ಹಾವೇರಿ: `ಲೋಕಾಯುಕ್ತರ ನೇಮಕ ಕುರಿತು ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್ನ ಸ್ಪಷ್ಟ ನಿರ್ದೇಶನ ಕೇಳಿದೆ. ನಿರ್ದೇಶನ ಬಂದ ನಂತರವೇ ನೇಮಕ ಪ್ರಕ್ರಿಯೆ ಆರಂಭಿಸಲಿದೆ~ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಹೇಳಿದರು.
ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಉದ್ಘಾಟನೆಗಾಗಿ ಶನಿವಾರ ಶಿಗ್ಗಾವಿ ತಾಲ್ಲೂಕಿನ ಗೊಟಗೋಡಿಗೆ ತೆರಳುವ ಮುನ್ನ ಶಿಗ್ಗಾವಿ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಲೋಕಾಯುಕ್ತರ ನೇಮಕ ಮಾಡಲು ಸರ್ಕಾರ ಹಿಂದೇಟು ಹಾಕುತ್ತಿಲ್ಲ. ಮೂರು ತಿಂಗಳ ಹಿಂದೆಯೇ ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಈ ಕುರಿತು ಪತ್ರ ಬರೆದಿದ್ದೇನೆ~ ಎಂದರು.
`ಉಪ ಲೋಕಾಯುಕ್ತರ ನೇಮಕವನ್ನು ಹೈಕೋರ್ಟ್ ರದ್ದುಗೊಳಿಸಿದ ಹಿನ್ನೆಲೆಯಲ್ಲಿ ಲೋಕಾಯುಕ್ತರ ನೇಮಕ ವಿಚಾರದಲ್ಲಿ ಮುಖ್ಯಮಂತ್ರಿಗಳ ಅಧಿಕಾರ ವ್ಯಾಪ್ತಿ ಕುರಿತು ಕೆಲವು ಗೊಂದಲಗಳು ಉಂಟಾಗಿವೆ. ಆದ್ದರಿಂದ ಸ್ಪಷ್ಟನೆ ಪಡೆದುಕೊಳ್ಳುವುದಕ್ಕಾಗಿಯೇ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಲಾಗಿದೆ~ ಎಂದರು. ಸುಪ್ರೀಂ ಕೋರ್ಟ್ಗೆ ರಜಾ ಕಾಲ ಇರುವುದರಿಂದ ರಾಜ್ಯ ಸರ್ಕಾರದ ಮೇಲ್ಮನವಿ ವಿಚಾರಣೆ ವಿಳಂಬವಾಗಿದೆ. ರಜೆ ಮುಗಿಯುತ್ತಿದ್ದಂತೆಯೇ ಇದೊಂದು ವಿಶೇಷ ಪ್ರಕರಣವೆಂದು ಪರಿಗಣಿಸಿ ಶೀಘ್ರಗತಿಯಲ್ಲಿ ಇತ್ಯರ್ಥಪಡಿಸುವಂತೆ ಸರ್ಕಾರ ಮನವಿ ಸಲ್ಲಿಸಲಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಸುಪ್ರೀಂ ಕೋರ್ಟ್ ಈ ಪ್ರಕರಣದಲ್ಲಿ ಯಾವ ನಿರ್ದೇಶನ ನೀಡುತ್ತದೆಯೋ ಅದರ ಆಧಾರದ ಮೇಲೆ ರಾಜ್ಯ ಲೋಕಾಯುಕ್ತರ ನೇಮಕ ಮಾಡಲಾಗುವುದು. ಈಗಾಗಲೇ ವಿರೋಧ ಪಕ್ಷ ನಾಯಕರು ಕೆಲವೊಂದು ಅರ್ಹ ವ್ಯಕ್ತಿಗಳ ಹೆಸರಿನ ಪಟ್ಟಿಯನ್ನು ನೀಡಿದ್ದಾರೆ. ಪ್ರಕ್ರಿಯ ಆರಂಭ ಮಾಡುತ್ತಿದ್ದಂತೆಯೇ ಆ ಪಟ್ಟಿಯಲ್ಲಿನ ಹೆಸರುಗಳನ್ನು ಪರಿಗಣಿಸಲಾಗುವುದು ಎಂದರು.
ಬರ ತಾಲ್ಲೂಕುಗಳ ಘೋಷಣೆ: ರಾಜ್ಯದಲ್ಲಿ ಮುಂಗಾರು ವಿಳಂಬವಾಗಿರುವುದರಿಂದ ಬರ ತಾಲ್ಲೂಕುಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಈಗಾಗಲೇ ಸರ್ಕಾರದ ಕಾರ್ಯದರ್ಶಿಗಳು ರಾಜ್ಯದಲ್ಲಿ ಪ್ರವಾಸ ಕೈಗೊಂಡಿದ್ದು, ಒಂದು ವಾರದಲ್ಲಿ ವರದಿ ಸಲ್ಲಿಸಲು ತಿಳಿಸಲಾಗಿದೆ. ಅವರ ವರದಿಯ ಆಧಾರದ ಮೇಲೆ ರಾಜ್ಯದಲ್ಲಿ ಹೆಚ್ಚುವರಿ ಬರ ತಾಲ್ಲೂಕುಗಳ ಘೋಷಣೆ ಮಾಡಲಾಗುವುದು ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.