ADVERTISEMENT

ಸಜೀವ ದಹನ ಯತ್ನ:ಗರ್ಭಿಣಿ ಸೇರಿ ಇಬ್ಬರ ಸ್ಥಿತಿ ಗಂಭೀರ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2012, 19:30 IST
Last Updated 1 ಫೆಬ್ರುವರಿ 2012, 19:30 IST

ಬಾಗಲಕೋಟೆ: ಎಸ್‌ಡಿಎಂಸಿ ಅಧ್ಯಕ್ಷರ ಆಯ್ಕೆ ಹಿನ್ನೆಲೆಯಲ್ಲಿ ಎರಡು ಕುಟುಂಬಗಳ ನಡುವೆ ಉಂಟಾದ ವೈಷಮ್ಯ ಒಂದು ಕುಟುಂಬದ ಎಲ್ಲ ಸದಸ್ಯರನ್ನು ಸಜೀವವಾಗಿ ದಹಿಸಲು ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ಬಾಗಲಕೋಟೆ ತಾಲ್ಲೂಕಿನ ಶಿರೂರ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದೆ.

ಘಟನೆಯಲ್ಲಿ ಶಿರೂರ ಆಶ್ರಯ ಕಾಲೊನಿಯ ಯಲ್ಲಪ್ಪ ಸಂಜೀವ ಗಾಳಿ (52), ಅವರ ಮಗ ಬಸವರಾಜ ಗಾಳಿ (24) ಮತ್ತು ಸೊಸೆ 5ತಿಂಗಳ ಗರ್ಭಿಣಿ ಶಾಂತಾ ಬಸವರಾಜ ಗಾಳಿ ಸೇರಿದಂತೆ 3 ತೀವ್ರವಾಗಿ ಗಾಯಗೊಂಡಿದ್ದು ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಚಿಕಿತ್ಸೆಗಾಗಿ ಮಹಾರಾಷ್ಟ್ರದ ಮೀರಜ್‌ಗೆ ಕರೆದೊಯ್ಯಲಾಗಿದೆ. ಯಲಪ್ಪ ಗಾಳಿ ಮತ್ತು ಶಾಂತಾ ಗಾಳಿ ಅವರಿಗೆ ಶೇ.70 ರಷ್ಟು ಸುಟ್ಟಗಾಯಗಳಾಗಿದ್ದು  ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಈ ಕೃತ್ಯವೆಸಗಿದ ಆರೋಪದ ಮೇಲೆ ಶಿರೂರ ಗ್ರಾಮದ ರಾಮಪ್ಪ ಕಡಿವಾಲ ಅವರ ಮಕ್ಕಳಾದ ಬಸವರಾಜ  ಕಡಿವಾಲ, ಸಿದ್ದಪ್ಪ ಕಡಿವಾಲ, ಮಲ್ಲಪ್ಪ ಕಡಿವಾಲ, ಸಕ್ರಪ್ಪ ಕಡಿವಾಲ ಮತ್ತು ಇವರ ಮನೆಯ ಕೂಲಿ ಲಕ್ಷ್ಮಣ ಹನಮಪ್ಪ ಗಾಳಿ ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ಘಟನೆ ಹಿನ್ನೆಲೆ: ಶಿರೂರ ಆಶ್ರಯ ಕಾಲೊನಿಯ ಸರ್ಕಾರಿ ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರ ಆಯ್ಕೆಗೆ ಸಂಬಂಧಿಸಿದಂತೆ ಈ ಎರಡು ಕುಟುಂಬಗಳ ನಡುವೆ ವೈಮನಸ್ಸು ಉಂಟಾಗಿತ್ತು.

ಆರೋಪಿಗಳಲ್ಲಿ ಒಬ್ಬನಾದ ಸಿದ್ದಪ್ಪ ಕಡಿವಾಲ ಅದೇ ಶಾಲೆಯಲ್ಲಿ ಶಿಕ್ಷಕನಾಗಿದ್ದು, ಇತ್ತೀಚೆಗಷ್ಟೇ ಶಾಲಾ ಮುಖ್ಯ ಶಿಕ್ಷಕಿಯನ್ನು ಕೊಠಡಿಯೊಳಗೆ ಕೂಡಿಹಾಕಿ ಹಲ್ಲೆ ಮಾಡಿದ್ದ ಆರೋಪದ ಮೇಲೆ ಅಮಾನತುಗೊಂಡಿದ್ದ. ಎಸ್‌ಡಿಎಂಸಿ ಅಧ್ಯಕ್ಷರ ಆಯ್ಕೆಯನ್ನು ಪ್ರತಿಷ್ಠೆ ವಿಷಯವನ್ನಾಗಿಸಿಕೊಂಡ್ದ್ದಿದ ಈತನೇ ಘಟನೆಗೆ  ಪ್ರಮುಖ ಕಾರಣನಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕ್ಷುಲಕ ಕಾರಣಕ್ಕೆ ಯಲ್ಲಪ್ಪ ಸಂಜೀವ ಗಾಳಿ ಕುಟುಂಬವನ್ನೇ ಮುಗಿಸಲು ರಾಮಪ್ಪ ಕಡಿವಾಲ ಅವರ ಮಕ್ಕಳು ತೀರ್ಮಾನಿಸಿದ್ದರು ಎಂದು ತಿಳಿದುಬಂದಿದೆ. ಮಂಗಳವಾರ ಮಧ್ಯರಾತ್ರಿ 1ಗಂಟೆಗೆ ಯಲಪ್ಪ ಗಾಳಿ ಕುಟುಂಬದವರು ಮನೆಯಲ್ಲಿ ಮಲಗಿದ್ದ ಸಮಯದಲ್ಲಿ ದುಷ್ಕರ್ಮಿಗಳು ಮನೆಯ ಸುತ್ತ ವಿದ್ಯುತ್ ತಂತಿ ಎಳೆದು, ಬಳಿಕ ಮನೆಗೆ ಪೆಟ್ರೋಲ್ ಸುರಿದು, ಬೆಂಕಿ ಹಚ್ಚಿ ಕುಟುಂಬದವರು ಹೊರಬಾರದಂತೆ ಮನೆಗೆ ಬೀಗ  ಹಾಕಿ ಪರಾರಿಯಾಗಿದ್ದರು ಎನ್ನಲಾಗಿದೆ.ಬೆಂಕಿ ಕಂಡು ತಕ್ಷಣ ಎಚ್ಚೆತ್ತ ಮನೆಯಲ್ಲಿದ್ದವರು ಚೀರಾಡಿದಾಗ ಅಕ್ಕಪಕ್ಕದ ಮನೆಯವರು ಧಾವಿಸಿ, ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಲು ಹೆಸ್ಕಾಂ ಕಚೇರಿಗೆ ದೂರವಾಣಿ ಮೂಲಕ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.