ಬಾಗಲಕೋಟೆ: ‘ನವೆಂಬರ್ 10ರಂದು ಸರ್ಕಾರಿ ಕಾರ್ಯಕ್ರಮವಾಗಿ ಟಿಪ್ಪು ಜಯಂತಿ ಆಚರಣೆಯನ್ನು ಶ್ರೀರಾಮಸೇನೆ ಬಲವಾಗಿ ವಿರೋಧಿಸಲಿದೆ’ ಎಂದು ಅದರ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಶನಿವಾರ ಇಲ್ಲಿ ಹೇಳಿದರು.
‘ಕಾಂಗ್ರೆಸ್ ಸರ್ಕಾರ ಕೇವಲ ಮುಸ್ಲಿಮರ ಮತಕ್ಕಾಗಿ ಕನ್ನಡ ದ್ರೋಹಿ, ಹಿಂದೂ ವಿರೋಧಿಯಾಗಿದ್ದ ಟಿಪ್ಪು ಸುಲ್ತಾನನ ಚರಿತ್ರೆಯನ್ನು ತಿರುಚಿ, ವೈಭವೀಕರಿಸಿ ಆತನ ಜಯಂತಿ ಆಚರಣೆಗೆ ಮುಂದಾಗಿದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
‘ಟಿಪ್ಪು, ಅರೇಬಿಕ್ ಭಾಷೆಯನ್ನು ಆಡಳಿತ ಭಾಷೆಯನ್ನಾಗಿಸಿ, ಕೊಡಗು ಜಿಲ್ಲೆಯಲ್ಲಿ 10 ಸಾವಿರ ಹಿಂದೂಗಳನ್ನು ಮತಾಂತರ ಮಾಡಿದ್ದಾನೆ. ಕೇರಳದಲ್ಲಿ 300ಕ್ಕೂ ಹೆಚ್ಚು ದೇವಸ್ಥಾನಗಳನ್ನು ಒಡೆದು ಹಾಕಿದ್ದು, ಮೈಸೂರು ಮಹಾರಾಜರನ್ನು ಅವಮಾನಿಸಿ ಬಂಧನದಲ್ಲಿ ಇಟ್ಟಿದ್ದ. ಈ ಎಲ್ಲಾ ಸಂಗತಿಗಳನ್ನು ಒಳಗೊಂಡಿರುವ ಕಿರುಪುಸ್ತಕವನ್ನು ರಾಜ್ಯದಾದ್ಯಂತ ಹಂಚಲಾಗುವುದು’ ಎಂದು ಹೇಳಿದರು.
‘ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಟಿಪ್ಪು ಜಯಂತಿ ಆಚರಣೆ ರದ್ದು ಮಾಡುವುದಾಗಿ ಸಂಸದ ಪ್ರಹ್ಲಾದ ಜೋಶಿ ಹೇಳಿರುವುದು ಸ್ವಾಗತಾರ್ಹ. ಅದೇ ರೀತಿ ರಾಜ್ಯದ ವಿವಿಧೆಡೆ ರಸ್ತೆ ಹಾಗೂ ವೃತ್ತಗಳಿಗೆ ಇಟ್ಟಿರುವ ಟಿಪ್ಪು ಹೆಸರನ್ನು ತೆಗೆದುಹಾಕಬೇಕು’ ಎಂದು ಆಗ್ರಹಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.