ADVERTISEMENT

ಐದು ಹೊಸ ಕೊಳವೆ ಬಾವಿಗೆ ಅನುಮತಿ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2012, 6:25 IST
Last Updated 17 ಏಪ್ರಿಲ್ 2012, 6:25 IST

ಬಾಗಲಕೋಟೆ: ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ತೊಂದರೆಯನ್ನು ನಿವಾರಿಸಲು ಐದು ಹೊಸ ಕೊಳವೆ ಬಾವಿಗಳನ್ನು ಕೊರೆಸಲು ಸೋಮವಾರ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಒಮ್ಮತದ ತೀರ್ಮಾನ ಕೈಗೊಳ್ಳಲಾಯಿತು.

ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಕೊಳವೆ ಬಾವಿಗಳನ್ನು ಕೊರೆಸಲು ಅನುಮತಿ ನೀಡಲಾಯಿತು.

ರೂ.11.76 ಲಕ್ಷ ಪ್ರೋತ್ಸಾಹ ಧನ ಕ್ರಿಯಾ ಯೋಜನೆಗೆ ಸಭೆ ಅನುಮತಿ ನೀಡಿ, ನಗರದ ವಿವಿಧ ಭಾಗದಲ್ಲಿ ಅಭಿವೃದ್ಧಿ ಕಾಮಗಾರಿಗಳ ಅಂದಾಜು ಪತ್ರಿಕೆಗೆ ಒಪ್ಪಿಗೆ ನೀಡಿ ಕಾಲ ಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಲಾಯಿತು.

ನವನಗರದ ವಿವಿಧ ಬಡಾವಣೆಗಳಿಗೆ ಹಾಗೂ ರಸ್ತೆಗಳಿಗೆ  ಮಹಾನ್‌ವ್ಯಕ್ತಿಗಳ ಹೆಸರು ನಾಮಕರಣ ಮಾಡಲು ಸಭೆಯಲ್ಲಿ ಚರ್ಚಿಸಲಾಯಿತು.   

ನವನಗರದಲ್ಲಿರುವ ನಗರಸಭೆ ಕಚೆರಿಯ ಮುಂದಿನ ವೃತ್ತಕ್ಕೆ  ಕಿತ್ತೂರ ರಾಣಿ ಚನ್ನಮ್ಮ ಸರ್ಕಲ್  ಎಂದು ನಾಮಕರಣ ಮಾಡಲು ಶಾಸಕ ಚರಂತಿಮಠ ಸಲಹೆ ನೀಡಿದ ಹಿನ್ನಲೆಯಲ್ಲಿ ಒಮ್ಮತದ ಒಪ್ಪಿಗೆ ಸೂಚಿಸಲಾಯಿತು.

ಸಾರ್ವಜನಿಕ ನಳಗಳಲ್ಲಿ ನೀರು ಪೋಲಾಗುತ್ತಿರುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ವಿದ್ಯಾಗಿರಿ, ನವನಗರ ಹಳೆ ಬಾಗಲಕೋಟೆಯಲ್ಲಿ ಸಾರ್ವಜನಿಕ ನಳಗಳಲ್ಲಿ ನೀರು ಪೋಲಾಗುವುದನ್ನು ತಡೆಯಬೇಕು. ಈಗಾಗಲೇ ಸೂಚಿಸಿದಂತೆ ಅಧಿಕಾರಿ ಗಳು ಸಾರ್ವಜನಿಕ ನಳಗಳನ್ನು ಕಡಿತಗೊಳಿಸಿ ಪ್ರತಿ ಮನೆಗೆ ನಳ ನೀಡಿ ಎಂದು ತಿಳಿಸಿದರು.

ನವನಗರ ಹಾಗೂ ಬಾಗಲಕೋಟೆ, ವಿದ್ಯಾಗಿರಿ ವಿವಿಧ ಕಡೆ ಬ್ಯಾನರ್‌ಗಳು ಎಲ್ಲೆಂದರೆಲ್ಲಿ ರಾರಾಜಿ ಸುತ್ತವೆ. ಅನಾವಶ್ಯಕವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಹಾಕುವ ಬ್ಯಾನರ್‌ಗಳಿಗೆ ನಿಯಮಗಳನ್ನು ಹಾಗೂ ಮಾನದಂಡಗಳನ್ನು ರೂಪಿಸಬೇಕಾದ ಅಗತ್ಯವಿದೆ ಎಂದು ಸದಸ್ಯ ಬಳೂಲಮಠ ಸಭೆ ಗಮನಕ್ಕೆ ತಂದರು.

ನಗರಸಭೆ ಉಪಾಧ್ಯಕ್ಷ ಶರಣಪ್ಪ ಗುಳೇದ, ಸಭಾಪತಿ ಬಸವರಾಜ ಯಮನಾಳ, ಸದಸ್ಯರಾದ ಜಯಂತ ಕುರಂದವಾಡ, ಹಣಮಂತ ನಾರಾಯಣಿ, ಸುರೇಶ ಕುದರಿಕಾರ, ಜಗದೀಶ ಬಳೂಲಮಠ, ಸಂಗಪ್ಪ ತಿಮ್ಮಣ್ಣವರ, ಅಬ್ದುಲ್ ಸತ್ತಾರ, ಮನಿಯಾರ, ಮಹಾಂತೇಶ ಹಿರೇಮಠ, ಅಬ್ಬಾಸಖಾನ ಮುಜಾವರ, ಯಲ್ಲಪ್ಪ ದೂದಿಗೊಲ್ಲರ, ರೇಖಾ ಹುಲಗಬಾಳಿ, ಲಕ್ಷ್ಮೀ ಪೀರಶೆಟ್ಟಿ, ಭಾಗ್ಯಶ್ರೀ ಹಂಡಿ, ಮಲ್ಲವ್ವ ಜಾಲಗಾರ, ಪದಾ ಹಂಚಾಟೆ, ಲಕ್ಷ್ಮೀ ಶಿಂತ್ರೆ, ಮಂಜುಳಾ, ಭೂಸಾರೆ ನಿಗಮ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.