ನಿಪ್ಪಾಣಿ: ‘ಕುಟುಂಬ ಮತ್ತು ಸಮಾಜದಿಂದ ಸಹಜ ಪ್ರೀತಿ, ಲೈಂಗಿಕ ಅಲ್ಪಸಂಖ್ಯಾತರಿಗೆ ಸಿಗುತ್ತಿಲ್ಲ. ಸಮಾಜದಿಂದ ನೋವು, ತಾತ್ಸಾರ ಅನುಭವಿಸುತ್ತಿದ್ದ ಅವರನ್ನು ಉಪೇಕ್ಷೆ ಮಾಡಲಾಗುತ್ತಿದೆ. ಅವರೂ ಸಮಾಜದ ಒಂದು ಭಾಗವಾಗಿದ್ದು ಅವರ ಪ್ರಕೃತಿ ದತ್ತವಾದ ಹುಟ್ಟನ್ನು ಸಹಾನುಭೂತಿಯಿಂದ ಕಂಡು ಅವರನ್ನು ಗೌರವದಿಂದ ಬಾಳಲು ಬಿಡಬೇಕು’ ಎಂದು ಶಾಸಕಿ ಶಶಿಕಲಾ ಜೊಲ್ಲೆ ಸಲಹೆ ನೀಡಿದರು.
ಬೆಳಗಾವಿಯ ಸ್ವೀಕಾರ ಸಂಘದ ಇಲ್ಲಿನ ಮುರಗೋಡ ರಸ್ತೆಯ ಶಾಖೆಯಲ್ಲಿ ಮಂಗಳವಾರ ಲೈಂಗಿಕ ಅಲ್ಪಸಂಖ್ಯಾತರ ಮತ್ತು ಎಚ್ಐವಿ ಪೀಡಿತರ ಸಮಸ್ಯೆ ಕುರಿತು ಆಯೋಜಿಸಲಾದ ಸಭೆಯಲ್ಲಿ ಅವರು ಮಾತನಾಡಿದರು.
ಸಂಘದ ಅಧ್ಯಕ್ಷ ಮಹೇಶ ಕದಮ್ ಮಾತನಾಡಿ, ‘ಸಂಘವು ಲೈಂಗಿಕ ಅಲ್ಪಸಂಖ್ಯಾತರ ಸಮುದಾಯದ ಬೇಡಿಕೆಗಳ ಈಡೇರಿಕೆಗೆ ಹೋರಾಟ ನಡೆಸಿದೆ. ನಗರದಲ್ಲಿಯೂ 2005ರಿಂದ ಶಾಖೆ ಕಾರ್ಯ ನಿರ್ವಹಿಸುತ್ತಿದ್ದು ಅವರ ಸಮಸ್ಯೆಗಳನ್ನು ಸ್ಪಂದಿಸುತ್ತ ಅವರಿಗೆ ನ್ಯಾಯ, ಹಕ್ಕು ದೊರಕಿಸಲು ಪ್ರಯತ್ನಿಸುತ್ತಿದೆ’ ಎಂದು ಹೇಳಿದರು.
ಸ್ಥಳೀಯ ‘ಜಿಲ್ಲಾ ಆಪದ್ಭಾಂಧವ ಪಾಜಿಟಿವ್ ಪೀಪಲ್ಸ್ ನೆಟವರ್ಕ್’ ಸಂಸ್ಥೆಯ ಅಧ್ಯಕ್ಷ ರಾಜಗೌಡಾ ಗೌರಾಯಿ ಮಾತನಾಡಿದರು.
ಸಮಸ್ಯೆ ಆಲಿಸಿದ ಶಾಸಕಿ ಶಶಿಕಲಾ ಜೊಲ್ಲೆ, ಅಗತ್ಯ ಸೌಲಭ್ಯ ಕಲ್ಪಿಸುವುದಾಗಿ ಭರವಸೆ ನೀಡಿದರು.
ಸಭೆಯಲ್ಲಿ ತಾನಾಜಿ ಪಾಟೀಲ, ಚಾಂದಣಿ ಸೋನಟಕ್ಕೆ, ಸಾಗರ ವಾಳಕೆ, ಮಹಾದೇವ ಘಸ್ತೆ, ಅಸ್ಲಂ ಬೇಪಾರಿ, ಸುಭಾಷ್ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.