ಬಾಗಲಕೋಟೆ: ಜಮಖಂಡಿ ತಾಲ್ಲೂಕಿನ 55 ಹಳ್ಳಿಗಳಿಗೆ ಮತ್ತು ಐದು ಪಟ್ಟಣಗಳಿಗೆ ಬೇಸಿಗೆಯಲ್ಲಿ ಉಂಟಾಗುವ ಕುಡಿಯುವ ನೀರಿನ ಸಮಸ್ಯೆ ನಿವಾರಿಸುವ ಸಂಬಂಧ ಚಿಕ್ಕಪಡಸಲಗಿ ಬ್ಯಾರೇಜ್ ಎತ್ತರಿಸಲು ರೂ 10 ಕೋಟಿ ಮತ್ತು ಬಾಗಲಕೋಟೆಯಲ್ಲಿ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಸ್ಥಾಪನೆಗೆ ರೂ3 ಕೋಟಿ.
ಒಂದೇ ಸೂರಿನಡಿ ಎಲ್ಲ ಪ್ರವಾಸಿ ಸೇವೆಗಳನ್ನು ಒದಗಿಸಲು ವಿಶ್ವಪರಂಪರಾ ತಾಣವಾದ ಪಟ್ಟದಕಲ್ಲಿನಲ್ಲಿ ಪ್ರವಾಸಿ ಪ್ಲಾಜಾ ನಿರ್ಮಾಣ, ರಾಮತಾಳ ಏತನೀರಾವರಿ ಯೋಜನೆಗೆ ಹನಿ ಮತ್ತು ತುಂತುರು ನೀರಾವರಿ ವ್ಯವಸ್ಥೆ ಅಳವಡಿಕೆ.
ಆಲಮಟ್ಟಿ ಅಣೆಕಟ್ಟೆ ಎತ್ತರವನ್ನು 524.25 ಮೀಟರ್ಗೆ ಎತ್ತರಿಸುವುದರಿಂದ ಮುಳುಗಡೆಯಾಗುವ ಪ್ರದೇಶದ ಭೂಸ್ವಾಧೀನ, ಪುನರ್ವಸತಿ, ಪುನರ್ನಿರ್ಮಾಣ ಕಾಮಗಾರಿ ಚುರುಕುಗೊಳಿಸಲು ಮತ್ತು ಈ ಕಾಮಗಾರಿ ವ್ಯವಸ್ಥಿತವಾಗಿ ನಡೆಸಲು ಉನ್ನತಮಟ್ಟದ ಸಮಿತಿ ರಚನೆ.
ವಿಜಾಪುರ ಜಿಲ್ಲೆಯ ಕೃಷ್ಣಾ ಸೇತುವೆಯಿಂದ ಲೋಕಾಪುರ ರಸ್ತೆ ನಡುವೆ ಹಾಗೂ ಹುನಗುಂದದಿಂದ ಬೆಳಗಾವಿ ನಡುವಿನ ರಸ್ತೆಯಲ್ಲಿ ಟೋಲ್ಗೇಟ್ ನಿರ್ಮಾಣ.
ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಮಂಡಿಸಿರುವ ರಾಜ್ಯ ಬಜೆಟ್ನಲ್ಲಿ ಬಾಗಲಕೋಟೆ ಜಿಲ್ಲೆಗೆ ಪ್ರಮುಖವಾಗಿ ನೀಡಿರುವ ಕೊಡುಗೆಗಳಾಗಿವೆ.
