ADVERTISEMENT

40 ವರ್ಷದಾಗ ಇಂಥಾ ಪರಿಸ್ಥಿತಿ ಬಂದಿಲ್ರಿ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2012, 19:30 IST
Last Updated 23 ಏಪ್ರಿಲ್ 2012, 19:30 IST
40 ವರ್ಷದಾಗ ಇಂಥಾ ಪರಿಸ್ಥಿತಿ ಬಂದಿಲ್ರಿ
40 ವರ್ಷದಾಗ ಇಂಥಾ ಪರಿಸ್ಥಿತಿ ಬಂದಿಲ್ರಿ   

ಯಾದಗಿರಿ: “ನಲ್ವತ್ತು ವರ್ಷದ ಹಿಂದ ಇಂಥಾ ಬರಗಾಲ ಬಿದ್ದಿತ್ತ ನೋಡ್ರಿ. ಅಲ್ಲಿಂದ ಇಲ್ಲಿ ಗಂಟಾ ನದ್ಯಾಗಿನ ನೀರ ಬತ್ತಿದ್ದ ನಮಗ ಗೊತ್ತಿಲ್ಲ. ಈ ವರ್ಷ ನದಿ ಪೂರಾ ಬತ್ತಿ ನಿಂತೈತಿ. ಹೊಲದಾಗಿನ ಬೆಳೆ ಒತ್ತಟ್ಟಿಗೆ ಇಲ್ರೀ, ಕುಡ್ಯಾಕೂ ನೀರ ಸಿಗದ್ಹಂಗ ಆಗೇತಿ. ಆ ದ್ಯಾವ್ರ, ಆದಷ್ಟ ಜಲ್ದಿ ಕಣ್ಣ ತಗಿಬೇಕ್ರಿ”.

ಬರದ ಛಾಯೆಯಲ್ಲಿರುವ ತಾಲ್ಲೂಕಿನ ಲಿಂಗೇರಿ ಗ್ರಾಮದ ಹಿರಿಯ ರೈತರ ಸಿದ್ಧಲಿಂಗಪ್ಪ, ಆಕಾಶದತ್ತ ಕೈಮುಗಿದು ಈ ರೀತಿ ಹೇಳುತ್ತಿರುವಾಗ, ಆತನ ಧ್ವನಿಯಲ್ಲಿ ನೋವು, ಸಂಕಟಗಳೆರಡೂ ಮೇಳೈಸಿದ್ದವು. ಬರದ ಛಾಯೆ, ಬಿಸಿಲಿನ ತಾಪದಿಂದ ಬಳಲಿರುವ ಜಿಲ್ಲೆಯ ಜನ, ಜಾನುವಾರುಗಳಿಗೆ ಜೀವ ಹಿಡಿಯಲಾದರೂ ನೀರು ಬೇಕಾಗಿದೆ.
ಜಿಲ್ಲೆಯಲ್ಲಿ ಹರಿಯುವ ಕೃಷ್ಣಾ, ಭೀಮಾ ನದಿ ಪಾತ್ರಗಳು ಸಂಪೂರ್ಣ ಬತ್ತಿವೆ. ನದಿಯನ್ನೇ ಅವಲಂಬಿಸಿ ಜೀವನ ಸಾಗಿಸುತ್ತಿದ್ದ ತೀರದ ಗ್ರಾಮಸ್ಥರು  ದಿಕ್ಕು ತೋಚದಂತಾಗಿದ್ದಾರೆ. 1971ರಲ್ಲಿ ಬರದ ಛಾಯೆಯನ್ನು ನೋಡಿದ್ದ ಗ್ರಾಮಸ್ಥರು, ಅಲ್ಲಿಂದ ಇಲ್ಲಿಯವರೆಗೂ ನದಿಯಲ್ಲಿ ನೀರು ಬತ್ತಿರುವುದನ್ನು ನೋಡಿಯೇ ಇಲ್ಲವಂತೆ.

ಭೀಮಾ ನದಿ ನೀರು ಬತ್ತಿದ್ದರಿಂದ ಲಕ್ಷಾಂತರ ಮೀನುಗಳು ಸಾವಿಗೀಡಾಗಿವೆ. ಎಲ್ಲೆಡೆ ಮೀನಿನ ರಾಶಿಗಳೇ ಕಾಣುತ್ತಿದ್ದು, ದುರ್ವಾಸನೆ ಹಬ್ಬಿದೆ.  ನದಿಯಲ್ಲಿರುವ ಅಷ್ಟಿಷ್ಟು ನೀರೂ ಕೆಟ್ಟು ಹೋಗಿದ್ದು, ಇದನ್ನು ಕುಡಿದ ಜಾನುವಾರುಗಳಿಗೆ ರೋಗ ಬರುತ್ತಿದೆ. ಈಗಾಗಲೇ ಕಾಲು, ಬಾಯಿ ಬೇನೆಯಿಂದ ನಾಲ್ಕು ಹಸುಗಳು ಮೃತಪಟ್ಟಿವೆ ಎಂದು ಗ್ರಾಮಸ್ಥರು ಹೇಳುತ್ತಾರೆ.

