ADVERTISEMENT

ಸೇನಾ ನೇಮಕಾತಿಗೆ ಅಡ್ಡಿಯಾದ ಕನ್ನಡ!

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2012, 19:30 IST
Last Updated 15 ಅಕ್ಟೋಬರ್ 2012, 19:30 IST
ಸೇನಾ ನೇಮಕಾತಿಗೆ ಅಡ್ಡಿಯಾದ ಕನ್ನಡ!
ಸೇನಾ ನೇಮಕಾತಿಗೆ ಅಡ್ಡಿಯಾದ ಕನ್ನಡ!   

ಕೆಜಿಎಫ್: ಭಾರತೀಯ ಸೇನೆಗೆ ಸೇರುವ ಆಸೆಯಿಂದ ಬಂದ ಸಾವಿರಾರು ಯುವಕರಿಗೆ ಕನ್ನಡದಲ್ಲಿದ್ದ ದಾಖಲಾತಿಗಳು ನೇಮಕಾತಿಗೆ ಅಡ್ಡಿಯಾದ ಘಟನೆ ಸೋಮವಾರ ನಡೆಯಿತು. ಈ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ಪರಿತಾಪ ಪಡುತ್ತಿದ್ದ ದೃಶ್ಯಗಳೂ ಕಂಡುಬಂದವು.

ಇಲ್ಲಿನ ಬೆಮೆಲ್ ಕ್ರೀಡಾಂಗಣದಲ್ಲಿ ಮೂರು ದಿನಗಳಿಂದ ನಡೆಯುತ್ತಿರುವ ಸೇನಾ ನೇಮಕಾತಿ ರ‌್ಯಾಲಿಯು ಹತ್ತಾರು ಜಿಲ್ಲೆಗಳ ಸಾವಿರಾರು ಆಕಾಂಕ್ಷಿಗಳಲ್ಲಿ ಮಹತ್ವಾಕಾಂಕ್ಷೆ, ಭರವಸೆ ಮೂಡಿಸಿತ್ತು. ಆದರೆ ಕನ್ನಡದಲ್ಲಿರುವ ಪ್ರಮಾಣ ಪತ್ರಗಳನ್ನು ಸೇನೆಯ ಅಧಿಕಾರಿಗಳು ಸಾರಾಸಗಟಾಗಿ ತಿರಸ್ಕರಿಸಿದ್ದು ಆಕಾಂಕ್ಷಿಗಳು ಮತ್ತು ಪೋಷಕರಲ್ಲಿ ಗೊಂದಲ ಮೂಡಿಸಿ ನಿರಾಶೆಯನ್ನೂ ತಂದಿತು.

ಜಾತಿ ಪ್ರಮಾಣ ಪತ್ರ ಮತ್ತು ವಾಸಸ್ಥಳ ದೃಢೀಕರಣ ಪತ್ರ ಕನ್ನಡದಲ್ಲಿದ್ದ ಕಾರಣ, ಅದನ್ನು ಸೇನೆಯ ಅಧಿಕಾರಿಗಳು ಸ್ಪಷ್ಟವಾಗಿ ನಿರಾಕರಿಸಿದರು. ಪರಿಣಾಮ ಇತರೆ ಎಲ್ಲ ಅರ್ಹತೆಗಳಿದ್ದರೂ ಯುವಕರು ವಾಪಸ್ ತೆರಳಿದ ಘಟನೆಯೂ ನಡೆಯಿತು.

ನೊಂದ ಪೋಷಕರು ಸೋಮವಾರ ಸೇನೆಯ ಹಿರಿಯ ಅಧಿಕಾರಿಗಳಿಗೆ ದೂರು ಸಲ್ಲಿಸಿದರು. ನಂತರ ಹಿರಿಯ ಅಧಿಕಾರಿ ಯಶವಂತ್ ಠಾಕೂರ್ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದರು. ಕನ್ನಡದಲ್ಲಿ ಬಂದ ದಾಖಲೆಗಳನ್ನು ಸೇನೆ ಸಿಬ್ಬಂದಿ ಅಂಗೀಕರಿಸುತ್ತಿಲ್ಲ. ಐದು ದಿನಗಳಿಂದ ಸಾಕಷ್ಟು ಯುವಕರು ವಾಪಸ್ ಹೋಗಿದ್ದಾರೆ ಎಂದು ದಾಖಲೆಗಳನ್ನು ಪರಿಶೀಲಿಸುತ್ತಿದ್ದ ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರದ ಸಿಬ್ಬಂದಿ ತಿಳಿಸಿದರು.

ನಂತರ ನೆಮ್ಮದಿ ಕೇಂದ್ರ ನೀಡಿದ ಕನ್ನಡ ದಾಖಲೆಗಳನ್ನು ಅಂಗೀಕರಿಸುವಂತೆ ಠಾಕೂರ್ ಸಿಬ್ಬಂದಿಗೆ ಸೂಚಿಸಿದರು. ದಾಖಲೆಗಳು ಕನ್ನಡದಲ್ಲಿವೆ ಎಂಬ ಕಾರಣದಿಂದ ತಿರಸ್ಕೃತಗೊಂಡವರು ತಕ್ಷಣ ಸೇನೆ ಅಧಿಕಾರಿಗಳನ್ನು ಕಾಣಬೇಕು. ಕೋಲಾರ ಜಿಲ್ಲೆಯ ಯುವಕರಿಗೆ ಸೇನೆಯಲ್ಲಿ ಹೆಚ್ಚಿನ ಆದ್ಯತೆ ನೀಡಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.

ಅವಕಾಶ ತಪ್ಪಿದರೆ ನವೆಂಬರ್ 3ರಂದು ಬಳ್ಳಾರಿಯಲ್ಲಿ ನಡೆಯುವ ಸೇನಾ ನೇಮಕಾತಿಯಲ್ಲಿ ಯುವಕರು ಭಾಗವಹಿಸಬಹುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.