ರಾಜ್ಯ ಬಜೆಟ್ ಕುರಿತು ಜಿಲ್ಲೆಯ ಜನಪ್ರತಿನಿಧಿಗಳು, ರಾಜಕೀಯ ಮುಖಂಡರು ಮತ್ತು ತಜ್ಞರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
`ಟೀಕಿಸದೇ ಒಪ್ಪವ ಬಜೆಟ್'
`ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ ಬಜೆಟ್ ಯಾರೂ ಟೀಕಿಸಲು ಸಾಧ್ಯವಿಲ್ಲದ ಮತ್ತು ಎಲ್ಲರೂ ಒಪ್ಪ ಬಹುದಾದ ಬಜೆಟ್ ಆಗಿದೆ. ಈ ಹಿಂದೆ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿರುವಂತೆ ನೀರಾವರಿಗೆ ಆದ್ಯತೆ ನೀಡಲಾಗಿದೆ. ಎಲ್ಲ ವಲಯ ಮತ್ತು ಸಮಾಜದ ಎಲ್ಲ ವರ್ಗಕ್ಕೂ ಆದ್ಯತೆ ನೀಡಲಾಗಿದೆ. ಬಾಗಲಕೋಟೆಗೆ ಪ್ರಾದೇಶಿಕ ಉಪ ವಿಜ್ಞಾನ ಕೇಂದ್ರ ನೀಡಿರುವುದು ಸ್ವಾಗತಾರ್ಹವಾದುದು'
-ಎಚ್.ವೈ.ಮೇಟಿ, ಶಾಸಕರು, ಬಾಗಲಕೋಟೆ
`ಜಿದ್ದಿನ ಬಜೆಟ್'
`ಈ ಬಜೆಟ್ಗೆ ಪ್ರತಿಕ್ರಿಯೆ ಕೊಡುವ ಅರ್ಹತೆ ಇಲ್ಲ. ಸಿದ್ದರಾಮಯ್ಯ ಅವರು ಜಿದ್ದಿಗೆ ಬಿದ್ದು ಬಜೆಟ್ ಮಂಡಿಸಿದ್ದಾರೆ. ಈ ಹಿಂದೆ ಜಗದೀಶ್ ಶೆಟ್ಟರ್ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಿದ್ದರು. ಈ ಹಿನ್ನೆಲೆಯಲ್ಲಿ ಹೊಸ ಬಜೆಟ್ ಮಂಡಿಸುವ ಅಗತ್ಯವಿರಲಿಲ್ಲ. ಬಜೆಟ್ನಲ್ಲಿ ಜನಪರವಾದ ಯಾವುದೇ ಯೋಜನೆಗಳಿಲ್ಲ'
-ನಾರಾಯಣಸಾ ಭಾಂಡಗೆ, ಎಂಎಲ್ಸಿ, ಬಿಜೆಪಿ
`ರಸ್ತೆ ತೆರಿಗೆ ಹೊರೆ'
`ವಿಜಾಪುರದ ಕೃಷ್ಣಾ ಸೇತುವೆಯಿಂದ ಲೋಕಾಪುರ ರಸ್ತೆ ನಡುವೆ ಹಾಗೂ ಹುನಗುಂದದಿಂದ ಬೆಳಗಾವಿ ನಡುವಿನ ರಸ್ತೆಯಲ್ಲಿ ಟೋಲ್ಗೇಟ್ ನಿರ್ಮಾಣ ಮಾಡುವುದಾಗಿ ಹೇಳಿರುವುದು ಈ ಭಾಗದ ಜನರಿಗೆ ಹೊರೆಯಾಗಲಿದೆ'
`ಮುಂದಿನ ಐದು ವರ್ಷದ ದೂರದೃಷ್ಟಿ ಇಟ್ಟುಕೊಂಡು ಸಿದ್ದರಾಮಯ್ಯ ಬಜೆಟ್ ಮಂಡಿಸುತ್ತಾರೆ. ರಾಜ್ಯವನ್ನು ಹೊಸ ದಿಕ್ಕಿನತ್ತ ಕೊಂಡೊಯ್ಯತ್ತಾರೆ ಎಂಬ ನಿರೀಕ್ಷೆ ಹುಸಿಯಾಗಿದೆ. ಪರಿಪೂರ್ಣವಲ್ಲದ ಬಜೆಟ್ ಇದಾಗಿದೆ. ಸೋಲಾರ್ ವಿದ್ಯುತ್ ಮತ್ತು ವಿದ್ಯುತ್ ಉತ್ಪಾದನೆಗೆ ಹೆಚ್ಚು ಆದ್ಯತೆ ನೀಡಿಲ್ಲ. ಆದರೂ, ಬಾಗಲಕೋಟೆಯಲ್ಲಿ ವಿಜ್ಞಾನ ಉಪಕೇಂದ್ರ ಸ್ಥಾಪನೆ, ನೀರಾವರಿಗೆ ರೂ 90363 ಕೋಟಿ ಮೀಸಲಿಟ್ಟಿರುವುದು ಸ್ವಾಗತಾರ್ಹವಾದುದು'
