ADVERTISEMENT

`ಆಡಳಿತ ನಮ್ಮದೆಂಬ ಭಾವನೆಯಿರಲಿ'

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2013, 7:06 IST
Last Updated 5 ಫೆಬ್ರುವರಿ 2013, 7:06 IST
ಜಮಖಂಡಿಯ ಐತಿಹಾಸಿಕ ಪೋಲೊ ಮೈದಾನದಲ್ಲಿ ಬಿಎಸ್‌ಆರ್ ಕಾಂಗ್ರೆಸ್ ಹಮ್ಮಿಕೊಂಡಿದ್ದ ಸಮಾವೇಶವನ್ನು ಸಂಸದೆ ಜೆ. ಶಾಂತಾ ಉದ್ಘಾಟಿಸಿದರು. ಪಿ. ರಾಜೀವ, ಅಯೂಬ್ ಪಾರ್ಥನಳ್ಳಿ, ಶಿವಾನಂದ ಶ್ರೀಗಳು, ಪ್ರಭುದೇವರು, ಗೌರಿಶಂಕರ ಶ್ರೀಗಳು, ಅಶೋಕ ಲಿಂಬಾವಳಿ, ಎಂ.ಎಸ್.ಪಾಟೀಲ ಮತ್ತಿತರರು ಚಿತ್ರದಲ್ಲಿದ್ದಾರೆ.
ಜಮಖಂಡಿಯ ಐತಿಹಾಸಿಕ ಪೋಲೊ ಮೈದಾನದಲ್ಲಿ ಬಿಎಸ್‌ಆರ್ ಕಾಂಗ್ರೆಸ್ ಹಮ್ಮಿಕೊಂಡಿದ್ದ ಸಮಾವೇಶವನ್ನು ಸಂಸದೆ ಜೆ. ಶಾಂತಾ ಉದ್ಘಾಟಿಸಿದರು. ಪಿ. ರಾಜೀವ, ಅಯೂಬ್ ಪಾರ್ಥನಳ್ಳಿ, ಶಿವಾನಂದ ಶ್ರೀಗಳು, ಪ್ರಭುದೇವರು, ಗೌರಿಶಂಕರ ಶ್ರೀಗಳು, ಅಶೋಕ ಲಿಂಬಾವಳಿ, ಎಂ.ಎಸ್.ಪಾಟೀಲ ಮತ್ತಿತರರು ಚಿತ್ರದಲ್ಲಿದ್ದಾರೆ.   

ಜಮಖಂಡಿ: ಅಧಿಕಾರ ನಮ್ಮದು, ಆಡಳಿತ ನಮ್ಮದು ಎಂಬ ಭಾವನೆ ಮತ್ತು ನಂಬಿಕೆಯನ್ನು ಜನಸಾಮಾನ್ಯರಲ್ಲಿ ಮೂಡಿಸಲು ಹಾಗೂ ವಿಧಾನಸೌಧದಲ್ಲಿ ಬಿಎಸ್‌ಆರ್ ಕಾಂಗ್ರೆಸ್ ಬಾವುಟ ಹಾರಿಸಲು ಬಿಎಸ್‌ಆರ್ ಕಾಂಗ್ರೆಸ್ ಒಂದು ಅವಕಾಶ ಕೊಡಿ ಎಂದು ಸಂಸದೆ, ಬಿಎಸ್‌ಆರ್ ಕಾಂಗ್ರೆಸ್ ನಾಯಕಿ ಜೆ. ಶಾಂತಾ ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಬಿಎಸ್‌ಆರ್ ಕಾಂಗ್ರೆಸ್ ಜಮಖಂಡಿ ಘಟಕದ ಆಶ್ರಯದಲ್ಲಿ ಇಲ್ಲಿನ ಐತಿಹಾಸಿಕ ಪೋಲೊ ಮೈದಾನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಿಕಲಚೇತನ ದಂಪತಿಗಳ ಉಡಿ ತುಂಬುವ ಕಾರ್ಯಕ್ರಮ, ಬಿಎಸ್‌ಆರ್ ಕಾಂಗ್ರೆಸ್ ಕಾರ್ಯಾಲಯ ಉದ್ಘಾಟನೆ ಹಾಗೂ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ರಾಜಕೀಯ ವೈಷಮ್ಯದಿಂದ ಬಡವರಿಗೆ, ನಿರ್ಗತಿಕರಿಗೆ ಸಿಗಬೇಕಾದ ಸೌಲಭ್ಯಗಳು ಸಿಗುತ್ತಿಲ್ಲ. ಕುರ್ಚಿಗಾಗಿ ಕಿತ್ತಾಡುತ್ತಿರುವ ಹಾಗೂ ರಾಜ್ಯದ ಜನತೆಯ ಋಣ ತೀರಿಸುವ ವಿವೇಚನೆ ಇಲ್ಲದ ರಾಜ್ಯ ಬಿಜೆಪಿ ಸರ್ಕಾರವನ್ನು ಮತದಾರ ತಿರಸ್ಕರಿಸುವ ಕಾಲ ಬಂದಿದೆ ಎಂದರು.

