ADVERTISEMENT

ಗಾಯನ ಭೀಮನಿಗೆ ಸಂಗೀತ ನಮನ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2011, 8:05 IST
Last Updated 2 ಫೆಬ್ರುವರಿ 2011, 8:05 IST

ಬಾದಾಮಿ: ಚಾಲುಕ್ಯರ ನಾಡಿನ ವಿವಿಧ ಸಂಘ ಸಂಸ್ಥೆಗಳಿಂದ ಈಚೆಗೆ ಭಾರತ ರತ್ನ ಭೀಮಸೇನ ಜೋಶಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಹಾಗೂ ಸಂಗೀತ ನಮನ ಕಾರ್ಯಕ್ರಮವು ಹೃದಯ ಸ್ಪರ್ಶಿಯಾಗಿತ್ತು.ಇಲ್ಲಿನ ವಿಶ್ವ ಚೇತನ ಸಂಘದ ಚಾಲುಕ್ಯ ವಿನಾಪೋಟಿ ರಂಗವೇದಿಕೆಯಲ್ಲಿ ಗಾನ ಭೀಮನಿಗೆ ವೀರಪುಲಿಕೇಶಿ ವಿದ್ಯಾಸಂಸ್ಥೆಯ ಕಾರ್ಯಾಧ್ಯಕ್ಷ ಎ.ಸಿ.ಪಟ್ಟಣದ ಹಾಗೂ ಸರ್ಕಾರ, ಸರ್ಕಾರೇತರ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಬಾದಾಮಿ ನಗರದ ಜನತೆಯು ಭೀಮಸೇನ ಜೋಶಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

‘ಭೀಮಸೇನ ಜೋಶಿ ಅವರು ಬಾದಾಮಿ ನಗರದ ಅಳಿಯರು. ಚಿಕ್ಕವರಿದ್ದಾಗ ಇವರ ಭಾವ ಪುರುಷೋತ್ತಮ ಆಚಾರ್ಯ ಕಟ್ಟಿ ಅವರ ಮನೆಯಲ್ಲಿ ಇರುತ್ತಿದ್ದರು. ಇವರ
ಮೊದಲ ಪತ್ನಿಯ ಊರು ಬಾದಾಮಿ ಆಗಿತ್ತು. ಪಾಂಡುರಂಗ ಗುಡಿಯಲ್ಲಿ ಸಾಖರೆ ಹಾರ್ಮೋನಿಯಂ ಮಾಸ್ತರು ಭೀಮಸೇನ ಜೋಶಿ ಅವರಿಗೆ ಸಾಥ ನೀಡುತ್ತಿದ್ದರು’
ಎಂದು ಎ.ಸಿ.ಪಟ್ಟಣದ ತಾವು ಚಿಕ್ಕವರಿದ್ದಾಗ ಕಂಡ ಅನುಭವಗಳನ್ನು ಸ್ಮರಿಸಿದರು.

ದತ್ತಣ್ಣ ದೇಶಪಾಂಡೆ, ಹಾರ್ಮೋನಿಯಂ ವಾದಕ ಕೃಷ್ಣರಾವ್ ಕುಲಕರ್ಣಿ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಮಹಾಂತೇಶ ಮಮದಾಪೂರ ಇತರರು ಭೀಮಸೇನ ಜೋಶಿ ಅವರ ಸಂಗೀತ ಸಾಧನೆ ಕುರಿತು ಮಾತನಾಡಿದರು. ರಂಗಭೂಮಿ ಕಲಾವಿದ ಸಾಂತಪ್ಪ ಚವಡಿ, ತಬಲಾ ಕಲಾವಿದ ಬಸಪ್ಪ ಹಡಪದ ವೇದಿಕೆಯಲ್ಲಿದ್ದರು.ಸಂಗೀತ ಕಲಾವಿದ ಸಂತೋಷ ಗದ್ದನಕೇರಿ ಆರಂಭದಲ್ಲಿ ‘ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭ’ಎಂಬ ಗಣೇಶನ ಸ್ತ್ರೋತ್ರದೊಂದಿಗೆ ಗಾಯನ ಆರಂಭಿಸಿದರು.  

‘ತುಂಗಾ ತೀರದಿ ನಿಂತ ಸುಯತಿವರ, ಕರುಣಿಸೋ ರಂಗಾ ಕರುಣಿಸೋ, ಸದಾ ಎನ್ನ ಹೃದಯದಲ್ಲಿ, ಕಂಗಳಿದ್ಯಾತಕೋ ಕಾವೇರಿ ರಂಗನ ನೋಡದ, ಕಾಯೋ ಕರುಣಾನಿಧಿ, ಭಾಗ್ಯದ ಲಕ್ಷ್ಮೀ ಬಾರಮ್ಮ, ತೀರ್ಥ ವಿಠ್ಠಲ ಕ್ಷೇತ್ರ ವಿಠ್ಠಲ, ಮಾಝೆ ಮಾಹಿರೆ ಫಂಡರಿ’ ಎಂಬ ಪುರಂದರ ದಾಸರ ಹಾಗೂ ಮರಾಠಿ ಅಭಂಗ ಭಜನ ಭೀಮಸೇನ ಜೋಶಿ ಅವರು ಹಾಡಿದ ಹಾಡುಗಳನ್ನು ಸಂಗೀತ ರಸಿಕರು ಆಸ್ವಾದಿಸಿದರು.

ಪ್ರಸಾದ ಉಮರ್ಜಿ ಹಾಗೂ ವಿನಯ ಕುಲಕರ್ಣಿ ತಬಲಾ ಮತ್ತು ಹಾರ್ಮೋನಿಯಂನಲ್ಲಿ ರಾಘವೇಂದ್ರ ಗುರುನಾಯಕ ಹಾಗೂ ಪ್ರಸನ್ ತಾಳ ಸಾಥ್ ನೀಡಿದರು.ಕ.ಸಾ.ಪ.ಅಧ್ಯಕ್ಷ ವೆಂಕಟೇಶ ಇನಾಂದಾರ, ಸಿರಿಗಂಧ ಸಂಸ್ಕೃತಿ ಬಳಗದ ಅಧ್ಯಕ್ಷ ದಾಜೀ ಬಾ ಜಗದಾಳೆ, ಜಿಲ್ಲಾ ಕ.ಸಾ.ಪ. ಮಾಜಿ ಅಧ್ಯಕ್ಷ ಎ.ಎಂ. ಹಿರೇಮಠ, ಪೊಲೀಸ್ ಸಬ್
ಇನ್‌ಸ್ಪೆಕ್ಟರ್ ಧೂಳಖೇಡ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು, ಮಹಿಳೆಯರು ಹಾಗೂ ನಗರದ ಅಭಿಮಾನಿಗಳು ಹಾಜರಿದ್ದರು. ಇಷ್ಟಲಿಂಗ ಶಿರಸಿ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.