ಹುನಗುಂದ ತಾಲ್ಲೂಕಿನ ತಿಮ್ಮಾಪುರದ ಗ್ರಾಮದ ಮಾರುತಿ ಮತ್ತು ಬಸವಣ್ಣನ ಜಾತ್ರೆ ತಾಲ್ಲೂಕಿನಲ್ಲೇ ಹೆಸರು ಪಡೆದ ಜಾತ್ರೆ.
ಉತ್ತರಿ ಮಳೆ ಆರಂಭದ ಮೊದಲ ಶನಿವಾರ ಜಾತ್ರೆಗೆ ಚಾಲನೆ ದೊರೆಯುತ್ತದೆ. ಒಂದು ತಿಂಗಳಿನಿಂದ ಊರಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗುತ್ತದೆ. ಉತ್ತರಿ ಮಳೆಯ ದಿನವೇ ರಾತ್ರಿ 8 ಕ್ಕೆ ಮಲಪ್ರಭೆ ನದಿಗೆ ಹೋಗಿ ದೇವರ ಪಲ್ಲಕ್ಕಿ ಹತಾರ, ಕಳಸ ಎಲ್ಲ ಪೂಜೆಯ ಸಾಮಾನುಗಳನ್ನು ಮಡಿ ಮಾಡಿಕೊಂಡು ಬರುತ್ತಾರೆ.
ಕರೆಕಲ್ಲ ಮಠಕ್ಕೆ ಬಂದಾಗ ಅಲ್ಲಿ ವಾರ್ಷಿಕ ಭವಿಷ್ಯವಾಣಿ (ನುಡಿ) ಆಗುತ್ತದೆ. ನಂತರ ಪಲ್ಲಕ್ಕಿ ಉತ್ಸವ ನಡೆದು ಪೂಜಾರಿಯು ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕುತ್ತ ಹರಿತವಾದ ಆಯುಧದಿಂದ ಮೈಗೆ ಚುಚ್ಚಿ ಬಡಿದುಕೊಳ್ಳುವ ಈ ದೃಶ್ಯ ನೆರೆದ ಭಕ್ತರಲ್ಲಿ ಭಕ್ತಿ ಮತ್ತು ರೋಮಾಂಚನ ತರುತ್ತದೆ.
ನೆರೆದ ಸಾವಿರಾರು ಹರಕೆಯ ಭಕ್ತರು ದೇವರಿಗೆ ಸುತ್ತುಗಾಯಿ ಒಡೆಯುವ ದೃಶ್ಯ ಜನರ ಭಕ್ತಿಯ ಪರಾಕಾಷ್ಠೆಗೆ ಹಿಡಿದ ಕನ್ನಡಿಯಾಗುತ್ತದೆ. ಸುಮಾರು 5 ರಿಂದ 100 ಕಾಯಿಯವರೆಗೆ ಜನರು ತಮ್ಮ ಭಕ್ತಿಯ ಹರಕೆಯನ್ನು ಸಲ್ಲಿಸುತ್ತಾರೆ. ಮತ್ತೆ ಹತಾರ ಸೇವೆ ನಡೆದು `ಹಸ್ತ ಬಂಗಾರ, ಮಳಿ ಬಂಗಾರಬೆಳ್ಳಿ, ಹತ್ಯಾಗ ಮತ್ತ ಇಟ್ಟೈತಿ, ಸಿಕ್ಕವರಿಗೆ ಸಿಕ್ತು ಸಿಗದವರಿಗೆ ಇಲ್ಲ, ಬಯಲಾಗ ಬುತ್ತಿ ಬಿಚ್ಚು~ ಪೂಜಾರಿಯ ಹೇಳಿಕೆ ನಡೆಯುತ್ತದೆ. ಇದನ್ನು ಕೇಳಿದ ಗ್ರಾಮಸ್ಥರು ಲೆಕ್ಕ ಹಾಕುತ್ತ ಮನೆಗೆ ಸಾಗುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.