-ಡಾ.ಎಂ.ಪಿ.ನಾಡಗೌಡ, ರಾಜ್ಯ ಘಟಕದ ಅಧ್ಯಕ್ಷರು, ಜೆಡಿಯು
`ಸ್ವಾಗತಾರ್ಹ ಬಜೆಟ್'
`ನೀರಾವರಿ, ಕೃಷಿ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಬಜೆಟ್ನಲ್ಲಿ ಸಿದ್ದರಾಮಯ್ಯ ಆದ್ಯತೆ ನೀಡಿದ್ದಾರೆ. ರಾಜ್ಯದ ಬೆಳವಣಿಗೆಗೆ ಪೂರಕವಾದ ಸ್ವಾಗತಾರ್ಹ ಬಜೆಟ್ ಇದಾಗಿದೆ. ಪ್ರತಿ ಗ್ರಾಮಕ್ಕೂ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವುದಾಗಿ ಹೇಳಿರುವುದು ಉತ್ತಮ'
-ಡಾ.ದೇವರಾಜ ಪಾಟೀಲ, ಮಕ್ಕಳ ತಜ್ಞ, ಬಾಗಲಕೋಟೆ
`ಶ್ರೀಸಾಮಾನ್ಯರ ಪರವಾದ ಬಜೆಟ್'
`ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ ಬಜೆಟ್ ಶ್ರೀಸಾಮಾನ್ಯರ ಪರವಾಗಿದೆ. ಡೀಸೆಲ್ ಮೇಲಿನ ತೆರಿಗೆ ಕಡಿತಗೊಳಿಸಿರುವುದು, ಕೃಷಿ ಬೆಲೆ ಆಯೋಗ ರಚನೆ ಮಾಡಿರುವುದು, ನೀರಾವರಿ ಯೋಜನೆಗೆ ರೂ10 ಸಾವಿರ ಕೋಟಿ ಮೀಸಲಿಟ್ಟಿರುವುದು ಸ್ವಾಗತಾರ್ಹ'
-ಎಂ.ಬಿ.ಸೌದಾಗರ, ಅಧ್ಯಕ್ಷ, ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್ ಘಟಕ.
`ಇದು ಯಾವ ಲೆಕ್ಕ?'
`ವಸತಿ ಯೋಜನೆಯಡಿ ವರ್ಷಕ್ಕೆ 3 ಲಕ್ಷ ಮನೆ ನಿರ್ಮಿಸುವುದಾಗಿ ಬಜೆಟ್ನಲ್ಲಿ ಘೋಷಿಸಲಾಗಿದೆ. ಆದರೆ, ಕೇವಲ ರೂ1300 ಕೋಟಿ ಮಾತ್ರ ಹಣ ಮೀಸಲಿಡಲಾಗಿದೆ. ಇದು ಯಾವ ಲೆಕ್ಕ ಎಂದು ತಿಳಿಯುತ್ತಿಲ್ಲ. ಇದೊಂದು ಅವೈಜ್ಞಾನಿಕ ಘೋಷಣೆಯಾಗಿದೆ. ವಸತಿ ಯೋಜನೆಗೆ ಹೆಚ್ಚಿನ ಅನುದಾನ ನೀಡಬೇಕಿತ್ತು'
`ಹೊಸ ಕೆರೆಗಳ ನಿರ್ಮಾಣ ಮಾಡುವುದಾಗಿ ಘೋಷಿಸಿದ್ದಾರೆ. ಹೊಸ ಕೆರೆಗಳ ನಿರ್ಮಾಣದ ಬದಲು ಇರುವ ಕೆರೆಗಳನ್ನು ರಕ್ಷಣೆ ಮಾಡಿದರೆ ಒಳಿತು'
-ನಾಗರಾಜ ಹೊಂಗಲ್, ಸಾಮಾಜಿಕ ಕಾರ್ಯಕರ್ತ, ಇಳಕಲ್
ಚುನಾವಣೆ ಕೇಂದ್ರಿತ ಬಜೆಟ್
`ಮುಂಬರುವ ಲೋಕಸಭೆ ಚುನಾವಣೆ ಕೇಂದ್ರೀಕರಿಸಿ ಬಜೆಟ್ ಮಂಡಿಸಲಾಗಿದೆ.'
