇಶವನ್ನು ಜಗತ್ತಿನಲ್ಲಿಯೇ ಎಲ್ಲಿಯೂ ನಾನು ನೋಡಿಲ್ಲ. ಐತಿಹಾಸಿಕ ಸ್ಥಳವನ್ನು ನೋಡುವ ಜತೆಗೆ ಅದರ ಅಂತಃಸತ್ವವನ್ನು ಗ್ರಹಿಸಬೇಕು ಎಂದು ನುಡಿದರು.

ಸಂಶೋಧಕ ಡಾ.ಬಿ. ರಾಜಶೇಖರ್, ಪ್ರಾಧ್ಯಾಪಕ ಡಾ.ಕರಿಯಪ್ಪ ಮಾಳಿಗೆ, ವಾರ್ತಾಧಿಕಾರಿ ಎಂ. ಮಹೇಶ್ವರಯ್ಯ ಉಪಸ್ಥಿತರಿದ್ದರು. ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಿರಂಜನ ದೇವರಮನೆ ಪ್ರಾಸ್ತಾವಿಕ ಮಾತನಾಡಿದರು. ಡಿ. ಗೋಪಾಲಸ್ವಾಮಿ ನಾಯಕ ಸ್ವಾಗತಿಸಿದರು. ಕೆ.ಸಿ. ರುದ್ರೇಶ್ ವಂದಿಸಿದರು. ಜಯಾ ಪ್ರಾಣೇಶ್ ಕಾರ್ಯಕ್ರಮ ನಿರೂಪಿಸಿದರು. ಮೇಘನಾ ರವೀಶ್ ಪ್ರಾರ್ಥಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.