ಬಾಗಲಕೋಟೆ: ಜಿಲ್ಲೆಯಲ್ಲಿ ಪ್ರವಾಹಪೀಡಿತ 35 ಗ್ರಾಮಗಳಲ್ಲಿ 5,333 ಮನೆಗಳನ್ನು ಸಂತ್ರಸ್ತರಿಗೆ ಹಸ್ತಾಂತರ ಮಾಡಲಾಗಿದೆ. ಬಾಕಿ ಉಳಿದ 11 ಗ್ರಾಮಗಳಲ್ಲಿ 2,999 ಮನೆಗಳನ್ನು ಪೂರ್ಣಗೊಳಿಸಿ, ಮಾರ್ಚ್ ಅಂತ್ಯದೊಳಗಾಗಿ ಹಸ್ತಾಂತರಿಸಲು ಉದ್ದೇಶಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಹೇಳಿದರು.
ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಹುನಗುಂದ ತಾಲ್ಲೂಕಿನ ಬೇನಾಳದ 264 ಹಾಗೂ ಸುರಳಿಕಲ್ನ 226 ಆಸರೆ ಮನೆಗಳನ್ನು ನೆರೆ ಸಂತ್ರಸ್ತರಿಗೆ ಗುರುವಾರ ಹಸ್ತಾಂತರಿಸಿ ಅವರು ಮಾತನಾಡಿದರು.
ಬೇನಾಳದ 27.24 ಎಕರೆ ಪ್ರದೇಶದಲ್ಲಿ ರೂ 2.10 ಕೋಟಿ ವೆಚ್ಚದಲ್ಲಿ ಈ ಮನೆಗಳನ್ನು ನಿರ್ಮಿಸಲಾಗಿದ್ದು ಎಲ್ಲ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಲಾಗಿದೆ ಎಂದರು.
ಆಸರೆ ಮನೆ ನಿರ್ಮಾಣ ಕಾರ್ಯದಲ್ಲಿ ದಾನಿಗಳು, ಮಠಾಧೀಶರು ಹಾಗೂ ಸಂಘ ಸಂಸ್ಥೆಗಳ ಸಹಕಾರವನ್ನು ಸ್ಮರಿಸಬೇಕಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ವೀರಣ್ಣ ಚರಂತಿಮಠ, ಅನೇಕ ಸಮಸ್ಯೆಗಳನ್ನು ನಿವಾರಿಸಿ ಆಸರೆ ಮನೆಗಳನ್ನು ನಿರ್ಮಿಸಲಾಗಿದೆ. ಈ ಗ್ರಾಮಕ್ಕೆ ಬೇಕಾದ ರಸ್ತೆ ಮತ್ತಿತರ ಸೌಕರ್ಯಗಳನ್ನು ಶೀಘ್ರವಾಗಿ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಸಂಸದ ಪಿ.ಸಿ.ಗದ್ದಿಗೌಡರ ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ನಾರಾಯಣಸಾ ಭಾಂಡಗೆ, ಜಿ.ಪಂ. ಅಧ್ಯಕ್ಷೆ ಕವಿತಾ ದಡ್ಡೇನವರ, ಜಿ.ಪಂ. ಸದಸ್ಯ ವೀರಣ್ಣ ಬಂಡಿ, ಸಕ್ಕರೆ ಮಹಾ ಮಂಡಳದ ಅಧ್ಯಕ್ಷ ಆರ್.ಟಿ.ಪಾಟೀಲ, ಗ್ರಾ.ಪಂ. ಅಧ್ಯಕ್ಷ ಮೂಕವ್ವ ಬಸಪ್ಪ ಚಿತ್ತರಗಿ, ಕೃಷ್ಣಾ ರುದ್ದಪ್ಪ ಗೌಡರ, ಸಹಾಯಕ ಆಯುಕ್ತರಾದ ಗೋವಿಂದರೆಡ್ಡಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜಿ.ಪಾಟೀಲ, ತಹಶೀಲ್ದಾರ ಅಪರ್ಣಾ ಪಾವಟೆ ಮತ್ತಿತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.