ADVERTISEMENT

ಕರ ವಸೂಲಿ ತೀವ್ರಗೊಳಿಸಲು ಸಿಬ್ಬಂದಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2012, 9:05 IST
Last Updated 20 ಜುಲೈ 2012, 9:05 IST

ಅಮೀನಗಡ: ಸ್ಥಳೀಯ ಗ್ರಾಮ ಪಂಚಾಯಿತಿಯನ್ನು ಮೇಲ್ದರ್ಜೆಗೇರಿಸಲು ಸದಸ್ಯರ ಅಭಿಪ್ರಾಯ, ಗ್ರಾಮದ ವಾಸ್ತವ ಪರಿಸ್ಥಿತಿ ಸೇರಿದಂತೆ ಇತರೆ ಮಾಹಿತಿಯನ್ನು ಕಲೆ ಹಾಕುವ ನಿಟ್ಟಿನಲ್ಲಿ ಗುರುವಾರ ಗ್ರಾ.ಪಂ ಕಾರ್ಯಾಲಯಕ್ಕೆ 3ನೇ ಹಣಕಾಸು ಆಯೋಗದ ಸದಸ್ಯರ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳ ತಂಡ ಭೇಟಿ ನೀಡಿತು.

3ನೇ ಹಣಕಾಸು ಆಯೋಗದ ಸದಸ್ಯ ಡಾ.ಮಹೇಂದ್ರ ಕಂಠಿ ಅವರು, ಗ್ರಾಮ ಪಂಚಾಯಿತಿಯ ಆದಾಯ, ಕರ ವಸೂಲಾತಿ, ವಿದ್ಯುತ್, ಕುಡಿಯುವ ನೀರಿನ ಸಮಸ್ಯೆ, ಗ್ರಾಮದ ಮುಖ್ಯ ವ್ಯಾಪಾರ ಏನು, ಅಂಗನವಾಡಿಗಳು, ಪ್ರಾಥಮಿಕ, ಪ್ರೌಢ, ಪದವಿ ಪೂರ್ವ ಕಾಲೇಜು, ಪದವಿ ಕಾಲೇಜು,ಜನಸಂಖ್ಯೆ ಎಷ್ಟು ಎಂಬಿತ್ಯಾದಿ ಮಾಹಿತಿಯನ್ನು ಪಡೆದುಕೊಂಡರು.

ಗ್ರಾಮದಲ್ಲಿ ಕೇವಲ ಶೇ 57ರಷ್ಟು ಮಾತ್ರ ಕರವನ್ನು ವಸೂಲಿ ಮಾಡಲಾಗಿದೆ. ಇದು ತೀವ್ರ ಗತಿಯಲ್ಲಿ ಹೆಚ್ಚಳವಾಗಬೇಕು. ಅದನ್ನು ಸ್ತ್ರೀಶಕ್ತಿ ಗುಂಪುಗಳಿಗೆ ನೀಡಬೇಕು ಎಂದು ಸಿಬ್ಬಂದಿಗೆ ಸೂಚನೆ ನೀಡಿದ ಡಾ.ಕಂಠಿ, ಗ್ರಾಪಂ ಚೆಕ್, ಠರಾವು ಪುಸ್ತಕ ಸೇರಿದಂತೆ ಎಲ್ಲಾ ದಾಖಲಾತಿಗಳ ಕಡತಗಳನ್ನು ಪರಿಶೀಲಿಸಿದರು.

ಗ್ರಾಪಂ ಅಭಿವೃದ್ಧಿ ಅಧಿಕಾರಿ ದೇಶಪಾಂಡೆ, ಕರ ವಸೂಲಾತಿಯನ್ನು ಶೇ 57ರಷ್ಟು, ಕುಡಿಯುವ ನೀರಿಗೆ ಪ್ರತಿ ವರ್ಷಕ್ಕೆ ಒಂದು ಮನೆಗೆ ರೂ. 300ಗಳನ್ನು, ಕಮರ್ಷಿಯಲ್‌ಗೆ ರೂ. 500 ಕರ ಪಡೆಯಲಾಗುತ್ತಿದೆ.

ಗ್ರಾಮದಲ್ಲಿ ಪ್ರತಿ ಶನಿವಾರಕ್ಕೊಮ್ಮೆ ಕುರಿ, ಆಡು,ಎತ್ತುಗಳ ಸಂತೆ ನಡೆಯುತ್ತಿದೆ. ಇದರ ಟೆಂಡರ್ ಹಣ ರೂ. 2.5ಲಕ್ಷ ವರೆಗೆ ಬಂದಿರುತ್ತದೆ. ಮುಖ್ಯವಾಗಿ ಗ್ರಾಮದಲ್ಲಿ ಹೆಚ್ಚಾಗಿ ನೇಕಾರರ ಸಮುದಾಯವಿದೆ.ಸೀರೆ ವ್ಯಾಪಾರವಿದೆ. ರೈತಾಪಿ ಜನರು ಕಡಿಮೆ ಇರುವ ಕಾರಣಕ್ಕಾಗಿ ಕೃಷಿ ಚಟುವಟಿಕೆ ಇಲ್ಲಿ ಅಷ್ಟಕಷ್ಟೆ ಇದೆ ಎಂದು ಗ್ರಾಮದ ಸಮಗ್ರ ಮಾಹಿತಿಯನ್ನು ನೀಡಿದರು.

ಜಿ.ಪಂ. ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಎಸ್.ಜಿ. ಪಾಟೀಲ, ತಹಶೀಲ್ದಾರ ಅಪರ್ಣಾ ಪಾವಟೆ, ತಾ.ಪಂ. ಕಾರ್ಯನಿರ್ವಾಹಕಾಧಿಕಾರಿ ಆರ್.ವಿ. ತೋಟದ, ಜಿಲ್ಲಾ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿ ವಿಜಯಲಕ್ಷ್ಮೀ ಒಡೆಯರ, ತಾಲ್ಲೂಕು ಆರೋಗ್ಯಾಧಿಕಾರಿ ಶ್ರೀಮತಿ ಮಾಗಿ, ತಾ.ಪಂ ಸದಸ್ಯ ಸಯ್ಯದ್‌ಪೀರಾ ಖಾದ್ರಿ, ಗ್ರಾ.ಪಂ ಅಧ್ಯಕ್ಷ ರಮೇಶ ಮುರಾಳ, ಸದಸ್ಯರಾದ ವೈ.ಎಸ್. ಬಂಡಿವಡ್ಡರ, ರಮೇಶ ದಡ್ಡೆನ್ನವರ, ರಮೇಶ ಕಾಯಿ, ಶಶಿಧರ ಅರಳೆಲೆಮಠ, ಎಚ್.ಎಂ.ಪೀರಜಾದೆ, ವಿ.ಎಸ್.ತತ್ರಾಣಿ, ಶಾವಕ್ಕ ಕಲ್ಲಕುಟಕರ, ಬಿ.ಎಸ್. ವಸ್ತ್ರದ, ಕಲಾವತಿ ಈರಣ್ಣ ಬಳಬಟ್ಟಿ ಸೇರಿದಂತೆ ಅನೇಕರು ಈ ಸಂದರ್ಭದಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.