ಶಿವಯೋಗಮಂದಿರ (ಬಾಗಲಕೋಟೆ): `ಕೋಟಿ ಮಂದಿಯ ಕತೆ ಬಿಟ್ಟು ಏಕವ್ಯಕ್ತಿ (ರಾಜರ) ಕೇಂದ್ರೀಕೃತವಾಗಿ ಬ್ರಿಟಿಷರು ತಿರುಚಿ ರಚಿಸಿರುವ ಭಾರತೀಯ ಇತಿಹಾಸದ ಪುಟಗಳನ್ನು ಮರು ಪರಿಶೀಲನೆ ಮಾಡಬೇಕಾದ ಅಗತ್ಯವಿದೆ~ ಎಂದು ಕೋಲ್ಕತ್ತಾ ವಿ.ವಿ.ಯ ಮಾನವ ಶಾಸ್ತ್ರಜ್ಞ ಡಾ. ಸೋಮನಾಥ ಚಕ್ರವರ್ತಿ ಪ್ರತಿಪಾದಿಸಿದರು.
ಬಾದಾಮಿ ಸಮೀಪದ ಶಿವಯೋಗ ಮಂದಿರದ ಅತಿಥಿ ಗೃಹದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ರಾಕ್ ಆರ್ಟ್ ಸೊಸೈಟಿ ಆಫ್ ಇಂಡಿಯಾದ 17ನೇ ರಾಷ್ಟ್ರೀಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.
ಆರ್ಯರು ಭಾರತಕ್ಕೆ ವಲಸೆ ಬಂದವರಲ್ಲ, ಆರ್ಯರು ಇಲ್ಲಿಯ ಮೂಲ ನಿವಾಸಿಗಳು ಎಂಬುದಕ್ಕೆ ಸಾಕಷ್ಟು ಸಾಕ್ಷ್ಯಾಧಾರಗಳಿವೆ. ಆದರೆ, ಬ್ರಿಟಿಷರು `ಭಾರತ ಒಂದು ಧರ್ಮಶಾಲೆ ಇದ್ದಂತೆ~ ಎಂದು ವ್ಯಾಖ್ಯಾನಿಸಿದರು.
`ಇಲ್ಲಿಗೆ ಮೊಘಲರು, ಫ್ರೆಂಚರು, ಡಚ್ಚರು, ಬ್ರಿಟಿಷರು ವಲಸೆ ಬಂದಂತೆ ಆರ್ಯರೂ ವಲಸೆ ಬಂದಿದ್ದಾರೆ. ಇಲ್ಲಿಗೆ ಯಾರಾದರೂ ಬರಬಹುದು, ಹೋಗಬಹುದು, ಭಾರತ ಯಾರೊಬ್ಬರ ಸ್ವತ್ತಲ್ಲ~ ಎಂದು ಸುಳ್ಳು ಕತೆ ಕಟ್ಟಿ ಸ್ವಾತಂತ್ರ್ಯ ಹೋರಾಟವನ್ನು ಹತ್ತಿಕ್ಕಲು ಯತ್ನಿಸಿದ್ದರು ಎಂದರು.
ಭಾರತದ ಜನ ಸಮುದಾಯದ ನೈಜ ಇತಿಹಾಸವನ್ನು ಸಾರುವ ಗವಿ ವರ್ಣಚಿತ್ರಗಳು ಮತ್ತು ಕಲ್ಲಾಸರೆ ಚಿತ್ರಗಳು (ರಾಕ್ ಆರ್ಟ್) ಇಂದು ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಈ ನಿಟ್ಟಿನಲ್ಲಿ ಹೆಚ್ಚಿನ ಸಂಶೋಧನೆ ಅಗತ್ಯ ಎಂದು ಅಭಿಪ್ರಾಯಪಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.