ADVERTISEMENT

ಸಿಪಿಎಂ ಸಮ್ಮೇಳನಕ್ಕೆ ಅಂತಿಮ ಹಂತದ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 2 ಜನವರಿ 2012, 19:30 IST
Last Updated 2 ಜನವರಿ 2012, 19:30 IST

ಬಾಗೇಪಲ್ಲಿ: ಚಿಕ್ಕಬಳ್ಳಾಪುರದಲ್ಲಿ ಜ. 8ರಿಂದ 11ರ ವರೆಗೆ ನಡೆಯಲಿರುವ ಸಿಪಿಎಂ 20ನೇ ರಾಜ್ಯ ಸಮ್ಮೇಳನಕ್ಕೆ  ಭರದಿಂದ ಸಿದ್ಧತೆ ನಡೆದಿದ್ದು,ಪಕ್ಷದ ಕಾರ್ಯಕರ್ತರಿಗೆ ಅಗತ್ಯ ತರಬೇತಿ ನೀಡಲಾಗುತ್ತಿದೆ.

ಪ್ರಾಥಮಿಕ ಹಂತದ ಸಿದ್ಧತೆಗಳನ್ನು ಪೂರ್ಣಗೊಳಿಸಿರುವ ಪಕ್ಷದ ಕಾರ್ಯಕರ್ತರು ಈಗ ಅಂತಿಮ ಹಂತದ ಸಿದ್ಧತೆಯಲ್ಲಿ ತೊಡಗಿಕೊಂಡಿದ್ದಾರೆ. ಗೋಡೆ ಬರಹ, ಬ್ಯಾನರ್, ಬಂಟಿಂಗ್ಸ್ ಕಟ್ಟುವುದು ಮುಂತಾದವುಗಳನ್ನು ಕೈಗೊಂಡಿರುವ ಪಕ್ಷದ ಕಾರ್ಯಕರ್ತರು ಪಥಸಂಚಲನಕ್ಕೆ ಸಂಬಂಧಿಸಿದಂತೆಯೂ ತರಬೇತಿ ಪಡೆಯುತ್ತಿದ್ದಾರೆ.

`ಸಮ್ಮೇಳನದ ಮೊದಲ ದಿನದಂದು ಬೃಹತ್ ಪ್ರಮಾಣದ ರ‌್ಯಾಲಿ ನಡೆಯಲಿದ್ದು, ಸುಮಾರು 20 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಕೆಂಪು ಸಮವಸ್ತ್ರಗಳನ್ನು ತೊಟ್ಟು, ಕೈಗಳಲ್ಲಿ ಕೆಂಬಾವುಟಗಳನ್ನು ಹಿಡಿದು ಚಿಕ್ಕಬಳ್ಳಾಪುರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಕಾರ್ಯಕರ್ತರು ಆಗಮಿಸಲಿದ್ದಾರೆ. ಬಾಗೇಪಲ್ಲಿ, ಗುಡಿಬಂಡೆ ತಾಲ್ಲೂಕುಗಳಿಂದ 500ಕ್ಕೂ ಹೆಚ್ಚು ಕಾರ್ಯಕರ್ತರು ಪಥಸಂಚಲನದಲ್ಲಿ ಭಾಗವಹಿಸಲಿದ್ದಾರೆ~ ಎಂದು ಸಿಪಿಎಂ ಮುಖಂಡ ಎಂ.ಪಿ. ಮುನಿವೆಂಕಟಪ್ಪ ತಿಳಿಸಿದರು.

`ಪಕ್ಷದ ಕಾರ್ಯಕರ್ತರಿಗೆ ಶಿಸ್ತು, ಬದ್ಧತೆ, ಸಂಯಮ ಕುರಿತು ತರಬೇತಿ ನೀಡಲಾಗುತ್ತಿದೆ. ಬೃಹತ್ ರ‌್ಯಾಲಿ ಸೇರಿದಂತೆ ಸಮ್ಮೇಳನವು ಅಚ್ಚುಕಟ್ಟಿನಿಂದ ನಡೆಯಲಿದೆ. ಅಂತಿಮ ಹಂತದ ಸಿದ್ಧತೆಗಳು ಇನ್ನೂ ಬಾಕಿಯಿದ್ದು, ಪೂರ್ಣಗೊಳಿಸಲಾಗುತ್ತಿದೆ~ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಸಿಪಿಎಂ ಮುಖಂಡರಾದ ಚನ್ನರಾಯಪ್ಪ, ಒಬಳರಾಜು, ಮಹಮ್ಮದ್ ಅಕ್ರಂ, ಮಂಜುನಾಥರೆಡ್ಡಿ ಮುಂತಾದವರು ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.