ಚಿಂಚೋಳಿ: ಲಂಬಾಣಿಗರ ಕುಟುಂಬವೊಂದರ 9 ತಿಂಗಳ ಹೆಣ್ಣು ಮಗುವನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿ (ಸಿಡಿಪಿಒ) ಮಹಮದ್ ರಫಿ ಶಕಾಲೆ ಅವರಿಗೆ ಮಗುವಿನ ತಂದೆ ತಾಯಿ ಹಸ್ತಾಂತರಿಸಿದ ಘಟನೆ ಶುಕ್ರವಾರ ನಡೆಯಿತು. ಇದಕ್ಕೆ `ಹೆತ್ತ ಮಕ್ಕಳನ್ನು ಸಾಕಲು ಆಗುತ್ತಿಲ್ಲ~ ಎಂದು ಕಾರಣ ನೀಡಲಾಗಿದೆ.
ಇಲ್ಲಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಗೆ ಶುಕ್ರವಾರ ಬೆಳಿಗ್ಗೆ 10.30ಕ್ಕೆ ಆಗಮಿಸಿದ ಭಿಕ್ಕು ನಾಯಕ ತಾಂಡಾದ ಸರಿತಾ ಶಂಕರ ಜಾಧವ್ ದಂಪತಿ 9 ತಿಂಗಳ ಮಗು ಸೋನಾಬಾಯಿಯನ್ನು ಗುಲ್ಬರ್ಗದ ಅಮೂಲ್ಯ ಶಿಶುಗೃಹಕ್ಕೆ ದತ್ತು ನೀಡಲು ಸಿಡಿಪಿಒಗೆ ಹಸ್ತಾಂತರಿಸಿದರು.
ಭಿಕ್ಕುನಾಯಕ್ ತಾಂಡಾಕ್ಕೆ ಗುರುವಾರ ಭೇಟಿ ನೀಡಿದ ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸವರಾಜ ನಾಯಕ್ ಅವರ ಸಮ್ಮುಖದಲ್ಲಿಯೇ ಈ ದಂಪತಿ ಮಕ್ಕಳನ್ನು ಸಾಕಲು ಆಗುತ್ತಿಲ್ಲ ಎಂದು ಹೇಳಿ 2 ಹೆಣ್ಣು ಶಿಶುಗಳನ್ನು ದತ್ತು ನೀಡುತ್ತಿರುವುದಾಗಿ ತಿಳಿಸಿದ್ದರು.
ಗುರುವಾರ ರಾತ್ರಿ ತಾಂಡಾದಲ್ಲಿ ಸ್ಥಳೀಯರು ಸಭೆ ಸೇರಿ, 2 ವರ್ಷದ ಸಾವಿತ್ರಾಬಾಯಿಯನ್ನು ದತ್ತು ಕೊಡುವುದು ಬೇಡ ಎಂದು ಹೇಳಿದ್ದರಿಂದ ಹಾಗೂ ಮಗು ವಿರೋಧ ವ್ಯಕ್ತಪಡಿಸಿ ಮನೆಯಲ್ಲಿ ಅವಿತುಕೊಂಡಿದ್ದರಿಂದ ತಮ್ಮ ನಿರ್ಧಾರ ಬದಲಿಸಿದ್ದರು. ಬಳಿಕ ಒಂದೇ ಹೆಣ್ಣು ಮಗುವನ್ನು ಅನಾಥಾಶ್ರಮಕ್ಕೆ ನೀಡಲು ಬಂದಿದ್ದೇವೆ ಎಂದರು.
ಸೋನಾಬಾಯಿ ಅಲಿಯಾಸ್ ಪುಣ್ಯಮ್ಮ ಎಂಬ ಮಗುವನ್ನು ಸ್ವೀಕರಿಸಿದ ಸಿಡಿಪಿಒ, ಮಗುವನ್ನು ಹಾಗೂ ಮಗುವಿನ ತಂದೆ ತಾಯಿಯನ್ನು ಕರೆದುಕೊಂಡು ಗುಲ್ಬರ್ಗಕ್ಕೆ ತೆರಳಿದರು. ಗುಲ್ಬರ್ಗದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಮೂಲ್ಯ ಶಿಶುಗೃಹಕ್ಕೆ ಮಗುವನ್ನು ಒಪ್ಪಿಸಲಾಗುವುದು ಎಂದು `ಪ್ರಜಾವಾಣಿ~ಗೆ ತಿಳಿಸಿದರು.
ಸರಿತಾ ತಾಯಿ (ಮಗುವಿನ ಅಜ್ಜಿ) ಬದಲಿಬಾಯಿ, ಮೇಲ್ವಿಚಾರಕಿಯರಾದ ಪ್ರೇಮಿಳಾ, ಪಾರ್ವತಿ, ಸುನಿತಾ, ಸಹಾಯಕರಾದ ಲಕ್ಷ್ಮಣ, ರುದ್ರಮುನಿ ಬುಗಡಿಕರ್, ಭಿಕ್ಕು ನಾಯಕ್ ತಾಂಡಾದ ಅಂಗನವಾಡಿ ಕಾರ್ಯಕರ್ತೆ ಸೀತಾಬಾಯಿ ಶಂಕರ ಇದ್ದರು. ಕೆಲವು ದಿನಗಳ ಹಿಂದೆ ಇದೇ ತಾಂಡಾದ ವಿನೋದ್- ಶೋಭಾ ದಂಪತಿ, ತಮ್ಮ ಗಂಡು ಮಗುವನ್ನು ಅಮೂಲ್ಯ ಶಿಶುಗೃಹಕ್ಕೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.