ADVERTISEMENT

ಭೀಮಾ ನದಿ ತೀರದ ಲಿಂಗೇರಿ, ಕೌಳೂರು ಮುಂತಾದ ಗ್ರಾಮಗಳಲ್ಲಿ ನೀರಿನ ಅಭಾವ ತೀವ್ರವಾಗಿದೆ. ಕುಡಿಯುವುದಕ್ಕೆ ನದಿ ನೀರನ್ನೇ ಅವಲಂಬಿಸಿದ್ದ ಇಲ್ಲಿಯ ಜನರಿಗೆ, ನೀರೂ ಸಿಗದಂತಾಗಿದೆ. ಗ್ರಾಮದಲ್ಲಿ ಒಂದೆರಡು ಬೋರವೆಲ್‌ಗಳಿದ್ದು, ವಿದ್ಯುತ್ ಇದ್ದಾಗ ನೀರು ಸಿಗುತ್ತದೆ. ಇಲ್ಲವಾದರೆ, ನೀರಿಗೆ ಪರದಾಡಬೇಕಿದೆ ಎನ್ನುತ್ತಾರೆ ಲಿಂಗೇರಿ ಗ್ರಾಮದ ಯುವಕ ಗಂಗಾಧರ.

“ಊರಾಗಿನ ಹರಿಯರು ಹೇಳೂ ಪ್ರಕಾರ ಈ ನದಿ ಬತ್ತಿದ್ದ ಗೊತ್ತಿಲ್ರಿ. ನಾವಂತೂ ಸಣ್ಣಾವ್ರ ಇದ್ದಾಗಿಂದ ನೋಡ್ತಿವಿ, ನದ್ಯಾಗ ನೀರ ಕಡಿಮೆ ಆಗೇ ಇಲ್ಲ. ಈ ಸಲ ಮಾತ್ರ ಭಾಳ ತ್ರಾಸ ಆಗೇತ್ರಿ. ಎಲ್ಲಿ ಕಣ್ಣ ಹಾಯಿಸಿದ್ರು, ಬರೇ ಉಸುಕ ಕಾಣತೈತಿ. ಇನ್ನ ದನಾಕರಾ ಎಲ್ಲಿಂದ ನೀರ ಕುಡಿಬೇಕ್ರಿ” ಎನ್ನುವುದು ಯುವಕ ರಾಚಯ್ಯ ಅವರ ನೋವು.
ಮೀನುಗಳ ಮಾರಣ ಹೋಮ: ನೀರಿನ ಕೊರತೆಯಿಂದಾಗಿ ಒಂದು ವಾರದಿಂದ ಲಕ್ಷಾಂತರ ಮೀನುಗಳು ಸತ್ತಿವೆ. ದೊಡ್ಡ ಮೀನುಗಳು ನೀರಿಲ್ಲದೇ ಸಾವನ್ನಪ್ಪಿದ್ದು, ಕೆಲ ಮೀನುಗಾರರು ಅವುಗಳನ್ನೇ ರಾಶಿ ಮಾಡಿಕೊಂಡು ಹೋಗುತ್ತಿದ್ದಾರೆ.

ನಿತ್ಯವೂ ಮೀನುಗಳ ಮಾರಣಹೋಮ ನಡೆಯುತ್ತಿದ್ದು, ಮೃದ್ವಂಗಿಗಳು, ಸರೀಸೃಪಗಳು ಸೇರಿದಂತೆ ಬಹುತೇಕ ಜಲಚರಗಳು ಕೊನೆಯುಸಿರು ಎಳೆಯುತ್ತಿವೆ. ಅಲ್ಲಲ್ಲಿ ಅಲ್ಪ ನೀರು ಸಂಗ್ರಹವಿದ್ದು, ಅದನ್ನೂ ಮೋಟರ್‌ಗಳ ಮೂಲಕ ಹೊಲಕ್ಕೆ ಹರಿಸಲಾಗುತ್ತಿದೆ. ಇದೇರೀತಿ ಮುಂದುವರಿದರೆ, ಎರಡು-ಮೂರು ದಿನಗಳಲ್ಲಿ ನದಿಯಲ್ಲಿ ಒಂದು ಹನಿಯೂ ನೀರು ಇಲ್ಲದಂತಾಗುತ್ತದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತ   ಪಡಿಸುತ್ತಾರೆ.

ಬ್ಯಾರೇಜ್‌ಗಳಲ್ಲಿಯೂ ನೀರು ಕಡಿಮೆ ಆಗುತ್ತಿದ್ದು, ಪಟ್ಟಣದ ಪ್ರದೇಶಗಳಿಗೆ ನೀರು ಪೂರೈಕೆಯೂ ಕಷ್ಟಕರವಾಗಲಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ನದಿ ತೀರದ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸುವಂತೆ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದು, ಆದೇಶ ಕೇವಲ ಕಾಗದದಲ್ಲಿಯೇ ಉಳಿದಿದೆ ಎನ್ನುವ ನೋವು ನದಿ ತೀರದ ಗ್ರಾಮಸ್ಥರದ್ದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.