ADVERTISEMENT

55.84 ಕೋಟಿ ಕ್ರಿಯಾ ಯೋಜನೆಗೆ ಅಸ್ತು

​ಪ್ರಜಾವಾಣಿ ವಾರ್ತೆ
Published 10 ಜೂನ್ 2011, 19:30 IST
Last Updated 10 ಜೂನ್ 2011, 19:30 IST
55.84 ಕೋಟಿ ಕ್ರಿಯಾ ಯೋಜನೆಗೆ ಅಸ್ತು
55.84 ಕೋಟಿ ಕ್ರಿಯಾ ಯೋಜನೆಗೆ ಅಸ್ತು   

ಕೊಪ್ಪಳ: ಪ್ರಸಕ್ತ ಹಣಕಾಸು ವರ್ಷಕ್ಕಾಗಿ 55.84 ಕೋಟಿ ರೂಪಾಯಿಗಳ ಕ್ರಿಯಾ ಯೋಜನೆಗೆ ಶುಕ್ರವಾರ ಜರುಗಿದ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆ ಅನುಮೋದನೆ ನೀಡಿತು.

ಅಲ್ಲದೇ, ವಿವಿಧ ಕಾಮಗಾರಿಗಳಿಗಾಗಿ ಸಿದ್ಧಪಡಿಸಿರುವ ಕ್ರಿಯಾ ಯೋಜನೆಯಲ್ಲಿ ಬದಲಾವಣೆಯನ್ನು ಬಯಸುವ ಸದಸ್ಯರು ಬರುವ ಸೋಮವಾರದ ಒಳಗಾಗಿ ಆ ಬಗ್ಗೆ ಮಾಹಿತಿ ನೀಡಬೇಕು ಎಂದು ಸಭೆ ನಿರ್ಣಯಿಸಿತು.

ಕ್ರಿಯಾಯೋಜನೆಯನ್ನು ಮಂಡಿಸಿದ ಜಿಲ್ಲಾ ಪಂಚಾಯಿತಿಯ ಮುಖ್ಯ ಯೋಜನಾಧಿಕಾರಿ ಟಿ.ಪಿ.ದಂಡಿಗದಾಸರ, ಇಲಾಖಾವಾರು ನಿಗದಿಪಡಿಸಿದ ಅನುದಾನವನ್ನು ವಿವರಿಸಿದರು.

ಕ್ರಿಯಾ ಯೋಜನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಕೆಲವು ಸದಸ್ಯರು, ತಮ್ಮನ್ನು ಸಂಪರ್ಕಿಸದೇ ಕ್ರಿಯಾ ಯೋಜನೆಯನ್ನು ಅಂತಿಮಗೊಳಿಸಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಇಂದಿನ ಸಭೆಯನ್ನು ಮುಂದೂಡಿ, ಜೂನ್ 14ರಂದು ಪುನಃ ಸಭೆ ಸೇರಿ, ಕ್ರಿಯಾಯೋಜನೆ ಕುರಿತು ವಿಸ್ತೃತ ಚರ್ಚೆ ನಡೆಸಿ, ಸದಸ್ಯರು ಸೂಚಿಸುವ ಕಾಮಗಾರಿಗಳನ್ನು ಸೇರ್ಪಡೆ ಮಾಡಿ, ಕ್ರಿಯಾಯೋಜನೆಗೆ ಅಂತಿಮವಾಗಿ ಅನುಮೋದನೆ ನೀಡಬೇಕು ಎಂದು  ಜನಾರ್ದನ ಹುಲಿಗಿ ಸಲಹೆ ನೀಡಿದರು.

ಹಲವು ಸುತ್ತಿನ ಚರ್ಚೆ ನಂತರ, ಇಂದು ಮಂಡನೆಯಾದ ಕ್ರಿಯಾ ಯೋಜನೆಯನ್ನು ಅನುಮೋದಿಸಬೇಕು. ಒಟ್ಟು ಅನುದಾನದಲ್ಲಿ ಬದಲಾವಣೆ ಇರುವುದಿಲ್ಲ. ಹೀಗಾಗಿ ಕೈಗೆತ್ತಿಕೊಳ್ಳಬೇಕಾದ ಕಾಮಗಾರಿಗಳಲ್ಲಿ ಬದಲಾವಣೆ ಮಾಡಿ ಪರಿಷ್ಕೃತ ಕ್ರಿಯಾಯೋಜನೆಯನ್ನು ಸರ್ಕಾರಕ್ಕೆ ಕಳುಹಿಸಲು ಸಭೆ ತೀರ್ಮಾನಿಸಿತು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಎನ್. ಬಿಲ್ಗಾರ್ ಅಧ್ಯಕ್ಷತೆ ವಹಿಸಿದ್ದರು. ಡಾ.ಸೀತಾ ಹಲಗೇರಿ, ಅಮರೇಗೌಡ ಬಯ್ಯಾಪುರ,   ಎನ್.ಕೆ. ತೊರವಿ ಮತ್ತಿತರರು ಉಪಸ್ಥಿತರಿದ್ದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.