ಅನ್ನ ಕೊಡುವ ರೈತನ ಹೊಟ್ಟೆಯ ಮೇಲೆ ಸರ್ಕಾರ ಹೊಡೆಯುತ್ತಿರುವುದರಿಂದ ರೈತರು ಕಂಗಾಲಾಗಿದ್ದಾರೆ. ಎಲ್ಲರ ಮಾನ ಮುಚ್ಚುವ ನೇಕಾರ ಇಂದು ನಡುಬೀದಿಯಲ್ಲಿ ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣ ಆಗಿದೆ. ಈ ಹಿನ್ನೆಲೆಯಲ್ಲಿ ಜನ ಬದಲಾವಣೆ ಬಯಸಿದ್ದಾರೆ. ಹಾಗಾಗಿ ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದರು.

ಬಿಎಸ್‌ಆರ್ ಕಾಂಗ್ರೆಸ್‌ನ ಅಲ್ಪಸಂಖ್ಯಾತ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಯೂಬ್ ಪಾರ್ಥನಳ್ಳಿ, ಮತದಾರರು ದಯವಿಟ್ಟು ಜಾಗೃತರಾಗಿ ಬದಲಾವಣೆ ತರಬೇಕು. ಜನಸಾಮಾನ್ಯರ ಋಣ ತೀರಿಸಲು ಒಂದು ಅಕಾಶ ಕೊಡಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಸಂಚಾಲಕ ಎಂ.ಎಸ್. ಪಾಟೀಲ, ಪ್ರಕಾಶ ಕಾಂಬಳೆ, ಅಲ್ಪಸಂಖ್ಯಾತ ಘಟಕದ ರಾಜ್ಯ ಘಟಕದ ಅಧ್ಯಕ್ಷ ಖಾಲಿದ್ ಅಹಮ್ಮದ್, ಕೋರ್ ಕಮಿಟಿ ಸದಸ್ಯರಾದ ಪಿ. ರಾಜೀವ, ಅಶೋಕ ಲಿಂಬಾವಳಿ ಮಾತನಾಡಿದರು. ಕಲ್ಯಾಣ ಮಠದ ಗೌರಿಶಂಕರ ಶ್ರೀಗಳು, ಓಲೆಮಠದ ಡಾ. ಚನ್ನಬಸವ ಶ್ರೀಗಳು, ಕೊಣ್ಣೂರಿನ ಪ್ರಭುದೇವರು, ಚಿಕ್ಕಲಕಿ ಕ್ರಾಸ್‌ನ ಶಿವಾನಂದ ಶ್ರೀಗಳು ಸಾನಿಧ್ಯ ವಹಿಸಿದ್ದರು. ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಸೌಭಾಗ್ಯ ಬನ್ನಿ ವೇದಿಕೆಯಲ್ಲಿದ್ದರು. ಶ್ರೀನಿವಾಸ ಕಟ್ಟಿಮನಿ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.