`ಹಿಂದಿನ ಸರ್ಕಾರ ಮಠ- ಮಾನ್ಯಗಳಿಗೆ ನೀಡುತ್ತಿದ್ದ ಅನುದಾನವನ್ನು ತಡೆ ಹಿಡಿದಿರುವುದು ಸರಿಯಾದ ಕ್ರಮವಲ್ಲ. 15 ಸರ್ಕಾರಿ ಮಹಿಳಾ ಕಾಲೇಜು ಸ್ಥಾಪನೆ ಸ್ವಾಗತಾರ್ಹವಾದುದು'
-ಪ್ರೊ. ಅಳ್ಳಗಿ, ಆರ್ಥಿಕ ತಜ್ಞರು, ಬಾಗಲಕೋಟೆ
`ನಿರೀಕ್ಷೆ ಹುಸಿಯಾಗಿದೆ'
`ಆಲಮಟ್ಟಿ ಹಿನ್ನೀರಿನಲ್ಲಿ ಮುಳುಗಡೆಯಾಗುವ ಬಾಗಲಕೋಟೆ ನಗರದ ಪೂರ್ಣ ಸ್ಥಳಾಂತರ ಸಂಬಂಧ ಬಜೆಟ್ನಲ್ಲಿ ಪ್ಯಾಕೇಜ್ ನೀಡಲಿದ್ದಾರೆ ಎಂಬ ನಿರೀಕ್ಷೆ ಹುಸಿಯಾಗಿದೆ.'
`ವಿಶ್ವಪ್ರಸಿದ್ಧ ಪ್ರವಾಸಿ ತಾಣವಾದ ಬಾದಾಮಿಯ ಅಭಿವೃದ್ಧಿಗೆ ಯಾವುದೇ ಆದ್ಯತೆ ನೀಡದಿರುವುದು ನಿಜವಾಗಿಯೂ ಈ ಭಾಗದ ಜನತೆಗೆ ನಿರಾಶೆ ಮೂಡಿಸಿದೆ'
-ಘನಶ್ಯಾಂ ಭಾಂಡಗೆ, ಜೆಡಿಎಸ್ ಮುಖಂಡ, ಬಾಗಲಕೋಟೆ
`ನಿರಾಶದಾಯಕ ಬಜೆಟ್'
`ಮುಖ್ಯಮಂತ್ರಿಗಳು ಮಂಡಿಸಿರುವ ರಾಜ್ಯದ ಬಜೆಟ್ ಸಂಪೂರ್ಣ ನಿರಾಶಾದಾಯಕವಾಗಿದೆ. ವಿಶೇಷವಾಗಿ ಉತ್ತರ ಕರ್ನಾಟಕದ ಜನತೆಯ ಯಾವುದೇ ಆಶೋತ್ತರಗಳಿಗೆ ಸ್ಪಂದಿಸುವ ಪ್ರಯತ್ನ ಮಾಡಿಲ್ಲ'
`ಕೃಷ್ಣಾ ಮೇಲ್ದಂಡೆ ಯೋಜನೆಗೆ ನಿರೀಕ್ಷಿತ ಅನುದಾನವನ್ನು ಸಹ ಪ್ರಕಟಿಸಿಲ್ಲ ಹಾಗೂ ಯಾವುದೇ ಹೊಸ ಯೋಜನೆಗಳನ್ನು ಉತ್ತರ ಕರ್ನಾಟಕಕ್ಕೆ ನೀಡಿಲ್ಲ'
`ಬಿಜೆಪಿ ಸರ್ಕಾರವು ಘೋಷಿಸಿದ ಹೊಸ ತಾಲ್ಲೂಕುಗಳನ್ನು ಬಜೆಟ್ನಲ್ಲಿ ಪ್ರಸ್ತಾಪಿಸದೆ. ಅಲ್ಲಿನ ಜನತೆಯನ್ನು ನಿರಾಶೆಗೊಳಿಸಿದೆ'
