ADVERTISEMENT

ಸ್ಥಳೀಯ ಸಂಸ್ಥೆ ಪ್ರಜಾಪ್ರಭುತ್ವದ ಬೇರು

​ಪ್ರಜಾವಾಣಿ ವಾರ್ತೆ
Published 24 ಜನವರಿ 2011, 19:30 IST
Last Updated 24 ಜನವರಿ 2011, 19:30 IST

ಕಡೂರು: ಗ್ರಾಮ ಪಂಚಾಯಿತಿಯಿಂದ ಜಿಲ್ಲಾ ಪಂಚಾಯಿತಿವರೆಗಿನ ಸ್ಥಳೀಯ ಸಂಸ್ಥೆಗಳು ಪ್ರಜಾಪ್ರಭುತ್ವದ ಬೇರು ಆಗಿದ್ದು, ಸದಸ್ಯರು ಅದರ ಜೀವಾಳ.ಸದಸ್ಯರಿಂದ ಬೇರು ಗಟ್ಟಿಯಾದರೆ ಮಾತ್ರ ಪ್ರಜಾಪ್ರಭುತ್ವಕ್ಕೆ ಅರ್ಥ ಎಂದು ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಅಭಿಪ್ರಾಯಪಟ್ಟರು.

ತಾಲ್ಲೂಕು ಪಂಚಾಯಿತಿ ಕಾರ್ಯಾಲಯದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಸಮ್ಮಿಲನ-ಅಭಿನಂದನಾ ಸಮಾರಂಭದ ಮುಖ್ಯ ಅತಿಥಿಯಾಗಿದ್ದ ಅವರು, ಜನಸಾಮಾನ್ಯರು ನಿರಾಳವಾಗಿ ಉಸಿರಾಡಲು ಪ್ರಜಾಪ್ರಭುತ್ವ ಅನುಕೂಲ ಮಾಡಿಕೊಡುತ್ತದೆ. ನಾವು ಪ್ರಜಾಪ್ರಭುತ್ವದ ಅಂಗ ಎಂದು ಹೆಮ್ಮೆಯಿಂದ ಹೇಳಿಕೊಳ್ಳಲು ಸಾಧ್ಯವಾಗಿದೆ ಎಂದರು.

ಚುನಾಯಿತ ಸದಸ್ಯ, ಮತದಾರರಿಗೆ ಸುಳ್ಳು ಭರವಸೆ ನೀಡದೆ, ವಾಸ್ತವ ಪರಿಸ್ಥಿತಿ ವಿವರಿಸಬೇಕು.ಕೆಲಸ ಮಾಡಿಕೊಡಲು ಸಾಧ್ಯವೇ, ಇಲ್ಲವೇ ಎಂಬುದನ್ನು ನೇರವಾಗಿ ಹೇಳಬೇಕು. ಸಾಧ್ಯವಿದ್ದಲ್ಲಿ ನಿಷ್ಪಕ್ಷಪಾತವಾಗಿ ಮಾಡಿಕೊಡಬೇಕು ಎಂದರು.

ಹಿರಿಯರ ಕಿವಿಮಾತಿನ ‘ಮರೆಯಬೇಡಿ, ಮುರಿಯಬೇಡಿ ಮತ್ತು ಮೆರೆಯಬೇಡಿ’ ಎಂಬ ‘ಮೂರು ಸೂತ್ರ’ಗಳತ್ತ ನೂತನ ಸದಸ್ಯರ ಗಮನ ಸೆಳೆದರು.ಶಾಸಕ ಡಾ. ವೈ.ಸಿ.ವಿಶ್ವನಾಥ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಕೆ.ಎಂ.ಕೆಂಪರಾಜು, ಉಪಾಧ್ಯಕ್ಷೆ ಭಾರತಿ, ಮಾಜಿ ಅಧ್ಯಕ್ಷ ಬೆಳ್ಳಿಪ್ರಕಾಶ್, ಸಿದ್ದರಾಮಪ್ಪ, ಮೋಹನ್, ಸೋಮಶೇಖರ್, ಕಲಾವತಿ ಅನುಭವ ಹಂಚಿಕೊಂಡರು. ಜಿ. ಪಂ. ಸಿಇಒ ರಾಮಣ್ಣ, ಮಹೇಶ್ವರಪ್ಪ, ತಾಲ್ಲೂಕು ಪಂಚಾಯಿತಿ ಅಧಿಕಾರಿ ದೇವರಾಜ್,    ಕಾರ್ಯನಿರ್ವಹಣೆ ಕುರಿತು ಮಾತನಾಡಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.