ಹುಬ್ಬಳ್ಳಿ: ಬೆಳಗಾವಿಯ ಕೆಎಲ್ಇ ಫಾರ್ಮಸಿ ಕಾಲೇಜಿನ ಆತಿಥ್ಯದಲ್ಲಿ ಮೊದಲ ಅಂತರರಾಷ್ಟ್ರೀಯ ಹಾಗೂ 15ನೇ ರಾಷ್ಟ್ರೀಯ ಔಷಧಿ ತಜ್ಞರ ಸಮಾವೇಶ ಫೆ. 18ರಿಂದ 20ರವರೆಗೆ ನಡೆಯಲಿದೆ. ಪ್ರಾದೇಶಿಕ ಔಷಧಿ ಸಂಶೋಧನಾ ಕೇಂದ್ರ (ಐಸಿಎಂಆರ್) ಮತ್ತು ಕೆಎಲ್ಇ ವಿಶ್ವವಿದ್ಯಾಲಯಗಳ ಸಹಕಾರದೊಂದಿಗೆ ಫಾರ್ಮಸಿ ಕಾಲೇಜು ಈ ಸಮಾವೇಶವನ್ನು ಸಂಘಟಿಸಿದೆ.
ಸಮಾವೇಶದಲ್ಲಿ ಸಾವಿರಕ್ಕೂ ಅಧಿಕ ಜನ ತಜ್ಞರು ಪಾಲ್ಗೊಳ್ಳಲಿದ್ದಾರೆ ಎಂದು ಕೆಎಲ್ಇ ವಿಶ್ವವಿದ್ಯಾಲಯದ ಗೌರವ ಕುಲಪತಿ ಪ್ರೊ. ಚಂದ್ರಕಾಂತ ಕೊಕಾಟೆ ಹಾಗೂ ಭಾರತೀಯ ಔಷಧಿತಜ್ಞರ ಸೊಸೈಟಿ (ಐಎಸ್ಪಿ) ಅಧ್ಯಕ್ಷ ಪ್ರೊ.ಎಫ್.ವಿ. ಮಾನ್ವಿ ಹೇಳಿದ್ದಾರೆ.
ಕೆನಡಾ, ಅಮೆರಿಕ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಮಲೇಷ್ಯ, ಬಾಂಗ್ಲಾದೇಶ ಹಾಗೂ ಭಾರತದ ಹಲವು ಜನ ತಜ್ಞರು ಸಮಾವೇಶದಲ್ಲಿ ಉಪನ್ಯಾಸ ನೀಡಲಿದ್ದಾರೆ. ರಾಜ್ಯ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು, ಔಷಧಿ ನಿಯಂತ್ರಣ ಇಲಾಖೆ ಪ್ರತಿನಿಧಿಗಳು ಮಾಹಿತಿ ನೀಡಲಿದ್ದಾರೆ. ಗಿಡಮೂಲಿಕೆ ಆಧಾರಿತ ಔಷಧಿ ತಯಾರಿಕೆಯೂ ಸಮಾವೇಶದ ಪ್ರಮುಖ ಉದ್ದೇಶಗಳಲ್ಲಿ ಒಂದಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.