`ಕೈಗಾರಿಕಾ ಅಭಿವೃದ್ಧಿಗೂ ಸಹ ವಿಶೇಷ ಒತ್ತು ನೀಡುವ ಯಾವುದೇ ಪ್ರಸ್ತಾವನೆ ಇಲ್ಲ. ಇದರಿಂದಾಗಿ ರಾಜ್ಯದಲ್ಲಿ 5 ವರ್ಷಗಳ ಕಾಲ ಆಗಿರುವ ಕೈಗಾರಿಕಾ ಅಭಿವೃದ್ಧಿಗೆ ತೀವ್ರ ಹಿನ್ನಡೆಯಾದಂತಾಗಿದೆ'
`ಮುಂದಿನ ಲೋಕಸಭಾ ಚುನಾವಣೆ ದೃಷ್ಟಿಯಿಂದ ಕೆಲವು ಹೊಸ ಯೋಜನೆಗಳನ್ನು ಪ್ರಕಟಿಸಲಾಗಿದೆ ವಿನಃ ಅವುಗಳಲ್ಲಿ ನಿಜವಾದ ಜನಪರ ಕಾಳಜಿಯಿಲ್ಲವೆಂಬುದು ವ್ಯಕ್ತವಾಗುತ್ತದೆ'
-ಮುರುಗೇಶ್ ಆರ್ ನಿರಾಣಿ, ಮಾಜಿ ಸಚಿವರು, ಬೀಳಗಿ
`ಬ್ಯಾರೇಜ್ ಎತ್ತರ ಸ್ವಾಗತಾರ್ಹ'
`ಜಮಖಂಡಿ ತಾಲ್ಲೂಕಿನ ಚಿಕ್ಕಪಡಸಲಗಿ ಹತ್ತಿರ ಕೃಷ್ಣಾ ನದಿಗೆ ರೈತರು ನಿರ್ಮಿಸಿರುವ ಬ್ಯಾರೇಜ್ ಎತ್ತರವನ್ನು ಹೆಚ್ಚಿಸಲು ಪ್ರಸಕ್ತ ಬಜೆಟ್ನಲ್ಲಿ ರೂ10 ಕೋಟಿ ನೀಡಿರಿವುದು ಸ್ವಾಗತಾರ್ಹ'
`ಬ್ಯಾರೇಜ್ ಎತ್ತರ ಹೆಚ್ಚಿಸುವುದರಿಂದ ಜಮಖಂಡಿ ತಾಲ್ಲೂಕಿನ ನದಿ ತೀರದ ಗ್ರಾಮಗಳು ಹಾಗೂ ಕುಡಿಯುವ ನೀರಿಗಾಗಿ ಕೃಷ್ಣಾ ನದಿಯನ್ನೆ ಅವಲಂಬಿಸಿರುವ ನಗರಗಳು ನಿರಾಳವಾಗಲಿವೆ. ರೈತರ ಗೋಳು ಶಾಶ್ವತವಾಗಿ ಪರಿಹಾರವಾಗಲಿದೆ.'
`ಬ್ಯಾರೇಜ್ ಎತ್ತರ ಹೆಚ್ಚಿಸುವ ನಿರ್ಧಾರ ಪ್ರಕಟಿಸಿ, ಅದಕ್ಕೆ ಹಣ ಒದಗಿಸಿದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅದಕ್ಕಾಗಿ ಶ್ರಮಿಸಿದ ಶಾಸಕ ಸಿದ್ದು ನ್ಯಾಮಗೌಡ ಅವರಿಗೆ ಅಭಿನಂದನೆಗಳು'
-ರವಿ ಯಡಹಳ್ಳಿ, ಅಧ್ಯಕ್ಷರು, ಬಸವ ಕೇಂದ್ರ, ಜಮಖಂಡಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.