ಮಂಗಳೂರು: `ನರೇಂದ್ರ ಮೋದಿ ಪ್ರಧಾನಿಯಾದರೆ ದೇಶದ ಮುಸ್ಲಿಮರು ಭಯೋತ್ಪಾದಕರಾಗುವ ಸಾಧ್ಯತೆ ಇದೆ ಎಂಬ ಅಜ್ಮೀರ್ ದರ್ಗಾದ ಅಧ್ಯಕ್ಷ ಸೈಯ್ಯದ್ ಸರ್ವರ್ ಚಿಸ್ತಿ ಹೇಳಿಕೆ ಹಾಸ್ಯಾಸ್ಪದವಾಗಿದೆ~ ಎಂದು ವಿಶ್ವ ಹಿಂದೂ ಪರಿಷತ್ ಅಂತರರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಗುರುವಾರ ಇಲ್ಲಿ ಹೇಳಿದರು.
ನಗರದ ಕದ್ರಿ ದೇವಸ್ಥಾನದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಮೋದಿ 10 ವರ್ಷಗಳಿಂದ ಗುಜರಾತ್ ಮುಖ್ಯಮಂತ್ರಿಯಾಗಿದ್ದಾರೆ. ಅಲ್ಲಿ ಮುಸ್ಲಿಮರು ಭಯೋತ್ಪಾಕರಾಗಿದ್ದಾರೆಯೇ~ ಎಂದು ಪ್ರಶ್ನಿಸಿದರು.
ಕೇಂದ್ರ ಸರ್ಕಾರವು ಅಲಹಾಬಾದ್ ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿಯೊಬ್ಬರ ಶಿಫಾರಸಿನಂತೆ ಅಯೋಧ್ಯೆಯಲ್ಲಿ 100 ಎಕರೆ ಪ್ರದೇಶದಲ್ಲಿ ಇಸ್ಲಾಮಿಕ್ ಸಾಂಸ್ಕೃತಿಕ ಕೇಂದ್ರ ಮಾಡಲು ಹೊರಟಿದೆ. ಇದಕ್ಕೆ ಹಿಂದೂ ಸಮಾಜ ಯಾವುದೇ ಕಾರಣಕ್ಕೆ ಅವಕಾಶ ನೀಡುವುದಿಲ್ಲ ಎಂದು ಚಂಪತ್ ರಾಯ್ ಹೇಳಿದರು.
`ಕೇಂದ್ರ ಸರ್ಕಾರವು ಅಯೋಧ್ಯೆಯ ವಿವಾದಾತ್ಮಕ ರಾಮ ಜನ್ಮಭೂಮಿಯನ್ನು ಹಿಂದೂಗಳಿಗೆ ಹಸ್ತಾಂತರಿಸಬೇಕು. ಅಯೋಧ್ಯೆಯಲ್ಲಿ ಹಿಂದೂ ದೇವಸ್ಥಾನದ ಕುರುಹುಗಳಿದ್ದಲ್ಲಿ ಹಿಂದೂಗಳ ಭಾವನೆಗಳಿಗೆ ಅನುಗುಣವಾಗಿ ನಡೆದುಕೊಳ್ಳಲಾಗುವುದು ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ಗೆ ಪ್ರಮಾಣ ಪತ್ರದ ಮೂಲಕ ಆಶ್ವಾಸನೆ ನೀಡಿದೆ.
ಕೆನಡಾದ ನುರಿತ ವಿಜ್ಞಾನಿಗಳಿಂದ ತೆಗೆಯಲಾದ ರೇಡಾರ್ ಫೋಟೋಗ್ರಫಿ ಹಾಗೂ ಭಾರತೀಯ ಪುರಾತತ್ವ ಇಲಾಖೆ ನಡೆಸಿದ ಉತ್ಖನನದಿಂದ 1528ರ ಪೂರ್ವದಲ್ಲಿ ದೊಡ್ಡ ದೇವಸ್ಥಾನವಿದ್ದ ಪುರಾವೆ ಲಭಿಸಿದೆ~ ಎಂದರು.
`ಚೀನಾ ವಿರುದ್ಧ 1962ರ ಯುದ್ಧದ ಕಡತಗಳನ್ನು ಬಹಿರಂಗಪಡಿಸಬೇಕು. ಇದರ ದಾಖಲೆಗಳನ್ನು ಸೇನೆಯ ಅಧಿಕಾರಿಗಳು ಅಧ್ಯಯನ ಮಾಡಿದಲ್ಲಿ ನಾವು ಎಲ್ಲಿ ಎಡವಿದ್ದೇವೆ ಎಂಬುದನ್ನು ತಿಳಿದಕೊಳ್ಳಲು ಸಾಧ್ಯವಾಗುತ್ತದೆ~ ಎಂದರು.
ಬಾಂಗ್ಲಾ ದೇಶದ ನುಸುಳುಕೋರರನ್ನು ಪತ್ತೆ ಹಚ್ಚುವ ಕೆಲಸ ಪರಿಣಾಮಕಾರಿಯಾಗಬೇಕು. ನುಸುಳುಕೋರರಿಗೆ ಆಸ್ತಿ ಹೊಂದುವ ಹಕ್ಕು, ಮತದಾನದ ಹಕ್ಕು, ಸರ್ಕಾರಿ ಉದ್ಯೋಗಾವಕಾಶಗಳನ್ನು ನೀಡಬಾರದು ಎಂದೂ ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.