ADVERTISEMENT

ಗ್ರಾ.ಪಂ. ನೌಕರರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2013, 6:29 IST
Last Updated 13 ಡಿಸೆಂಬರ್ 2013, 6:29 IST

ಬಾಗಲಕೋಟೆ: ಕನಿಷ್ಠ ವೇತನ, ತುಟ್ಟಿ ಭತ್ಯೆ, ಸೇವಾ ಪುಸ್ತಕ, ಭವಿಷ್ಯ ನಿಧಿ, ಜನಶ್ರೀ ಯೋಜನೆ, ಬಡ್ತಿ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಹಿಂದೇಟು ಹಾಕುತ್ತಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಜಿಲ್ಲೆಯ ಗ್ರಾಮ ಪಂಚಾಯ್ತಿ ನೌಕರರು ಪ್ರತಿಭಟನೆ ನಡೆಸಿದರು.

ನವನಗರದ ಜಿಲ್ಲಾಡಳಿತ ಭವನದ ಮುಂಭಾಗ ಗುರುವಾರ ಪ್ರತಿಭಟನೆ ನಡೆಸಿದ ಜಿಲ್ಲೆಯ ಗ್ರಾಮ ಪಂಚಾಯ್ತಿ ನೌಕರರು, ತಮ್ಮ ಬೇಡಿಕೆಗಳನ್ನು ಸರ್ಕಾರ ತಕ್ಷಣ ಈಡೇರಿಸಬೇಕು ಎಂದು ಆಗ್ರಹಿಸಿದರು. ಬಹುತೇಕ ನೌಕರರಿಗೆ ಕನಿಷ್ಠ ವೇತನ ಹಾಗೂ ತುಟ್ಟಿ ಭತ್ಯೆ ಸಿಗುತ್ತಿಲ್ಲ. ರಾಜ್ಯ ಸರ್ಕಾರ ಆದೇಶ ಮಾಡಿದ್ದರೂ ಎಲ್ಲಾ ನೌಕರರಿಗೆ ಸೌಲಭ್ಯಗಳು ತಲುಪುತ್ತಿಲ್ಲ ಎಂದು ಆರೋಪಿಸಿದರು.

ನೌಕರರ ಖಾತೆಗೆ ವೇತನ ಜಮಾ ಮಾಡಬೇಕು ಎಂಬ ಆದೇಶ ನೀಡಿದ್ದರೂ ಸಮರ್ಪಕವಾಗಿ ಖಾತೆಗೆ ಹಣ ಜಮಾ ಮಾಡದೇ ಬೇರೆ ಕೆಲಸಕ್ಕೆ ಬಳಸಿಕೊಂಡಿರುವುದರಿಂದ ಸಮಯಕ್ಕೆ ಸರಿಯಾಗಿ ವೇತನ ಸಿಗದೇ ನೌಕರರು ಪರದಾಡುವಂತಾಗಿದೆ ಎಂದು ಗ್ರಾಮ ಪಂಚಾಯ್ತಿ ನೌಕರರು ತಮ್ಮ ನೋವು ತೋಡಿಕೊಂಡರು.

ಬಿಲ್‌ ಕಲೆಕ್ಟರ್ ವೃಂದದಿಂದ ಲೆಕ್ಕ ಸಹಾಯಕ ಹಾಗೂ ಕಾರ್ಯದರ್ಶಿ ಗ್ರೇಡ್-2 ಹುದ್ದೆಗೆ ಬಡ್ತಿ ನೀಡಿ ಆದೇಶ ಜಾರಿ ಮಾಡಬೇಕು, ಎಸ್ಎಸ್ಎಲ್ ಸಿ ಉತ್ತೀರ್ಣರಾಗಿ 5 ವರ್ಷ ಸೇವೆ ಸಲ್ಲಿಸಿದ ನೀರು ಗಂಟಿ ಹಾಗೂ ಸಿಪಾಯಿಗಳನ್ನು ಬಿಲ್ ಕಲೆಕ್ಟರ್ ಹುದ್ದೆಗೆ ಬಡ್ತಿ ನೀಡಬೇಕು. ತಾಲ್ಲೂಕು ಮಟ್ಟದ ಜ್ಯೇಷ್ಠತಾ ಪಟ್ಟಿ ತಯಾರಿಸಬೇಕು.

ತಾಲ್ಲೂಕಿನ ಇಒಗಳಿಗೆ ಇಪಿಎಫ್ ಖಾತೆ ಪ್ರಾರಂಭಿಸುವಂತೆ ನಿರ್ದೇಶಿಸಬೇಕು. ಕಂಪ್ಯೂಟರ್ ಅಪರೇಟರ್‌ಗಳನ್ನು ಗ್ರಾಮ ಪಂಚಾಯ್ತಿ ನೌಕರರೆಂದು ಪರಿಗಣಿಸಬೇಕು ಎಂಬ ಬೇಡಿಕೆಗಳಿರುವ ಮನವಿಯನ್ನು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸಲ್ಲಿಸಿದರು.

ಗ್ರಾಮ ಪಂಚಾಯಿ್ತ ನೌಕರರ ಸಂಘದ ಅಧ್ಯಕ್ಷ ಅಲ್ಲಾಬಕ್ಷ್‌ ಯಡಹಳ್ಳಿ, ಸಯ್ಯದ್ ಮುದ್ದಾಪುರ, ಮಂಜುನಾಥ ಬಡಿಗೇರ, ಮಹಾಂತೇಶ ಅಕ್ಕಿ, ಹಣಮಂತ ಭಜಂತ್ರಿ, ಡಿ.ಜೆ. ಹಿರೇಮಠ, ಎಂ.ಐ. ರಾಮದುರ್ಗ, ಎಂ.ಎ. ಕೆಂಪಾರ, ಹಣಮಂತ ಮಾಚಕನೂರ ಮತ್ತಿತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT